ಆ್ಯಪ್ನಗರ

ಹಣಕ್ಕಾಗಿ ವೈದ್ಯನ ಕೊಲೆ: ಏಳು ಜನರಿಗೆ ಜೀವಾವಧಿ ಶಿಕ್ಷೆ

ಹಣಕ್ಕಾಗಿ ಸಂಜಯ್‌ನಗರದ ಗೆದ್ದಲಹಳ್ಳಿಯ ವೈದ್ಯ ಡಾ.ಶರತ್‌ ಕುಮಾರ್‌ (50) ಅವರನ್ನು ಅಪಹರಿಸಿ ಕೊಲೆ ಮಾಡಿದ್ದ ಏಳು ಜನರಿಗೆ ಜೀವಾವಧಿ ಶಿಕ್ಷೆ ಹಾಗೂ 87 ಸಾವಿರ ರೂ. ದಂಡ ವಿಧಿಸಿ 64ನೇ ಸಿಟಿ ಸಿವಿಲ್‌ ಮತ್ತು ಸೆಷೆನ್ಸ್‌ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

Vijaya Karnataka 4 Sep 2018, 10:21 am
ಬೆಂಗಳೂರು: ಹಣಕ್ಕಾಗಿ ಸಂಜಯ್‌ನಗರದ ಗೆದ್ದಲಹಳ್ಳಿಯ ವೈದ್ಯ ಡಾ.ಶರತ್‌ ಕುಮಾರ್‌ (50) ಅವರನ್ನು ಅಪಹರಿಸಿ ಕೊಲೆ ಮಾಡಿದ್ದ ಏಳು ಜನರಿಗೆ ಜೀವಾವಧಿ ಶಿಕ್ಷೆ ಹಾಗೂ 87 ಸಾವಿರ ರೂ. ದಂಡ ವಿಧಿಸಿ 64ನೇ ಸಿಟಿ ಸಿವಿಲ್‌ ಮತ್ತು ಸೆಷೆನ್ಸ್‌ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
Vijaya Karnataka Web mureder


ಜಿಮ್‌ ತರಬೇತುದಾರ ರವಿಕುಮಾರ್‌, ಈತನ ಸ್ನೇಹಿತೆ ಸಂಧ್ಯಾ ಅಲಿಯಾಸ್‌ ಸಂಜನಾ, ಅಶ್ವತ್ಥ, ಚೇತನ್‌, ಶಿವಪ್ರತಾಪ್‌, ಭೂಷಿತ್‌ ಹಾಗೂ ಕುಮಾರ್‌ ಶಿಕ್ಷೆಗೆ ಗುರಿಯಾದವರು. ಇವರು 2010ರ ಏ.10ರಂದು ಶರತ್‌ ಅವರನ್ನು ಕುಣಿಗಲ್‌ ಬಳಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು ಎಂದು ನ್ಯಾಯಾಲಯದ ವಿಚಾರಣೆಯಲ್ಲಿ ಸಾಭೀತಾಗಿದೆ.

ತುರ್ತು ಚಿಕಿತ್ಸೆ ಎಂದು ಕರೆ ಮಾಡಿದರೆ ಯಾವುದೇ ಸಂದರ್ಭದಲ್ಲಿ ರೋಗಿ ಕಾಣಲು ಬರುತ್ತಿದ್ದ ಶರತ್‌ ಅವರಿಗೆ 2010ರ ಏ.9ರಂದು ಕರೆ ಮಾಡಿದ್ದ ರವಿ, ತನ್ನ ತಾಯಿಗೆ ಅನಾರೋಗ್ಯವಾಗಿದೆ ಎಂದು ಹೇಳಿ ಮನೆಗೆ ಬರಲು ಹೇಳಿದ್ದ. ಅದರಂತೆ ವೈದ್ಯರು ಬಂದಾಗ ಅದಾಗಲೇ ಸಂಚು ರೂಪಿಸಿದ್ದ ಏಳು ಜನರು, 25 ಲಕ್ಷ ರೂ.ಗೆ ಡಿಮ್ಯಾಂಡ್‌ ಮಾಡಿದ್ದರು. ಅಷ್ಟು ಹಣ ಕೂಡಲೇ ನೀಡಲು ಆಗದು ಎಂದಾಗ, ಅವರ ಕುಟುಂಬದವರಿಗೆ ಕರೆ ಮಾಡಿ ಲಕ್ಷಾಂತರ ರೂ. ಮೌಲ್ಯದ ಆಭರಣವನ್ನು ತರಿಸಿಕೊಂಡಿದ್ದರು. ಬಳಿಕ ವೈದ್ಯರನ್ನು ವಾಪಸ್‌ ಮನೆಗೆ ಬಿಟ್ಟರೆ ತಾವು ಸಿಕ್ಕಿ ಬೀಳಬಹುದು ಎಂದು ತುಮಕೂರು ಜಿಲ್ಲೆ ಕುಣಿಗಲ್‌ ಬಳಿಯ ಅಮೃತೂರಿಗೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದರು.

ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು, ಏಳು ಜನರನ್ನು ಬಂಧಿಸಿ ತನಿಖೆ ಮುಗಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ