ಆ್ಯಪ್ನಗರ

ರದ್ದಾಗಿರುವ ನೋಟು ದೋಚಿದ್ದು ಅಸಲಿ ಪೊಲೀಸರು

ರೇಸ್ ಕೋರ್ಸ್ ರಸ್ತೆಯಲ್ಲಿ ಪೊಲೀಸರ ಸೋಗಿನಲ್ಲಿ 1 ಕೋಟಿ ರೂ. ರದ್ದಾದ ನೋಟು ‌ಲೂಟಿ ಮಾಡಿದವರು ಅಸಲಿ ಪೊಲೀಸರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

Vijaya Karnataka Web 1 Dec 2017, 12:42 pm
ಬೆಂಗಳೂರು: ರೇಸ್ ಕೋರ್ಸ್ ರಸ್ತೆಯಲ್ಲಿ ಪೊಲೀಸರ ಸೋಗಿನಲ್ಲಿ 1 ಕೋಟಿ ರೂ. ರದ್ದಾದ ನೋಟು ‌ಲೂಟಿ ಮಾಡಿದವರು ಅಸಲಿ ಪೊಲೀಸರು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಈ ಬಗ್ಗೆ ತನಿಖೆಗೆ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತನಿಖೆಗೆ ಆದೇಶಿಸಿದ್ದಾರೆ.
Vijaya Karnataka Web banned notes theft by police
ರದ್ದಾಗಿರುವ ನೋಟು ದೋಚಿದ್ದು ಅಸಲಿ ಪೊಲೀಸರು


ರದ್ದಾಗಿರುವ ಐನೂರು ಹಾಗೂ 1 ಸಾವಿರ ರೂ. ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಲು ಬಂದವರನ್ನು ಪೊಲೀಸರ ಸೋಗಿನಲ್ಲಿ ಬೆದರಿಸಿದ ದುಷ್ಕರ್ಮಿಗಳು 1 ಕೋಟಿ ರೂ. ಹಳೆ ನೋಟು ದೋಚಿದ್ದರು. ಆದರೆ ಈಗ ದೋಚಿದವರು ಅಸಲಿ ಪೊಲೀಸರು ಎಂಬುದು ಬಯಲಾಗಿದೆ.

ಹಳೆ ನೋಟು ದೋಚಿರುವ ಬಗ್ಗೆ ಬಿಎಂಟಿಸಿ ಬಸ್‌ನ ನಿರ್ವಾಹಕ ಸುಬ್ಬಣ್ಣ ಎಂಬುವರು ಶೇಷಾದ್ರಿಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ವಿಜಯನಗರದ ಸುಬ್ಬಣ್ಣ ಎಂಬುವರು ಮನೆ ಖರೀದಿಗಾಗಿ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದರು. ಮಾಸಿಕ ಸಾಲ ಮರು ಪಾವತಿ ಮಾಡಲು ಸಾಧ್ಯವಾಗದ ಕಾರಣ ಬ್ಯಾಂಕ್‌ನಿಂದ ಮನೆ ಹರಾಜು ಮಾಡುವ ಕುರಿತು ಸುಬ್ಬಣ್ಣ ಅವರಿಗೆ ನೋಟಿಸ್‌ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಸಹಾಯ ಕೋರಿ ಪರಿಚಿತರಾಗಿರುವ ರಿಯಲ್‌ ಎಸ್ಟೇಟ್‌ ಏಟೆಂಟ್‌ ಸತ್ಯನಾರಾಯಣ ಎಂಬುವರ ಬಳಿ ಹೋಗಿದ್ದರು. ಈ ವೇಳೆ ಆತ, 'ರದ್ದಾದ ನೋಟು ಹೊಂದಿರುವ ವ್ಯಕ್ತಿಗಳು ಇದ್ದರೆ ತಿಳಿಸು. ಅವುಗಳನ್ನು ಹೊಸ ನೋಟಿಗೆ ಬದಲಾವಣೆ ಮಾಡಿಕೊಡುತ್ತೇನೆ. ಅದರಲ್ಲಿ ನಿನಗೂ ಕಮಿಷನ್‌ ಕೊಡಿಸುತ್ತೇನೆ' ಎಂದು ತಿಳಿಸಿದ್ದ. ಇದಕ್ಕೆ ಒಪ್ಪಿದ ಸುಬ್ಬಣ್ಣ, ತನಗೆ ಪರಿಚಯ ಇರುವ ರತ್ನ ಎಂಬುವರಿಗೆ ವಿಷಯ ತಿಳಿಸಿದ್ದರು. ಅವರು ತನ್ನ ಸ್ನೇಹಿತೆ ರಾಗಿಣಿ ಎಂಬುವರ ಬಳಿ ರದ್ದಾದ ನೋಟು ಇವೆ ಎಂದು ಹೇಳಿದ್ದರು. ಬಳಿಕ ಎಲ್ಲರೂ ಸೇರಿ ಹಳೆ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದರು.

ನ.25ರಂದು ಸುಬ್ಬಣ್ಣ, ಸತ್ಯನಾರಾಯಣ, ರಾಗಿಣಿ ಹಾಗೂ ರತ್ನ ರದ್ದಾದ ನೋಟುಗಳ ರೂಪದಲ್ಲಿದ್ದ 1 ಕೋಟಿ ರೂ. ತೆಗೆದುಕೊಂಡು ಬಿಟಿಎಂ ಲೇಔಟ್‌ಗೆ ಹೋಗಿದ್ದರು. ಅಲ್ಲಿ ನೋಟುಗಳ ಬದಲಾವಣೆ ಬರುವವರಿಗಾಗಿ ಕಾದಿದ್ದರು. ಅಲ್ಲಿಗೆ ಬಂದ ವೆಂಕಟೇಶ್‌ ಎಂಬಾತ, 'ನಾನು ನೋಟು ಬದಲಾವಣೆ ಮಾಡಿಕೊಡುತ್ತೇನೆ. ರೇಸ್‌ಕೋರ್ಸ್‌ ರಸ್ತೆಗೆ ಬನ್ನಿ' ಎಂದು ತಿಳಿಸಿದ್ದ. ಅದರಂತೆ ಸುಬ್ಬಣ್ಣ ಹಾಗೂ ಇತರರು ನೋಟು ತೆಗೆದುಕೊಂಡು ರಾತ್ರಿ 8 ಗಂಟೆಗೆ ರೇಸ್‌ಕೋರ್ಸ್‌ ರಸ್ತೆಯಲ್ಲಿ ನಿಂತಿದ್ದರು.

ಆಗ ರೇಸ್‌ಕೋರ್ಸ್‌ ರಸ್ತೆಗೆ ಬಂದ ಮೂವರು ಅಪರಿಚಿತರು, ತಾವು ಶೇಷಾದ್ರಿಪುರ ಪೊಲೀಸರು ಎಂದು ಹೇಳಿ ಹಳೆ ನೋಟು ಇದ್ದ ಬ್ಯಾಗ್‌ ಕಿತ್ತುಕೊಂಡು ಪರಾರಿಯಾಗಿದ್ದರು. ಅನುಮಾನಗೊಂಡ ನಾಲ್ವರು ಶೇಷಾದ್ರಿಪುರ ಠಾಣೆಗೆ ತೆರಳಿ ವಿಚಾರಿಸಿದಾಗ ಅಂತವರು ಯಾರು ಬಂದಿಲ್ಲ ಎಂದು ತಿಳಿಸಿದ್ದಾರೆ.

ತಮ್ಮಿಂದ ಹಣ ಕಿತ್ತುಕೊಂಡು ಹೋದವರು ನಕಲಿ ಪೊಲೀಸರು ಎಂದು ತಿಳಿದ ಸುಬ್ಬಣ್ಣ, ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಳೇ ನೋಟು ತಂದಿದ್ದ ರಾಗಿಣಿ, ರತ್ನ ಹಾಗೂ ನೋಟು ಬದಲಾವಣೆಗೆ ಬಂದಿದ್ದ ವೆಂಕಟೇಶ್‌, ಸತ್ಯನಾರಾಯಣ, ಚಂದ್ರಶೇಖರ್‌ ಮತ್ತು ವಿಷ್ಣು ಎಂಬುವರ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ