ಆ್ಯಪ್ನಗರ

ಮೊಬೈಲ್‌ ಹೆಚ್ಚಿಗೆ ಬಳಸಬೇಡ ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆ

ಗೋಪಾಲ್‌ಸಿಂಗ್‌ (15) ಆತ್ಮಹತ್ಯೆ ಮಾಡಿಕೊಂಡ ಪುತ್ರ. ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಈತನಿಗೆ ತಂದೆ ನೇಪಾಳ ಮೂಲದ ಹರಿಸಿಂಗ್‌ ಭಟ್‌ ಬುದ್ಧಿ ಹೇಳಿದ್ದರು.

Vijaya Karnataka 5 Jun 2019, 7:15 am
ಬೆಂಗಳೂರು: ಹೆಚ್ಚು ಮೊಬೈಲ್‌ ಬಳಸಬೇಡ ಎಂದು ಬುದ್ಧಿಮಾತು ಹೇಳಿದ ತಂದೆ ಮೊಬೈಲ್‌ ಕಿತ್ತುಕೊಂಡಿದ್ದರಿಂದ ಬೇಸತ್ತ ಮಗ ನೇಣಿಗೆ ಶರಣಾದ ಘಟನೆ ಮಾರತ್ತಹಳ್ಳಿಯಲ್ಲಿ ನಡೆದಿದೆ.
Vijaya Karnataka Web Suicide Hang


ಗೋಪಾಲ್‌ಸಿಂಗ್‌ (15) ಆತ್ಮಹತ್ಯೆ ಮಾಡಿಕೊಂಡ ಪುತ್ರ. ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಈತನಿಗೆ ತಂದೆ ನೇಪಾಳ ಮೂಲದ ಹರಿಸಿಂಗ್‌ ಭಟ್‌ ಬುದ್ಧಿ ಹೇಳಿದ್ದರು. ಏಳು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಹರಿಸಿಂಗ್‌ ಕುಟುಂಬ ಮಾರತ್ತಹಳ್ಳಿಯ ಪಣತ್ತೂರು ಮುಖ್ಯರಸ್ತೆಯಲ್ಲಿರುವ ಪೇಯಿಂಗ್‌ ಗೆಸ್ಟ್‌ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು ಹಾಗೂ ಅದೇ ಪಿಜಿಯಲ್ಲಿ ಕಾವಲು ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಹರಿಸಿಂಗ್‌ ಭಟ್‌ಗೆ ಮೂವರು ಗಂಡು ಮಕ್ಕಳಿದ್ದು ಗೋಪಾಲ್‌ಸಿಂಗ್‌ ಎರಡನೆಯವನು. ಈತನಿಗೆ ಮೊಬೈಲ್‌ನಲ್ಲಿ ಗೇಮ್‌ ಆಡುವ ಅಭ್ಯಾಸವಿತ್ತು. ಮಗ ಓದಿಗಿಂತ ಹೆಚ್ಚಾಗಿ ಮೊಬೈಲ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಾನೆ ಎನ್ನುವ ಆತಂಕ ತಂದೆಗಿತ್ತು. ಸೋಮವಾರ ಕೆಲಸ ಮುಗಿಸಿ ಹರಿಸಿಂಗ್‌ ಮನೆಗೆ ಬಂದ ವೇಳೆಯಲ್ಲೂ ಗೋಪಾಲ್‌ ಮೊಬೈಲ್‌ ಹಿಡಿದುಕೊಂಡು ಕುಳಿತಿದ್ದ. ಇದರಿಂದ ಕುಪಿತಗೊಂಡ ತಂದೆ ಮಗನಿಗೆ ಬುದ್ಧಿ ಹೇಳಿ ಆತನ ಕೈಯಿಂದ ಮೊಬೈಲ್‌ ಕಿತ್ತುಕೊಂಡಿದ್ದರು. ಇದು ನಡೆದಾಗ ಮಧ್ಯಾಹ್ನ 3 ಗಂಟೆ. ತಂದೆಯ ಮಾತಿನಿಂದ ಮನನೊಂದ ಮಗ ತಂದೆ ಕೆಲಸ ಮಾಡುತ್ತಿದ್ದ ಪಿಜಿಯ ಕೊಠಡಿ ಸಂಖ್ಯೆ 35 ರ ಕೀ ತೆಗೆದುಕೊಂಡು ಹೋಗಿ ಕೊಠಡಿಯ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಂಜೆ ಬಹಳ ಹೊತ್ತಾದರೂ ಮಗ ಮನೆಗೆ ಬರದಿದ್ದಾಗ ತಾಯಿ ಹೊರಗೆಲ್ಲಾ ಹುಡುಕಾಡಿದರೂ ಮಗ ಕಾಣಿಸಲಿಲ್ಲ. ಬೇಜಾರು ಮಾಡಿಕೊಂಡು ಸ್ನೇಹಿತರ ಮನೆಗೆ ಹೋಗಿರಬಹುದು ಎಂದು ಸುಮ್ಮನಾಗಿದ್ದರು. ರಾತ್ರಿ ಏಳೂವರೆ ಸುಮಾರಿಗೆ ಕೊಠಡಿ ಸಂಖ್ಯೆ 35ರಲ್ಲಿದ್ದ ಬಾಡಿಗೆದಾರರು ಬಂದು ಕೊಠಡಿಯ ಕೀ ಕೊಡುವಂತೆ ಕೇಳಿದ್ದರು. ಆಗ ಮನೆಯೆಲ್ಲಾ ಹುಡುಕಾಡಿದರೂ ಕೀ ಸಿಗಲಿಲ್ಲ. ಬಳಿಕ ಪಿಜಿ ಮಾಲೀಕರ ಬಳಿಯಿದ್ದ ನಕಲಿ ಕೀ ಮೂಲಕ ಕೊಠಡಿಯ ಬಾಗಿಲು ತೆರೆದಾಗ ಮಗನ ಶವ ನೇಣಿನ ಕುಣಿಕೆಯಲ್ಲಿ ನೇತಾಡುತ್ತಿತ್ತು. ಈ ದೃಶ್ಯ ನೋಡಿ ಆಘಾತಗೊಂಡ ತಂದೆ ಎದೆ ಬಡಿದುಕೊಂಡು ಅಲ್ಲೇ ಕುಸಿದು ಕುಳಿತರು. ಸ್ಥಳಕ್ಕೆ ಬಂದ ಮಾರತ್ತಹಳ್ಳಿ ಠಾಣೆ ಪೊಲೀಸರು ಮೃತದೇಹವನ್ನು ಶವ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ