ಆ್ಯಪ್ನಗರ

ಅಜಿತಾಬ್‌ ನಾಪತ್ತೆ: ಸಿಬಿಐ ತನಿಖೆಗೆ ಆಗ್ರಹ

ಟೆಕ್ಕಿ ಕುಮಾರ್‌ ಅಜಿತಾಬ್‌ ಅಪಹರಣ ಪ್ರಕರಣವನ್ನು ಸಮಗ್ರ ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಅಜಿತಾಬ್‌ ಕುಟುಂಬದ ಸದಸ್ಯರು ಒತ್ತಾಯಿಸಿದ್ದಾರೆ.

Vijaya Karnataka Web 30 Jun 2018, 11:06 am
ಬೆಂಗಳೂರು: ಟೆಕ್ಕಿ ಕುಮಾರ್‌ ಅಜಿತಾಬ್‌ ಅಪಹರಣ ಪ್ರಕರಣವನ್ನು ಸಮಗ್ರ ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಅಜಿತಾಬ್‌ ಕುಟುಂಬದ ಸದಸ್ಯರು ಒತ್ತಾಯಿಸಿದ್ದಾರೆ.
Vijaya Karnataka Web ajitab


ನನ್ನ ಸಹೋದರ 2017ರ ಡಿ.18ರ ಸಂಜೆ ಒಎಲ್‌ಎಕ್ಸ್‌ನಲ್ಲಿ ಕಾರು ಮಾರಾಟ ಮಾಡಲು ಹೋಗಿ ವೈಟ್‌ಫೀಲ್ಡ್‌ನಿಂದ ಕಾಣೆಯಾಗಿದ್ದಾರೆ. ಡಿ.20ರಂದು ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿ ನಾಪತ್ತೆ ಎಂಬ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ. ಅಪಹರಣವಾಗಿ ಆರು ತಿಂಗಳು ಕಳೆದರೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ,’’ ಎಂದು ಅಜಿತಾಬ್‌ ಸಹೋದರಿ ಪ್ರಗ್ಯಾ ಸಿನ್ಹಾ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಆರೋಪಿಸಿದರು.

ಅಜಿತಾಬ್‌ ತಂದೆ ಅಶೋಕ್‌ಕುಮಾರ್‌ ಸಿನ್ಹಾ ಮಾತನಾಡಿ ‘‘ಇಲ್ಲಿಯವರೆಗೂ ಡಿಸಿಪಿ, ಐಜಿಪಿ, ಡಿಜಿಪಿ ಸೇರಿದಂತೆ ಎಲ್ಲಾ ಸಚಿವರು, ಇಲಾಖಾ ಅಧಿಕಾರಿಗಳ ಮನೆ ಬಾಗಿಲು ತಟ್ಟಿದ್ದೇನೆ. ತಮ್ಮ ಮಗನನ್ನು ಹುಡುಕಿಕೊಡಿ ಎಂದು ಪ್ರತಿನಿತ್ಯ ಅಲೆಯುತ್ತಿದ್ದೇನೆ. ಹೀಗಾಗಿ ತ್ವರಿತ ತನಿಖೆಗಾಗಿ ಸಿಬಿಐಗೆ ವಹಿಸಬೇಕು,’’ ಎಂದು ಅಳಲು ತೋಡಿಕೊಂಡರು.

‘‘ಜೂ.1ರಂದು ಹೈಕೋರ್ಟ್‌ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಸರಿಯಾದ ತನಿಖೆ ನಡೆಸುತ್ತಿಲ್ಲ. ವೈಟ್‌ಫೀಲ್ಡ್‌ ಪೊಲೀಸರು ತನಿಖೆ ಮಾಡಿದ್ದನ್ನು ಹೊರತುಪಡಿಸಿ ಕಿಂಚಿತ್ತೂ ಹೆಚ್ಚಿನ ಮಾಹಿತಿ ಸಂಗ್ರಹಿಸಿಲ್ಲ. ತನಿಖೆಯಲ್ಲಿ ಮಾಹಿತಿ ಸಂಗ್ರಹಕ್ಕೆ ತಾಂತ್ರಿಕತೆ ಅಡ್ಡವಾಗಿದೆ ಎಂಬ ನೆಪವೊಡ್ಡಿ ಮಾಹಿತಿ ಕೊಡಲು ತನಿಖಾಧಿಕಾರಿಗಳು ವಿಫಲರಾಗಿದ್ದಾರೆ,’’ ಎಂದು ಆರೋಪಿಸಿದರು.
ಕಾಣೆಯಾದ ಅಥವಾ ಅಪಹರಣವಾದ ವ್ಯಕ್ತಿಗಳ ಮಾಹಿತಿಯನ್ನು ಸರಕಾರಿ ವೆಬ್‌ಸೈಟ್‌ ‘ನ್ಯಾಷನಲ್‌ ಕ್ರೈಂ ರೆಕಾರ್ಡ್‌ ಬ್ಯೂರೋದಲ್ಲಿ ಲಗತ್ತಿಸಬೇಕು. ಆದರೆ, ಇದುವರೆಗೂ ಅಜಿತಾಬ್‌ನ ಅಪಹರಣದ ಪ್ರಕರಣ ವಿಚಾರವಾಗಿ ಅಧಿಕಾರಿಗಳು ಇಲಾಖೆಯ ವೆಬ್‌ಸೈಟ್‌, ಫೇಸ್‌ಬುಕ್‌, ಟ್ವಿಟರ್‌ ಹಾಗೂ ಅಂತರ್ಜಾಲ ಮೂಲಗಳಲ್ಲಿ ಮಾಹಿತಿ ಕೊಟ್ಟಿಲ್ಲ,’’ ಎಂದು ದೂರಿದರು.

ಈ ವೇಳೆ ಅಜಿತಾಬ್‌ನ ಸಹೋದರ ಅರುಣಾಬ್‌, ಭಾವ ಮಿಮಿಕ್‌, ಸಾಮಾಜಿಕ ಕಾರ್ಯಕರ್ತರಾದ ಅಲೆಕ್ಸಾಂಡರ್‌, ಶೋಭಾರಾಣಿ ಮತ್ತಿತರರು ಉಪಸ್ಥಿತರಿದ್ದರು.

ಸಿಎಂ ಮನೆ ಮುಂದೆ ಧರಣಿ ಎಚ್ಚರಿಕೆ

ಜು.2ರಂದು ಕೋರ್ಟ್‌ನಲ್ಲಿ ವಿಚಾರಣೆ ಇದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೂರಕ ಮಾಹಿತಿಗಳನ್ನು ಕೋರ್ಟ್‌ಗೆ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮನೆ ಮುಂದೆ ಅನಿರ್ದಿಷ್ಟಾವಧಿ ಕಾಲ ಧರಣಿ ನಡೆಸಲಾಗುವುದು ಎಂದು ಪ್ರಗ್ನಾ ಸಿನ್ಹಾ ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ