ಹುಣಸೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಉರುಳಿದ ಪರಿಣಾಮ ಮದುವೆ ಆಮಂತ್ರಣ ಪತ್ರಿಕೆ ಹಂಚಲು ಬಂದಿದ್ದ ನಾಲ್ವರು ಸ್ನೇಹಿತರು ಮೃತಪಟ್ಟು, ಇಬ್ಬರು ತೀವ್ರ ಗಾಯಗೊಂಡಿದ್ದಾರೆ.
ಬೆಂಗಳೂರು ರಾಜರಾಜೇಶ್ವರಿ ನಗರದ ಬಿಇಎಂಎಲ್ ಲೇಔಟ್ನ ಬಾಬುರಾವ್ ಸಾಳಂಕೆ ಅವರ ದ್ವಿತೀಯ ಪುತ್ರ ರಾಜನ್(ರಂಜನ್) ಸಾಳಂಕೆ(25), ಜಕ್ಕೂರಿನ ಮನೋಜ್ ರಾವ್ ಪುತ್ರ ಶಿವಾಜಿರಾವ್ ಘೋರ್ಪಡೆ(49), ಕೆಂಗೇರಿಯ ಶ್ರೀನಿವಾಸರಾವ್ ಅವರ ಪುತ್ರ ಕೌಶಿಕ್ ಚೌವ್ಹಾಣ್(32), ಗಂಗಾ ನಗರದ ಕಿಶೋರ್ ಯಾದವ್ ಮೃತರು. ಬಲರಾಂ ಸಾಳಂಕೆ ಅವರ ಪುತ್ರ ಯಶವಂತ್ ಸಾಳಂಕೆ ಹಾಗೂ ಹುಣಸೂರು ತಾಲೂಕಿನ ಚೌಡಿಕಟ್ಟೆ ಗ್ರಾಮದ ಚಂದ್ರಶೇಖರ್ ತೀವ್ರ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತರೆಲ್ಲರೂ ಸಂಬಂಧಿಕರಾಗಿದ್ದು, ವರ ರಂಜನ್ ಸಾಳಂಕಿ ಸೇರಿದಂತೆ ಒಟ್ಟು 8 ಮಂದಿ ಎರಡು ಕಾರುಗಳಲ್ಲಿ (ಇನೋವಾ ಮತ್ತು ಎಂಡೋವರ್)ತಾಲೂಕಿನ ಚೌಡಿಕಟ್ಟೆಯಲ್ಲಿರುವ ತಮ್ಮ ಸಂಬಂಧಿ ಚಂದ್ರಶೇಖರ್ ಮನೆಗೆ ಬಂದು ಆಹ್ವಾನ ಪತ್ರಿಕೆ ನೀಡಿ, ಸಂಜೆ ನಾಲ್ಕರ ವೇಳೆಗೆ ವಾಪಸ್ ಹೊರಟು ನಾಗರಹೊಳೆ ರಾಷ್ಟ್ರೀಯ ಉದ್ಯಾನ ವೀಕ್ಷಿಸಲು ತೆರಳಿದರು. ಈ ವೇಳೆ ತಾನೇ ಕಾರು ಚಲಾಯಿಸುತ್ತೇನೆ ಎಂದು ಸ್ನೇಹಿತನ ಬಳಿ ಹೇಳಿದ ರಂಜನ್, ಎಂಡೋವೇರ್ ಕಾರು ಚಲಾಯಿಸಿದರು.
ಹುಣಸೂರು-ಎಚ್.ಡಿ.ಕೋಟೆ ಮುಖ್ಯರಸ್ತೆಯ ಮಾರ್ಗ ಮಧ್ಯೆ ನಲ್ಲೂರುಪಾಲ ಬಳಿ ಅತಿ ವೇಗವಾಗಿ ನುಗ್ಗಿದ ಎಂಡೋವರ್ ಕಾರು ರಸ್ತೆ ಬದಿಯ ಗುಂಡಿಗೆ ಬಿದ್ದಿದೆ. ಸ್ಥಳೀಯರು ಧಾವಿಸುವಷ್ಟರಲ್ಲೇ ಅದರಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಮದುಮಗನ ಸಾವು: ಘಟನೆಯಲ್ಲಿ ಮೃತಪಟ್ಟ ರಂಜನ್ ಸಾಳಂಕಿ ಮದುವೆ ಏ. 30ರಂದು ನಡೆಯಬೇಕಿತ್ತು.