ಆ್ಯಪ್ನಗರ

ನಾಯಿಯನ್ನು ಸರಿಯಾಗಿ ನೋಡಿಕೊಳ್ಳಿ ಎಂದಿದ್ದಕ್ಕೆ ಹಲ್ಲೆ

ಸಾಕುನಾಯಿಗಳನ್ನು ಮನೆ ಆವರಣದಲ್ಲಿ ಕಟ್ಟಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದಿದ್ದಕ್ಕೆ ಐದಾರು ಯುವಕರ ಗುಂಪು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

Vijaya Karnataka 13 Apr 2019, 5:00 am
ಬೆಂಗಳೂರು: ಸಾಕುನಾಯಿಗಳನ್ನು ಮನೆ ಆವರಣದಲ್ಲಿ ಕಟ್ಟಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದಿದ್ದಕ್ಕೆ ಐದಾರು ಯುವಕರ ಗುಂಪು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
Vijaya Karnataka Web dog fight one thrashed
ನಾಯಿಯನ್ನು ಸರಿಯಾಗಿ ನೋಡಿಕೊಳ್ಳಿ ಎಂದಿದ್ದಕ್ಕೆ ಹಲ್ಲೆ


ಈ ಸಂಬಂಧ ಹಲ್ಲೆಗೊಳಗಾದ ಹರೀಶ್‌ ಎಂಬುವವರು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಆದರೆ, ನಮ್ಮ ವಾಹನಗಳನ್ನು ಹರೀಶ್‌ ಜಖಂಗೊಳಿಸಿದ್ದಾನೆಂದು ನಾಯಿಗಳ ಮಾಲೀಕರು ಪ್ರತಿದೂರು ದಾಖಲಿಸಿದ್ದಾರೆ.

ವೃತ್ತಿಯಲ್ಲಿ ಪ್ಲಂಬರ್‌ ಆಗಿರುವ ಹರೀಶ್‌ ಪರಪ್ಪನ ಅಗ್ರಹಾರದಲ್ಲಿ ವಾಸವಿದ್ದಾರೆ. ಇವರ ಮುಖ, ಕೈ ಮತ್ತು ಕಾಲಿಗೆ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು, ಮಂಗಳವಾರ ತಮ್ಮ ಮೇಲೆ ನಡೆದಿರುವ ಹಲ್ಲೆ ಸಂಬಂಧಿಸಿದ ವಿಡಿಯೋ ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ.

''ಗಣೇಶ, ವಿಜಯ್‌ ಮತ್ತು ಅಂಬರೀಶ್‌ ಎಂಬ ಸಹೋದರರು ಮೂರು ನಾಯಿಗಳನ್ನು ಸಾಕಿಕೊಂಡಿದ್ದಾರೆ. ಅವುಗಳನ್ನು ಆಗಾಗ ಹೊರಗೆ ಬಿಡುತ್ತಾರೆ. ಆಗ ಅವು ರಸ್ತೆಯಲ್ಲಿ ಓಡಾಡುವವರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಈ ಕುರಿತು ನೆರೆಹೊರೆಯವರು ಹಲವು ಬಾರಿ ಮಾಲೀಕ ಗಣೇಶ ಅವರಿಗೆ ದೂರು ನೀಡಿದ್ದರು. ಆದರೆ, ಅವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಏ.4ರಂದು ಮನೆ ಬಳಿ ಹೋಗುತ್ತಿದ್ದಾಗ ನಾಯಿಗಳು ಅಟ್ಟಿಸಿಕೊಂಡು ಬಂದು ಕಚ್ಚಲು ಮುಂದಾದವು. ಇದರಿಂದ ಬೇಸರಗೊಂಡ ನಾನು, ನಾಯಿಗಳನ್ನು ಸರಿಯಾಗಿ ನೋಡಿಕೊಳ್ಳುವಂತೆ ಮಾಲೀಕರಿಗೆ ಹೇಳಿದ್ದೆ. ಆಗ ವಾಗ್ವಾದ ನಡೆಯಿತು'' ಎಂದು ಹರೀಶ್‌ ತಿಳಿಸಿದರು.

''ವಾಗ್ವಾದದ ಬಳಿಕ ಸ್ಥಳದಿಂದ ಹೊರಟು ಹೋಗಿದ್ದೆ. ಆದರೆ, ಗಣೇಶ್‌ ಅವರು ಸಮೀಪದ ದೇವಸ್ಥಾನದ ಬಳಿ ತೆರಳಿ ಮತ್ತಷ್ಟು ಜನರನ್ನು ಕರೆತಂದು ಸಹೋದರರ ಜೊತೆ ಸೇರಿ ಕಟ್ಟಿಗೆಯಿಂದ ಮತ್ತು ಕೈಯಿಂದ ಹಲ್ಲೆ ಮಾಡಿದ್ದಾರೆ. ಕೆಳಗೆ ಕೆಡವಿ ಹಾಕಿ ಮೈ ಮೇಲೆ ಕಾಲು ಇಟ್ಟಿದ್ದಾರೆ. ಈ ವೇಳೆ ನನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಬಂದು ನನ್ನನ್ನು ಕಾಪಾಡಿದರು'' ಎಂದು ಹರೀಶ್‌ ಆರೋಪಿಸಿದ್ದಾರೆ.

ದೂರಿನನ್ವಯ ಕೇಸ್‌ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿ ಕ್ಯಾಮೆರಾದಲ್ಲಿ ಸೆರೆ

ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಹರೀಶ್‌ ಮೇಲೆ ನಡೆದ ಹಲ್ಲೆ ದೃಶ್ಯ ಸೆರೆಯಾಗಿದೆ. ನಾಲ್ಕೈದು ಜನರ ಗುಂಪು ಹರೀಶ್‌ನನ್ನು ಎಳೆದೊಯ್ದು ಹಿಗ್ಗಾ ಮುಗ್ಗಾ ಥಳಿಸುತ್ತಿರುವುದು ಸೆರೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ