ಬೆಂಗಳೂರು: ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಈ ಹೊತ್ತಿನಲ್ಲಿ ಸೈಬರ್ ಖದೀಮರ ಕಾಟ ವಿಪರೀತಕ್ಕೇರಿದೆ. ಜನರು ಹೆಚ್ಚಾಗಿ ಆನ್ಲೈನ್ ವ್ಯವಹಾರಗಳಿಗೆ ತೆರೆದುಕೊಳ್ಳಬೇಕಾದ ಅನಿವಾರ್ಯತೆಯ ಅವಕಾಶ ಬಳಸಿಕೊಂಡು ಅಮಾಯಕರ ವಂಚನೆಗಿಳಿದಿದ್ದಾರೆ. ಬೆಂಗಳೂರಿನ 8 ಸೈಬರ್ ಠಾಣೆಗಳಲ್ಲಿ ಮಾರ್ಚ್ನಿಂದ ಜುಲೈವರೆಗೂ 4 ಸಾವಿರ ಸೈಬರ್ ಪ್ರಕರಣಗಳು ದಾಖಲಾಗಿರುವುದೇ ಇದಕ್ಕೆ ಸಾಕ್ಷಿ. ಲಾಕ್ಡೌನ್ ಅವಧಿಯಲ್ಲಿ ಲಕ್ಷಾಂತರ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿರುವುದು ಸೈಬರ್ ಖದೀಮರಿಗೆ ಸುಗ್ಗಿಯಾಗಿಬಿಟ್ಟಿದೆ. ಕಚೇರಿಗಳಲ್ಲಿ ಎಲ್ಲಾ ಸೈಬರ್ ಸುರಕ್ಷತೆ ಭದ್ರವಾಗಿರುತ್ತದೆ. ಆದರೆ, ಮನೆಯಿಂದ ಮೊಬೈಲ್, ಕಂಪ್ಯೂಟರ್ ಮೂಲಕ ಕೆಲಸ ಮಾಡುತ್ತಿರುವ ಬಹುತೇಕರಿಗೆ ಸೈಬರ್ ಭದ್ರತೆಯ ಅರಿವೇ ಇರುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಹ್ಯಾಕರ್ಗಳು ವಂಚನೆಯ ಜಾಲ ಬೀಸಿದ್ದಾರೆ. ವಂಚಕರ ಬಲೆಗೆ ಬಿದ್ದವರಲ್ಲಿ ಕೆಲವರು ನ್ಯಾಯಕ್ಕಾಗಿ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.
ಸೈಬರ್ ಖದೀಮರ ವಂಚನೆ ಹೇಗಿರುತ್ತೆ?
ಅಮಾಯಕ ಜನರನ್ನು ವಂಚಿಸಲು ಹ್ಯಾಕರ್ಗಳು ಹತ್ತಾರು ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಕಾರು ಬಹುಮಾನ ಬಂದಿದೆ ಎನ್ನುವ ಸುಳ್ಳು ಮೆಸೇಜ್ಗಳು, ಪಿಎಂ ಕೊರೊನಾ ರಿಲೀಫ್ ಫಂಡ್ ಇದೆ ಪಡೆದುಕೊಳ್ಳಿ ಎನ್ನುವ ಮೆಸೇಜ್ಗಳು, ಪಿಎಂ ಕೇರ್ಸ್ ಫಂಡ್ಗೆ ನೆರವು ನೀಡಿ ಎನ್ನುವ ನಕಲಿ ಲಿಂಕ್ಗಳು, ಲಾಕ್ಡೌನ್ನಿಂದ ತೀರಾ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿ ಎನ್ನುವಂಥ ಪ್ರಕಟಣೆಗಳು ಮುಂತಾದ ನೂರಾರು ರೀತಿಯ ಮೆಸೇಜ್ಗಳ ಮೂಲಕ ಜನರನ್ನು ತಮ್ಮ ಬಲೆಗೆ ಕೆಡವುತ್ತಾರೆ. ಇನ್ನು ಮನೆಯಲ್ಲೇ ಕುಳಿತು ಬೋರ್ ಎನಿಸಿದಾಗ ವಿವಿಧ ವೆಬ್ಸೈಟ್ಗಳನ್ನು ಜಾಲಾಡುವುದು ಮಾಮೂಲಿ. ಇದನ್ನು ಅರಿತ ಸೈಬರ್ ಸಂಚುಕೋರರು ಅಶ್ಲೀಲ ವೆಬ್ಸೈಟ್, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮುಂತಾದ ಜನಪ್ರಿಯ ವೆಬ್ಸೈಟ್ಗಳ ಹೆಸರಲ್ಲೂ ವಂಚಿಸಿದ್ದಾರೆ. ಸೈಬರ್ ಅಪರಾಧ ವಿಭಾಗದ ಅಧಿಕಾರಿಯೊಬ್ಬರ ಅಂದಾಜಿನಂತೆ ಲಾಕ್ಡೌನ್ ಅವಧಿಯ ಈ 4 ತಿಂಗಳಲ್ಲಿ ರಾಜಧಾನಿಯಲ್ಲಿ ಕನಿಷ್ಠ 60-70 ಸಾವಿರ ಸೈಬರ್ ಅಪರಾಧಗಳು ನಡೆದಿವೆ. ಲೆಕ್ಕಕ್ಕೆ ಸಿಗುತ್ತಿರುವುದು ಕೇವಲ 4 ಸಾವಿರ ಮಾತ್ರ.
ಡಿ.ಕೆ. ಶಿವಕುಮಾರ್ ಮನೆಗೆ ಟ್ಯಾಕ್ಸಿ ಚಾಲಕರ ಸಂಘಗಳು: ಸಮಸ್ಯೆಗೆ ಸ್ಪಂದಿಸುವಂತೆ ಮನವಿ
ನಾನಾ ರೀತಿಯ ವಂಚನೆಗಳು!
ಘಟನೆ-1
ಶಾಂತಿ ನಗರದ ವಿದ್ಯಾರ್ಥಿ ಚಂದ್ರಶೇಖರ್ಗೆ ಕಾರು ಬಹುಮಾನ ಬಂದಿದೆ ಎನ್ನುವ ಮೆಸೇಜ್ ಬಂದಿತ್ತು. 16 ಲಕ್ಷದ ಕಾರಿಗೆ 45 ಸಾವಿರ ತೆರಿಗೆ ಪಾವತಿಸಿದರೆ ಸಾಕು ಎಂದು ಸೈಬರ್ ಖದೀಮನ ಕರೆ ಬಂದಿತ್ತು. ಕರೆ ನಂಬಿದ ಚಂದ್ರಶೇಖರ್ಅಷ್ಟೂ ಹಣ ಕಳೆದುಕೊಂಡರು.
ಘಟನೆ-2
ಎಚ್.ಎಸ್.ಆರ್ಲೇಔಟ್ ಉದ್ಯಮಿ ರಾಜೇಶ್ ಮಿತ್ರಾ ಔಷಧಿ ಸರಬರಾಜು ಮಾಡುತ್ತಾರೆ. ಇವರಿಗೆ ಆ್ಯಡಮ್ ಹೆಸರಲ್ಲಿ ಫೇಸ್ಬುಕ್ನಲ್ಲಿ ಪರಿಚಯ ಆಗಿದ್ದಾತ ಕಡಿಮೆ ಬೆಲೆಗೆ ಔಷಧ ಸರಬರಾಜು ಮಾಡುವುದಾಗಿ ಕರೆ ಮಾಡಿದ್ದ. ಇವರು ಒಪ್ಪಿಕೊಂಡು ಹಣ ಕಳುಹಿಸಿದರು. ಆಮೇಲೆ ವಂಚಕನ ಫೋನ್ ಸ್ವಿಚ್ ಆಫ್.
ಘಟನೆ-3
ಕತ್ರಿಗುಪ್ಪೆಯ ವೃದ್ಧರೊಬ್ಬರಿಗೆ ಕಾರು ಬಹುಮಾನದ ಕರೆ ಬಂದಿತ್ತು. ಜಿಎಸ್ಟಿ ಕಟ್ಟಿದರೆ 16 ಲಕ್ಷದ ಕಾರು ನಿಮ್ಮದಾಗುತ್ತದೆ ಎಂದು ನಂಬಿಸಿ 80 ಸಾವಿರ ಖಾತೆಗೆ ಹಾಕಿಸಿಕೊಂಡರು. ಹೊಸ ಕಾರು ಬರುತ್ತದೆ ಎಂದು ಮನೆ ಮಂದಿಗೆಲ್ಲಾ ಸಂಭ್ರಮದಿಂದ ಹೇಳಿಕೊಂಡಿದ್ದ ಅವರು ವಂಚನೆ ಆಗಿರುವುದು ಗೊತ್ತಾದಾಗ ಹಾಸಿಗೆ ಹಿಡಿದರು.
ಘಟನೆ-4
ಅಮೆರಿಕದಲ್ಲಿರುವ ಬಾಲ್ಯ ಸ್ನೇಹಿತ ಯಶಪಾಲ್ ತರೇಜಾ ಹೆಸರಲ್ಲಿ ಕೋರಮಂಗಲದ ಉದ್ಯಮಿ ರಮೇಶ್ ಬಸವಾಡಿಯಾಗೆ ವಾಟ್ಸ್ಆ್ಯಪ್ ಕರೆ ಬಂದಿದೆ. ಆಸ್ಪತ್ರೆಯಲ್ಲಿದ್ದೇವೆ, ತುರ್ತು ಹಣದ ಅಗತ್ಯವಿದೆ ಎಂದು ಗೋಳಾಡಿದ್ದ. ರಮೇಶ್ ತಕ್ಷಣ 2.55 ಲಕ್ಷ ರೂಪಾಯಿಯನ್ನು ತಮ್ಮ ಖಾತೆಯಿಂದ ವರ್ಗಾವಣೆ ಮಾಡಿದರು. ಆಮೇಲೆ ಗೊತ್ತಾಗಿದ್ದೆಂದರೆ ಯಶಪಾಲ್ ಅವರ ಫೋಟೋವನ್ನು ತನ್ನ ಮೊಬೈಲ್ ಪ್ರೊಫೈಲ್ಗೆ ಹಾಕಿಕೊಂಡ ಸೈಬರ್ ಖದೀಮ ರಮೇಶ್ ಅವರಿಗೆ ವಂಚಿಸಿದ್ದರು. ಇವರಿಬ್ಬರೂ ಆಪ್ತ ಸ್ನೇಹಿತರು ಎನ್ನುವುದನ್ನು ಫೇಸ್ ಬುಕ್ ಮೂಲಕ ವಂಚಕರು ತಿಳಿದುಕೊಂಡಿದ್ದರು.
ಘಟನೆ-5
ಕ್ರಿಪ್ಟೋ ಕರೆನ್ಸಿ ಖರೀದಿಸಿ ಬಿಟ್ ಕಾಯಿನ್ ರೂಪದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅತ್ಯಧಿಕ ಲಾಭ ಬರುತ್ತದೆ ಎನ್ನುವ ಆಸೆ ತೋರಿಸಿ ಆರ್.ಟಿ.ನಗರದ ಗಣೇಶ್ ಎನ್ನುವವರಿಗೆ ಕರೆ ಬಂತು. ಕರೆ ನಂಬಿ ಕ್ರಿಪ್ಟೋ ಕರೆನ್ಸಿ ಖರೀದಿಸಲೆಂದು ಆನ್ಲೈನ್ನಲ್ಲಿ 85 ಸಾವಿರ ರೂಪಾಯಿ ಕಳುಹಿಸಿ ಅಷ್ಟೂ ಹಣ ಕಳೆದುಕೊಂಡರು.
ಬದಲಾದ ವಂಚಕರ ಕಾರ್ಯತಂತ್ರ!
- ಮೊದಲು ಸಿವಿವಿ-ಒಟಿಪಿ ನಂಬರ್ಗಳಿಗಾಗಿ ಮಾತ್ರ ಕರೆ ಮಾಡಿ ಖಾತೆಗಳಿಗೆ ಕನ್ನ ಹಾಕುತ್ತಿದ್ದರು
- ಬಳಿಕ ಎಟಿಎಂ ಮತ್ತು ಕ್ರೆಡಿಟ್ ಕಾರ್ಡ್ಗಳ ಡಾಟಾ ಕದ್ದು ಹಣ ಲಪಟಾಯಿಸುತ್ತಿದ್ದರು
- olx ನಲ್ಲಿ ಯಾರದ್ದೋ ಕಾರು- ಬೈಕಿನ ಫೋಟೋ ಹಾಕಿ ಮಾರಾಟಕ್ಕಿದೆ ಎಂದು ಹೇಳಿ ಹಣ ಲಪಟಾಯಿಸಿದರು
- ಭರ್ಜರಿ ಬಹುಮಾನ ಬಂದಿದೆ ಎಂದು ಹೇಳಿ ಟ್ಯಾಕ್ಸ್ ಕಟ್ಟಿದರೆ ಸಾಕು ಎಂದು ಹಣ ಕಬಳಿಸಿದರು.
- ಈಗ ಗೂಗಲ್ನಲ್ಲೂ ನಾನಾ ಗ್ರಾಹಕರ ಕೇಂದ್ರದ ನಂಬರ್ಗಳನ್ನು ತಿದ್ದಿ, ವಂಚಕರ ನಂಬರ್ಗಳಿರುವ ನಕಲಿ ವೆಬ್ಸೈಟ್ಗಳನ್ನು ಸೃಷ್ಟಿಸಿದ್ದಾರೆ.
- ಕಾರು- ಮನೆ ಸಾಲ ನೀಡುವ ಏಜೆನ್ಸಿಗಳ ಕಂಪ್ಯೂಟರ್- ಮೊಬೈಲ್ಗಳಿಂದ ಗ್ರಾಹಕರ ಬ್ಯಾಂಕ್ ವಿವರಗಳನ್ನು ಕದ್ದು ಖಾತೆಗೆ ಕನ್ನ ಹಾಕುತ್ತಿದ್ದಾರೆ.
ಶಿವಮೊಗ್ಗ- ರಾಣೇಬೆನ್ನೂರು ರೈಲು ಯೋಜನೆ ಶೀಘ್ರ ಅನುಷ್ಠಾನ: ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಭರವಸೆ