ಆ್ಯಪ್ನಗರ

ಏಳು ದರೋಡೆಕೋರರ ಬಂಧನ

ಪೆಟ್ರೋಲ್‌ ಬಂಕ್‌ನಲ್ಲಿ ಸಂಗ್ರಹವಾಗಿದ್ದ ಹಣವನ್ನು ಬ್ಯಾಂಕಿಗೆ ಕಟ್ಟಲು ಹೋಗುತ್ತಿದ್ದ ವ್ಯವಸ್ಥಾಪಕರ ಕಣ್ಣಿಗೆ ಮೆಣಸಿನ ಪುಡಿ ಎರಚಿ 19.81 ಲಕ್ಷ ರೂ. ದರೋಡೆ ಮಾಡಿದ್ದ ಒಬ್ಬ ಬಾಲಕ ಸೇರಿದಂತೆ ಏಳು ಜನರನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 29 Mar 2018, 5:00 am
ಬೆಂಗಳೂರು: ಪೆಟ್ರೋಲ್‌ ಬಂಕ್‌ನಲ್ಲಿ ಸಂಗ್ರಹವಾಗಿದ್ದ ಹಣವನ್ನು ಬ್ಯಾಂಕಿಗೆ ಕಟ್ಟಲು ಹೋಗುತ್ತಿದ್ದ ವ್ಯವಸ್ಥಾಪಕರ ಕಣ್ಣಿಗೆ ಮೆಣಸಿನ ಪುಡಿ ಎರಚಿ 19.81 ಲಕ್ಷ ರೂ. ದರೋಡೆ ಮಾಡಿದ್ದ ಒಬ್ಬ ಬಾಲಕ ಸೇರಿದಂತೆ ಏಳು ಜನರನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web detention of seven gangsters
ಏಳು ದರೋಡೆಕೋರರ ಬಂಧನ


ಕಾಮಾಕ್ಷಿಪಾಳ್ಯ ನಿವಾಸಿ ಸಾಗರ್‌ (24), ಸಂಜಯ್‌ (22), ಚುಂಚಘಟ್ಟ ರಸ್ತೆ ಶಿವಶಕ್ತಿ ನಗರದ ದಿವಾಕರ ರಾಜ (25), ಚಿಕ್ಕಲಸಂದ್ರದ ಪುರುಷೋತ್ತಮ (25), ಕತ್ರಿಗುಪ್ಪೆಯ ಸಂತೋಷ ಕುಮಾರ್‌ (25), ಶ್ರೀನಗರದ ನವೀನ್‌ಗೌಡ (20) ಹಾಗೂ ಓರ್ವ ಬಾಲಕ (17 ವರ್ಷ 6 ತಿಂಗಳು) ಬಂಧಿತರು. ಇವರಿಂದ 7.52 ಲಕ್ಷ ರೂ. ನಗದು, ಒಂದು ಚಿನ್ನದ ಉಂಗುರ, ಇನ್ನೋವಾ ಕಾರು, 4 ಬೈಕ್‌ಗಳು, ಮಚ್ಚು ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಐಡಿಯಲ್‌ ಹೋಮ್ಸ್‌ ಟೌನ್‌ಶಿಪ್‌ನಲ್ಲಿರುವ ಬಿಪಿಸಿಎಲ್‌ ಬಂಕ್‌ನ ಮ್ಯಾನೇಜರ್‌ ಪಿ.ಸಿ ಸ್ವಾಮಿ ಎಂಬುವರು ಭಾನುವಾರ (ಫೆ.18) ಸಂಗ್ರಹವಾಗಿದ್ದ 19.81 ಲಕ್ಷ ರೂ.ಯನ್ನು ಫೆ.19ರಂದು ಬೆಳಗ್ಗೆ 10.15ರ ಸುಮಾರಿಗೆ ಸಮೀಪದ ಬ್ಯಾಂಕಿಗೆ ಜಮಾ ಮಾಡಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಐಡಿಯಲ್‌ ಹೋಮ್ಸ್‌ ರಾಯಲ್‌ ಎನ್‌ಫೀಲ್ಡ್‌ ಶೋರೂಮ್‌ ಎದುರು ಹೋಗುತ್ತಿದ್ದಾಗ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರು, ಸ್ವಾಮಿ ಅವರ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಳಿಕ ಕಣ್ಣಿಗೆ ಮೆಣಸಿನ ಪುಡಿ ಎರಚಿ ಮಚ್ಚು ತೋರಿಸಿ ಬೆದರಿಕೆ ಹಾಕಿ 19.81 ಲಕ್ಷ ರೂ. ದೋಚಿ ಪರಾರಿಯಾಗಿದ್ದರು. ಈ ಸಂಬಂಧ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಳೇ ಉದ್ಯೋಗಿಯ ಬಗ್ಗೆ ಪರಿಶೀಲನೆ

ಬಂಕ್‌ನಲ್ಲಿ ಈ ಹಿಂದೆ ಕೆಲಸ ಬಿಟ್ಟು ಹೋಗಿರುವವರ ಮಾಹಿತಿ ಕಲೆ ಹಾಕಲಾಗಿತ್ತು. ಪುರುಷೋತ್ತಮ ಎಂಬಾತ ಕೆಲ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ಮಾಹಿತಿ ಸಿಕ್ಕಿತ್ತು. ಪುರುಷೋತ್ತಮನನ್ನು ವಶಕ್ಕೆ ಪಡೆದಾಗ ಪೆಟ್ರೋಲ್‌ ಬಂಕ್‌ ದರೋಡೆ ಸಂಚು ಬೆಳಕಿಗೆ ಬಂದಿದೆ. ಜತೆಗೆ ಸಿಸಿ ಕ್ಯಾಮರಾಗಳು ಕೂಡಾ ಆರೋಪಿಗಳ ಬಂಧನಕ್ಕೆ ನೆರವಾಗಿವೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಪುರುಷೋತ್ತಮನ ವಿರುದ್ಧ ಹಿಂದೆ ಒಂದು ಅಪಹರಣ ಮತ್ತು ದರೋಡೆ ಸಂಚು ಕೇಸ್‌ ಇವೆ. ಆತ, ತನಗೆ ಪರಿಚಯ ಇರುವ ಅಪರಾಧ ಹಿನ್ನೆಲೆಯ ಉಳಿದ ಆರೋಪಿಗಳ ಜತೆ ಸೇರಿಕೊಂಡು ಬಂಕ್‌ ಹಣ ದರೋಡೆಗೆ ಪ್ಲಾನ್‌ ಮಾಡಿದ್ದ.

ಹಳೇ ಆರೋಪಿಗಳು

ಪ್ರಮುಖ ಆರೋಪಿ ಸಾಗರ್‌, ಅಮೃತ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪಹರಣ ಹಾಗೂ ಆರ್‌.ಆರ್‌ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ ಕೇಸ್‌ನಲ್ಲಿ ಭಾಗಿಯಾಗಿದ್ದ. ದಿವಾಕರ್‌ ಎಂಬಾತನ ವಿರುದ್ದ ಕೊಲೆ ಯತ್ನ, ದರೋಡೆಗೆ ಸಂಚು ಸೇರಿ 3 ಕೇಸ್‌ಗಳಿವೆ. ಸಂಜಯ್‌ ವಿರುದ್ಧ ಕೊಲೆ, ಕೊಲೆ ಯತ್ನ ಹಾಗೂ ದರೋಡೆ ಪ್ರಕರಣಗಳಿವೆ. ಸಂತೋಷ್‌ ವಿರುದ್ಧ ಸುಲಿಗೆ ಕೇಸ್‌ ಇದೆ. ಅಪ್ರಾಪ್ತ ವಯಸ್ಸಿನ ಬಾಲಕನ ವಿರುದ್ಧ ಒಂದು ಕೊಲೆ ಹಾಗೂ ಎರಡು ಕೊಲೆ ಯತ್ನ ಪ್ರಕರಣಗಳು ಇರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದರೋಡೆ ಹಣದಲ್ಲಿ ಪ್ರೇಯಸಿಗೆ ಉಂಗುರ !


ಬಂಧಿತರ ಪೈಕಿ ಆರೋಪಿಯೊಬ್ಬ ದರೋಡೆ ಮಾಡಿದ ಹಣದಿಂದ ಚಿನ್ನದ ಉಂಗುರು ಖರೀದಿಸಿ ಅದನ್ನು ಪ್ರೇಯಿಸಿಗೆ ಉಡುಗೊರೆ ನೀಡಲು ಯೋಜಿಸಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ