ಆ್ಯಪ್ನಗರ

ಕಂಬಿ ಎಣಿಸುವಂತೆ ಮಾಡ್ತು ಕಮೀಷನ್ ಆಸೆ..! 1 ಕೋಟಿ ರೂ. ಎಟಿಎಂ ಹಣ ಕದ್ದವರು ಅಂದರ್..

ಎಟಿಎಂಗೆ ತುಂಬಬೇಕಿದ್ದ ಹಣ ಲಪಟಾಯಿಸಿದ ಆರೋಪದ ಮೇಲೆ, ಅಶೋಕ್‌, ಶ್ರೀನಿವಾಸ್‌ ಮತ್ತು ಸಂತೋಷ್ ಎಂಬುವರನ್ನು‌ ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ರಾಮುಗಾಗಿ ಹುಡುಕಾಟ ಮುಂದುವರಿದಿದೆ.

Vijaya Karnataka Web 18 May 2020, 10:20 pm
ಬೆಂಗಳೂರು: ಎಟಿಎಂಗೆ ತುಂಬಬೇಕಿದ್ದ ಒಂದು ಕೋಟಿ ರೂಪಾಯಿ ಲಪಟಾಯಿಸಿದ್ದ ಮೂವರನ್ನು ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕಬ್ಬನ್‌ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಮೇ 14 ರಂದು ಘಟನೆ ನಡೆದಿತ್ತು. ಸೆಕ್ಯೂರ್‌ ವ್ಯಾಲ್ಯೂ ಇಂಡಿಯಾ ಕಂಪನಿಯ ನೌಕರ ಅಶೋಕ್‌ ಎಟಿಎಂ ಹಣ ಲಪಟಾಯಿಸಿರುವ ಬಗ್ಗೆ ದೂರು ದಾಖಲಾಗಿತ್ತು.
Vijaya Karnataka Web atm money theft by employees for commission and arrested by bengaluru police
ಕಂಬಿ ಎಣಿಸುವಂತೆ ಮಾಡ್ತು ಕಮೀಷನ್ ಆಸೆ..! 1 ಕೋಟಿ ರೂ. ಎಟಿಎಂ ಹಣ ಕದ್ದವರು ಅಂದರ್..


ಈ ಸಂಬಂಧ ತನಿಖೆಗೆ ಮುಂದಾದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅಶೋಕ್‌, ಶ್ರೀನಿವಾಸ್‌ ಮತ್ತು ಸಂತೋಷ್‌ ಪೊಲೀಸರ ಬಲೆಗೆ ಬಿದ್ದಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ರಾಮುಗಾಗಿ ಹುಡುಕಾಟ ಮುಂದುವರಿದಿದೆ. ಇವರಲ್ಲಿ ಸಂತೋಷ್‌ ಹೊರತುಪಡಿಸಿ ಉಳಿದ ಮೂವರು ಸೆಕ್ಯೂರ್‌ ವ್ಯಾಲ್ಯೂ ಕಂಪನಿಯ ಸಿಬ್ಬಂದಿಯೇ ಆಗಿದ್ದಾರೆ.

​ಎಟಿಎಂಗೆ ತುಂಬುವಾಗಲೇ ಹಣ ಲೂಟಿ..!

ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬಂದು ಎಟಿಎಂಗೆ ತುಂಬಿಸುವ ಜವಾಬ್ದಾರಿ ಆರೋಪಿ ಅಶೋಕ್‌ನದಾಗಿತ್ತು. ಮೇ 14 ರಂದು ಆರೋಪಿ ಅಶೋಕ್‌ ಸಹೋದ್ಯೋಗಿಗಳಾದ ರಾಮು, ಶ್ರೀನಿವಾಸ್‌ ಜೊತೆಗೆ ಎಟಿಎಂ ಯಂತ್ರಗಳಿಗೆ ಹಣ ತುಂಬಿಸಲು ಹೋಗಿದ್ದರು. ಸೇಂಟ್‌ ಮಾರ್ಕ್ಸ್‌ ರಸ್ತೆಯ ಎಸ್‌ಬಿಐನಿಂದ 4.5 ಕೋಟಿ ಹಣ ಡ್ರಾ ಮಾಡಿದ್ದ ಆರೋಪಿ, ಬಳಿಕ ಎಟಿಎಂಗೆ ಹಣ ತುಂಬುವಾಗ ಒಂದು ಕೋಟಿ ರೂಪಾಯಿ ಲಪಟಾಯಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

​ಕಮಿಷನ್‌ ಆಸೆಗೆ ಬಲಿ

ಪೊಲೀಸರ ಬಲೆಗೆ ಬಿದ್ದಿರುವ ಅಶೋಕ್‌ ಮತ್ತು ಶ್ರೀನಿವಾಸ್‌ಗೆ ಹಣ ಲಪಟಾಯಿಸುವ ಉದ್ದೇಶ ಇರಲಿಲ್ಲ. ಕೇವಲ ಕಮಿಷನ್‌ ಆಸೆಗೆ ಬಿದ್ದು ವಂಚನೆಗೆ ಒಳಗಾಗಿದ್ದಾರೆ. ಸಂತೋಷ್‌ ಎಂಬಾತ ತನಗೆ ಒಂದು ಕೋಟಿ ರೂ. ನೀಡಿದರೆ ಒಂದು ಗಂಟೆಯಲ್ಲಿ 10 ಲಕ್ಷ ರೂ. ಸೇರಿಸಿ ಒಂದು ಕೋಟಿ 10 ಲಕ್ಷ ರೂಪಾಯಿ ಕೊಡುವುದಾಗಿ ಪುಸಲಾಯಿಸಿದ್ದ. ಈ 10 ಲಕ್ಷ ರೂ. ಕಮಿಷನ್‌ ಆಸೆಗೆ ಬಿದ್ದ ಆರೋಪಿಗಳು ಸಂತೋಷ್‌ ಕೈಗೆ ಕೋಟಿ ರೂ. ಕೊಟ್ಟಿದ್ದರು. ಹಣ ಕೈ ಸೇರಿದ ಬಳಿಕ ಆರೋಪಿ ಸಂತೋಷ್‌ ಪರಾರಿಯಾದ. ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡ. ಅರ್ಧ ದಿನ ಆದರೂ ಸಂತೋಷ್‌ ಪತ್ತೆಯಾಗಲಿಲ್ಲ. ಬಳಿಕ ಕಂಪನಿ ಕಬ್ಬನ್‌ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

​ಮರುದಿನವೇ ಬಂಧನ

ದೂರಿನ ಆಧಾರದಲ್ಲಿ ತನಿಖೆಗೆ ಇಳಿದ ಪೊಲೀಸರು ದೂರವಾಣಿ ಕರೆ ಆಧರಿಸಿ ಸಂತೋಷ್‌ನನ್ನು ಬಂಧಿಸಿ, ಒಂದು ಕೋಟಿ ರೂಪಾಯಿ ಜಪ್ತಿ ಮಾಡಿದ್ದಾರೆ. ವಶಕ್ಕೆ ಪಡೆದಿರುವ ಆರೋಪಿ ಬಗ್ಗೆ ವಿಚಾರಣೆ ನಡೆದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

​ರಾಮುಗಾಗಿ ಶೋಧ

ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ಮೊದಲು ಅಶೋಕ್‌ ಮತ್ತು ಶ್ರೀನಿವಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಮಿಷನ್‌ ಕತೆ ಬಾಯಿ ಬಿಟ್ಟಿದ್ದ. ಸದ್ಯ ಮತ್ತೊಬ್ಬ ಆರೋಪಿ ರಾಮು ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ