ಆ್ಯಪ್ನಗರ

ವೈದ್ಯರಿಗೆ ಮಚ್ಚು ತೋರಿಸಿ ದರೋಡೆ: ಫುಟ್ಬಾಲ್ ಪಂದ್ಯ ವೀಕ್ಷಿಸಿ ವಾಪಸಾಗುವಾಗ ಕೃತ್ಯ

ಫಿಫಾ ವಿಶ್ವಕಪ್‌ ಫುಟ್ಬಾಲ್‌ ಪಂದ್ಯ ವೀಕ್ಷಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ನಗರದ ಪ್ರತಿಷ್ಠಿತ ಆಸ್ಪತ್ರೆಯ 33 ವರ್ಷದ ವೈದ್ಯರೊಬ್ಬರನ್ನು ಅಡ್ಡಗಟ್ಟಿದ ದರೋಡೆಕೋರರಿಬ್ಬರು, ಕುತ್ತಿಗೆಗೆ ಮಚ್ಚು ಇಟ್ಟು ಐಫೋನ್‌ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿರುವ ಘಟನೆ ಲ್ಯಾವೆಲ್ಲೆ ರಸ್ತೆಯಲ್ಲಿ ನಡೆದಿದೆ.

Vijaya Karnataka 11 Jul 2018, 10:13 am
ಬೆಂಗಳೂರು: ಫಿಫಾ ವಿಶ್ವಕಪ್‌ ಫುಟ್ಬಾಲ್‌ ಪಂದ್ಯ ವೀಕ್ಷಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ನಗರದ ಪ್ರತಿಷ್ಠಿತ ಆಸ್ಪತ್ರೆಯ 33 ವರ್ಷದ ವೈದ್ಯರೊಬ್ಬರನ್ನು ಅಡ್ಡಗಟ್ಟಿದ ದರೋಡೆಕೋರರಿಬ್ಬರು, ಕುತ್ತಿಗೆಗೆ ಮಚ್ಚು ಇಟ್ಟು ಐಫೋನ್‌ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿರುವ ಘಟನೆ ಲ್ಯಾವೆಲ್ಲೆ ರಸ್ತೆಯಲ್ಲಿ ನಡೆದಿದೆ.
Vijaya Karnataka Web robbery


ದರೋಡೆಕೋರರಿಂದ ತಪ್ಪಿಸಿಕೊಂಡು 33 ವರ್ಷದ ವೈದ್ಯ ಓಡಲು ಪ್ರಯತ್ನಿಸಿದರೂ ದರೋಡೆಕೋರರು ಬಿಡದೆ ಬೆನ್ನತ್ತಿ ನಿಲ್ಲಿಸಿ ಸದ್ದು ಮಾಡಬೇಡಿ ಎಂದು ಕತ್ತಿಗೆ ಮಚ್ಚು ಇಟ್ಟಿದ್ದಾರೆ. ಅವರ ಪರ್ಸ್‌ನಲ್ಲಿದ್ದ 2 ಸಾವಿರ ರೂ. ನಗದು, ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳು, 50 ಸಾವಿರ ರೂ. ಮೌಲ್ಯದ ಕೈ ಗಡಿಯಾರ, ಐಫೋನ್‌-6 ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ವೈದ್ಯರು ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಾರದ ಹಿಂದಷ್ಟೇ ಎಂ.ಜಿ ರಸ್ತೆಯಲ್ಲಿ ಕುಖ್ಯಾತ ಸರಗಳ್ಳನೊಬ್ಬ ಮಹಿಳೆಗೆ ಚಾಕುವಿನಿಂದ ಇರಿದ ಘಟನೆ ಮಾಸುವ ಮುನ್ನವೇ ನಗರ ಕೇಂದ್ರ ಭಾಗದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಪ್ರಕರಣದ ವಿವರ: ಲ್ಯಾವೆಲ್ಲೆ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿರುವ ವೈದ್ಯರು, ಜು.7ರ ರಾತ್ರಿ ರಷ್ಯಾ ಮತ್ತು ಕ್ರೋಯಿಶಿಯಾ ನಡುವಿನ ಕ್ವಾರ್ಟರ್‌ ಫೈನಲ್‌ ಪಂದ್ಯ ವೀಕ್ಷಿಸಲು ಬೆಂಗಳೂರು ಕ್ಲಬ್‌ಗೆ ತೆರಳಿದ್ದರು. ಪಂದ್ಯ ವೀಕ್ಷಿಸಿದ ನಂತರ ಸಮೀಪದಲ್ಲೇ ಇರುವ ಮನೆಗೆ ನಡೆದುಕೊಂಡು ಮರಳುತ್ತಿದ್ದರು. ತಡರಾತ್ರಿ 1.25ರ ಸುಮಾರಿಗೆ ಲ್ಯಾವೆಲ್ಲೆ ರಸ್ತೆ ಹುಲ್‌ಕಲ್‌ ರೆಸಿಡೆನ್ಸಿ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟರ್‌ವೊಂದರಲ್ಲಿ ಬಂದ ಇಬ್ಬರು, ವೈದ್ಯರನ್ನು ತಡೆದು ನಿಲ್ಲಿಸಿದ್ದಾರೆ. ಈ ಪೈಕಿ ಓರ್ವ ಜಾಕೆಟ್‌ನಲ್ಲಿ ಇಟ್ಟುಕೊಂಡಿದ್ದ ಮಚ್ಚನ್ನು ತೆಗೆದು ಇರುವುದನ್ನೆಲ್ಲ ಕೊಡು ಎಂದಿದ್ದಾನೆ.

''ದುಷ್ಕರ್ಮಿಗಳು ಮಚ್ಚು ತೆಗೆಯುತ್ತಿದ್ದಂತೆ ಆತಂಕವಾಯಿತು. ತಪ್ಪಿಸಿಕೊಳ್ಳಲು ಯತ್ನಿಸಿ ಕೆಲವು ಹೆಜ್ಜೆ ಓಡಿದೆ. ಆದರೆ, ಪಾದಚಾರಿ ಮಾರ್ಗದ ಮೇಲೆ ಆಯತಪ್ಪಿ ಬಿದ್ದು ಬಿಟ್ಟೆ. ಅಟ್ಟಿಸಿಕೊಂಡು ಬಂದ ಆ ಇಬ್ಬರು, ಮಚ್ಚು ತೋರಿಸಿ ಕೂಗಾಡಬಾರದು ಎಂದು ಹೆದರಿಸಿ, ಬೆಲೆಬಾಳುವ ವಸ್ತುಗಳನ್ನು ಕೊಡಲು ತಾಕೀತು ಮಾಡಿದರು. ಮರು ಮಾತನಾಡದೇ ವಾಚ್‌, ಮೊಬೈಲ್‌, ಪರ್ಸ್‌ನಲ್ಲಿದ್ದ ಕಾರ್ಡ್‌, ನಗದು ಹಣ ಕೊಟ್ಟೆ. ಘಟನೆ ನಡೆದ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲ. ಬಹುಶಃ ಅದನ್ನು ನೋಡಕೊಂಡೇ ಅಡ್ಡಗಟ್ಟಿರಬಹುದು. ಘಟನೆ ನಡೆಯುವ ವೇಳೆ ಎರಡು ದ್ವಿಚಕ್ರ ವಾಹನಗಳು ಪಾಸ್‌ ಆದವು. ಆದರೆ, ಯಾರೂ ವಾಹನ ನಿಲ್ಲಿಸಿಲ್ಲ'' ಎಂದು ವೈದ್ಯರು ಹೇಳಿದರು.

ದುಷ್ಕರ್ಮಿಗಳು ಹೊರಟ ನಂತರ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಒಬ್ಬ ವ್ಯಕ್ತಿಗೆ ವಿಷಯ ತಿಳಿಸಿ ಅವರ ಮೊಬೈಲ್‌ ಪಡೆದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ವೈದ್ಯರು ತಿಳಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆ ನಡೆದ ಸ್ಥಳದ ಸುತ್ತಲಿನ ಸ್ಥಳಗಳಲ್ಲಿನ ಸಿಸಿ ಕ್ಯಾಮರಾ ಸೇರಿದಂತೆ ಇನ್ನಿತರ ಮಾಹಿತಿ ಕಲೆ ಹಾಕಿ ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ