ಆ್ಯಪ್ನಗರ

ಜಾಲಿ ರೈಡ್‌ಗೆ ಹೊರಟಿದ್ದಾಗ ಅಪಘಾತ: ಒಂದೇ ಕುಟುಂಬದ ಮೂವರು ಸೇರಿ ನಾಲ್ವರ ಸಾವು

ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಸರ್ಜಾಪುರ ಸಮೀಪ ಸಂಭವಿಸಿದೆ.

Vijaya Karnataka 28 Aug 2019, 10:07 am
ಆನೇಕಲ್‌ (ಬೆಂಗಳೂರು ಗ್ರಾಮಾಂತರ): ತಾಲೂಕಿನ ಸರ್ಜಾಪುರ ಸಮೀಪ ಸೋಮವಾರ ಮಧ್ಯರಾತ್ರಿ ನಡೆದ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
Vijaya Karnataka Web accident


ಮೃತರು ಉತ್ತರಪ್ರದೇಶ ಮೂಲದವರಾಗಿದ್ದಾರೆ. ಒವಿಎಚ್‌ ಸಾಫ್ಟ್‌ವೇರ್‌ ಕಂಪನಿಯ ಉದ್ಯೋಗಿ ಅಂಜನಿ ಯಾದವ್‌(31), ಇವರ ಪತ್ನಿ ನೇಹಾ(28), ಪುತ್ರ ಧ್ರುವ್‌(2) ಹಾಗೂ ಅಂಜನಿ ಯಾದವ್‌ ಸ್ನೇಹಿತ ಸಂತೋಷ್‌ ಎಂಬುವರ ಪತ್ನಿ ಶುಭ್ರ(29) ಮೃತರು. ಸಂತೋಷ್‌(29) ಹಾಗೂ ಇವರ ಪುತ್ರಿ ಸಾನ್ವಿ(2) ಗಾಯಗೊಂಡಿದ್ದಾರೆ.

ಬಿಲ್ಲಾಪುರ ಸಮೀಪ ಎಕ್ಸೈಡ್‌ ಗೇಟ್‌ ಬಳಿಯಿರುವ ಡಿಎಸ್‌ ಮ್ಯಾಕ್ಸ್‌ ಸ್ಕೈಲಿಷ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಎರಡು ಕುಟುಂಬಗಳ ಸದಸ್ಯರು ಸೋಮವಾರ ರಾತ್ರಿ ಊಟಕ್ಕೆಂದು ಕಾರಿನಲ್ಲಿ ಹೊರಗೆ ಹೋಗಿದ್ದರು. ಊಟ ಮುಗಿಸಿದ ನಂತರ ಜಾಲಿ ರೈಡ್‌ಗಾಗಿ ಕಾರಿನಲ್ಲಿ ಸರ್ಜಾಪುರದತ್ತ ತೆರಳಿದ್ದರು. ಸರ್ಜಾಪುರ ಸಮೀಪವಿರುವ ಕಾನ್ಫಿಡೆಂಟ್‌ ಅಪಾರ್ಟ್‌ಮೆಂಟ್‌ ಬಳಿ ವೇಗವಾಗಿ ಸಾಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ವಿಭಜಕವನ್ನು ದಾಟಿ ಎದುರು ರಸ್ತೆಯಲ್ಲಿ ಬರುತ್ತಿದ್ದ ಟಿಪ್ಪರ್‌ ಲಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಸರ್ಜಾಪುರ ಠಾಣೆ ಪಿಎಸ್‌ಐ ಮಂಜುನಾಥ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ