ಆ್ಯಪ್ನಗರ

ಕುಡಿದು ಬಂದು ಅಮ್ಮನಿಗೆ ಕಿರುಕುಳ ಕೊಡುತ್ತಿದ್ದ ಅಣ್ಣನ ಕೊಂದ ತಮ್ಮ

ಮದ್ಯಪಾನ ಮಾಡಿ ಮನೆಗೆ ಬಂದು ತಾಯಿಗೆ ಕಿರುಕುಳ ನೀಡುತ್ತಿದ್ದ ಅಣ್ಣನನ್ನು ಕೊಲೆ ಮಾಡಿದ ಆರೋಪಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 8 Sep 2018, 9:40 am
ಬೆಂಗಳೂರು: ಮದ್ಯಪಾನ ಮಾಡಿ ಮನೆಗೆ ಬಂದು ತಾಯಿಗೆ ಕಿರುಕುಳ ನೀಡುತ್ತಿದ್ದ ಅಣ್ಣನನ್ನು ಕೊಲೆ ಮಾಡಿದ ಆರೋಪಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web MURDER1


ಇಲ್ಲಿನ ಚುಂಚಘಟ್ಟ ಮುಖ್ಯ ರಸ್ತೆಯಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ವಿನಯ್‌ (25) ಕೊಲೆಯಾದವ. ಆರೋಪಿ ಸಂಜಯ್‌ (21) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಪತಿ ನಿಧನದ ಬಳಿಕ ಮಕ್ಕಳಾದ ವಿನಯ್‌ ಮತ್ತು ಸಂಜಯ್‌ ಜತೆಗೆ ತಾಯಿ ಜಯಂತಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಪಿಯುಸಿಗೆ ವ್ಯಾಸಂಗ ನಿಲ್ಲಿಸಿದ್ದ ವಿನಯ್‌ ಟಿ.ವಿ ರಿಪೇರಿ ಕೆಲಸ ಮಾಡಿಕೊಂಡಿದ್ದ. ಸಹೋದರ ಸಂಜಯ್‌, ಪದವಿ ಮುಗಿಸಿ ಖಾಸಗಿ ಟೆಲಿಕಾಂ ಕಂಪನಿ ಕಾಲ್‌ ಸೆಂಟರ್‌ನಲ್ಲಿ ಗ್ರಾಹಕ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ.

ದುಶ್ಚಟಗಳಿಗೆ ದಾಸನಾಗಿದ್ದ ವಿನಯ್‌ ಮನೆಗೆ ಬಂದು ಹಣಕ್ಕಾಗಿ ಪೀಡಿಸಿ, ತಾಯಿಗೆ ಕಿರುಕುಳ ನೀಡುತ್ತಿದ್ದ. ತಾಯಿಗೆ ತೊಂದರೆ ನೀಡದಂತೆ ಸಾಕಷ್ಟು ಬಾರಿ ಅಣ್ಣನಿಗೆ ಸಂಜಯ್‌ ಬುದ್ಧಿ ಹೇಳಿದ್ದ. ಆದರೆ, ಆತ ಸರಿದಾರಿಗೆ ಬಂದಿರಲಿಲ್ಲ.

ಗುರುವಾರ ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದ ವಿನಯ್‌, ತಾಯಿ ಜತೆ ಜಗಳ ತೆಗೆದು ಕಿಟಕಿಯ ಪರದೆಗಳನ್ನು ಹರಿದು ಹಾಕಿ, ಕಬ್ಬಿಣದ ಸರಳಿನಿಂದ ತಾಯಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ. ಸಂಜಯ್‌ ತಕ್ಷಣ ವಿನಯ್‌ನಿಂದ ಸರಳು ಕಿತ್ತುಕೊಂಡಿದ್ದ. ಈ ವೇಳೆ ಸಂಜಯ್‌ ಮೇಲೆ ಆತ ಹಲ್ಲೆ ಮಾಡಿದ್ದ. ಗಲಾಟೆಯ ಬಳಿಕ ತಾಯಿ ಜಯಂತಿ ಅವರು ತಮ್ಮ ಕೊಠಡಿಗೆ ತೆರಳಿ ಮಲಗಿದ್ದರು. ರಾತ್ರಿ ವೇಳೆ ಸಂಜಯ್‌ ಮತ್ತು ವಿನಯ್‌ ನಡುವೆ ಮತ್ತೆ ಜಗಳವಾಗಿದೆ. ಈ ವೇಳೆ ಚಾಕು ತೆಗೆದುಕೊಂಡ ಸಂಜಯ್‌, ವಿನಯ್‌ನ ಎದೆ ಮತ್ತು ಹೊಟ್ಟೆಗೆ ಹಲವು ಬಾರಿ ಇರಿದಿದ್ದ. ಕಿರುಚಾಟ ಕೇಳಿಸಿಕೊಂಡ ತಾಯಿ ಮತ್ತು ನೆರೆಹೊರೆಯವರು ಬಂದು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆತ ಮೃತಪಟ್ಟಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ