ಆ್ಯಪ್ನಗರ

ಬಿಎಸ್‌ಎನ್‌ಎಲ್‌ ಟವರ್‌ ಮುಟ್ಟಿ ಸಿಕ್ಕಿಬಿದ್ದ ಎಂಬಿಎ ಪದವೀಧರ ಬ್ಯಾಟರಿ ಕಳ್ಳರು!

ಎಂಬಿಎ ಪದವೀದರನಾಗಿದ್ದ ದಿನಕರನ್‌ ಎಂಎನ್‌ಸಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರೂ, ಅದನ್ನು ಬಿಟ್ಟು ಟವರ್‌ ಇನ್ಸ್‌ಟಾಲೇಷನ್‌ ಕಂಪನಿ ಸೇರಿಕೊಂಡು, ಅದನ್ನು ಬಿಟ್ಟು ಟವರ್‌ ಬ್ಯಾಟರಿಗಳನ್ನು ಕದಿಯಲು ಇಳಿದಿದ್ದ!

TOI.in 16 Jun 2019, 11:58 am
ಬೆಂಗಳೂರು: ಸರಕಾರದ ಟವರ್‌ಗಳನ್ನು ಮುಟ್ಟುವುದು ಬೇಡ ಎಂದು ಹಾಕಿಕೊಂಡಿದ್ದ ಅಲಿಖಿತ ನಿಯಮವನ್ನು ಆಕಸ್ಮಿಕವಾಗಿ ಮುರಿದ ಬ್ಯಾಟರಿ ಕಳ್ಳರು ಬೆಂಗಳೂರು ಪೊಲೀಸರ ಅತಿಥಿಗಳಾಗಿದ್ದಾರೆ.
Vijaya Karnataka Web Battery Thief


ಕಳೆದೊಂದು ವರ್ಷದಿಂದ ಖಾಸಗಿ ಮೊಬೈಲ್‌ ಟವರ್‌ಗಳಿಂದ ಬ್ಯಾಟರಿ ಕದಿಯುತ್ತಿದ್ದ ಕದೀಮರು ಬಿಎಸ್‌ಎನ್‌ಎಲ್‌ ಟವರ್‌ ಮುಟ್ಟಿ ಕಂಬಿ ಎಣಿಸುವ ಪರಿಸ್ಥಿತಿ ತಂದುಕೊಂಡಿದ್ದಾರೆ. ತಮಿಳುನಾಡಿನ ವೆಲ್ಲೂರು ಜಿಲ್ಲೆಯವರಾದ ದಿನಕರನ್‌ (28) ಮತ್ತು ಧರ್ಮೇಂದ್ರ (28) ನಗರದ ಕೂಡ್ಲಿ ಗೇಟ್‌ನ ನಿವಾಸಿಗಳು. ಇದುವರೆಗೆ ಸುಮಾರು 7.5 ಲಕ್ಷ ರೂ. ಮೌಲ್ಯದ 48 ಬ್ಯಾಟರಿಗಳನ್ನು ಕಳವು ಮಾಡಿದ್ದಾರೆ.

ಪೊಲೀಸ್‌ ರಾಡರ್‌ ಕಣ್ಣಿಗೆ ಸಿಗದಿರುವ ಖಾಸಗಿ ಟೆಲಿಕಾಮ್‌ನವರು ಅಳವಡಿಸಿದ ಟವರ್‌ಗಳನ್ನೇ ಗುರಿಯಾಗಿಸಿಕೊಂಡು ಕಳೆದ ಒಂದು ವರ್ಷದಿಂದ ಕಳ್ಳತನ ಮಾಡುತ್ತಿದ್ದರು. ಸರಕಾರಿ ಟೆಲಿಕಾಂ ಕಂಪನಿಯ ಟವರ್‌ಗಳ ಸಹವಾಸಕ್ಕೆ ಹೋಗುತ್ತಿರಲಿಲ್ಲ.

ಕೊಡಿಗೇನಹಳ್ಳಿ ಸಮೀಪದ ತಾತನಗರ್‌ನ ಬಿಎಸ್‌ಎನ್‌ಎಲ್‌ ಟವರ್‌ಅನ್ನು ಖಾಸಗಿ ಟವರ್‌ ಎಂದು ಭಾವಿಸಿ ಬ್ಯಾಟರಿ ಕದಿಯಲು ಹೋಗಿದ್ದ ಇಬ್ಬರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಟವರ್‌ನ ಬ್ಯಾಟರಿಗಳು ಕಳುವಾಗಿರುವುದು ಏಪ್ರಿಲ್‌ 26ರಂದು ಬಿಎಸ್‌ಎನ್‌ಎಲ್‌ನ ಅಧಿಕಾರಿ ರಾಜೀವ್‌ ಎಂ ಅವರ ಗಮನಕ್ಕೆ ಬಂದಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.

ಎಂಬಿಎ ಪದವಿದರನಾಗಿರುವ ದಿನಕರನ್‌ ನಿರುದ್ಯೋಗಿಯಾಗಿದ್ದ. ಮೊದಲು ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದ. ನಂತರ ಉದ್ಯೋಗ ತೊರೆದು ಮೊಬೈಲ್‌ ಟವರ್‌ ಇನ್ಸ್‌ಟಾಲೇಷನ್‌ ಮತ್ತು ಮೈಂಟೇನೆನ್ಸ್‌ ಕಂಪನಿ ಸೇರಿಕೊಂಡಿದ್ದ. ಕೊನೆಗೆ ಅಲ್ಲೂ ಕೆಲಸ ಬಿಟ್ಟಿದ್ದ.

ಕಳೆದೊಂದು ವರ್ಷದಿಂದ ಸ್ನೇಹಿತ ಧರ್ಮೇಂದ್ರನ್‌ ಜತೆಗೆ ಸೇರಿ ಟವರ್‌ನ ಬ್ಯಾಟರಿಗಳನ್ನು ಕದಿಯುವ ದುಸ್ಸಾಹಸಕ್ಕೆ ಇಳಿದ್ದಿದ್ದ. ಟವರ್‌ ನಿರ್ವಹಣೆಯ ಉದ್ಯೋಗಿಗಳಂತೆ ಬಿಂಬಿಸಿಕೊಳ್ಳುತ್ತಿದ್ದ ದಿನಕರನ್‌ ಮತ್ತು ಧರ್ಮೇಂದ್ರನ್‌ ಗೂಡ್ಸ್‌ ರಿಕ್ಷಾ ಮೂಲಕ ಬ್ಯಾಟರಿಗಳನ್ನು ಸಾಗಿಸುತ್ತಿದ್ದರು. ಸುಮಾರು 12,000 ರೂ. ನಿಂದ 15,000 ರೂ. ಬೆಲೆ ಬಾಳುವ ಬ್ಯಾಟರಿಗಳನ್ನು 4,000 ರೂ ನಿಂದ 6,000 ರೂ.ಗಳಿಗೆ ಮಾರಾಟ ಮಾಡುತ್ತಿದ್ದರು.

ಸಿಸಿಟಿವಿ ಫೂಟೇಜ್‌ ತರಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಉದ್ಯೋಗಿಗಳ ಸೋಗಿನಲ್ಲಿ ಬಂದು ಬ್ಯಾಟರಿಗಳನ್ನು ಕದ್ದ ಇಬ್ಬರನ್ನು ಬಂಧಿಸಿದ್ದಾರೆ. ದಿನಕರನ್‌ ಪತ್ನಿ ಎಂಎನ್ಸಿ ಕಂಪನಿಯಲ್ಲಿ ಎಚ್ಆರ್‌ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಗಂಡನ ಕದೀಮ ಕೆಲಸ ಬಗ್ಗೆ ಗೊತ್ತಿರಲಿಲ್ಲ. ಮನೆಗೆ ಬ್ಯಾಟರಿಗಳನ್ನು ತಂದಾಗ ಅವರ ಕೆಲಸಕ್ಕೆ ಸಂಬಂಧಿಸಿದ್ದರಬೇಕು ಎಂದು ಸುಮ್ಮನಾಗುತ್ತಿದ್ದರಂತೆ. ಉದ್ಯೋಗಕ್ಕೆ ಹೋಗದೆ ಕದ್ದು ದುಡ್ಡು ಸಂಪಾದಿಸುತ್ತಿದ್ದ ದಿನಕರನ್‌ ಸ್ವಲ್ಪ ದುಡ್ಡನ್ನು ಪತ್ನಿಗೂ ನೀಡಿಡ್ಡನಂತೆ. ಇನ್ನುಳಿದ ದುಡ್ಡಲ್ಲಿ ತನ್ನ ದುರ್ಗುಣಗಳಿಗೆ ಖರ್ಚು ಮಾಡುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ