ಆ್ಯಪ್ನಗರ

ನಕಲಿ ಚಿನ್ನ ಮಾರಾಟ ಯತ್ನ: ಆರೋಪಿಗಳ ಬಂಧನ

ನದಿಯ ದಡದಲ್ಲಿ ತನಗೆ 5 ಕೆ ಜಿ ಚಿನ್ನದ ಒಡವೆಗಳು ಸಿಕ್ಕಿವೆ ಎಂದು ನಂಬಿಸಿ ಅದನ್ನು ಉದ್ಯಮಿಯೊಬ್ಬರಿಗೆ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಮಹಾಲಕ್ಷ್ಮಿ ಲೇಔಟ್‌ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Vijaya Karnataka 21 Jul 2018, 5:00 am
ಬೆಂಗಳೂರು: ನದಿಯ ದಡದಲ್ಲಿ ತನಗೆ 5 ಕೆ ಜಿ ಚಿನ್ನದ ಒಡವೆಗಳು ಸಿಕ್ಕಿವೆ ಎಂದು ನಂಬಿಸಿ ಅದನ್ನು ಉದ್ಯಮಿಯೊಬ್ಬರಿಗೆ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಮಹಾಲಕ್ಷ್ಮಿ ಲೇಔಟ್‌ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Vijaya Karnataka Web gold buiscuit


ಕುರುಬರಹಳ್ಳಿ ನಿವಾಸಿಯಾದ ಉದ್ಯಮಿ ಪರಮೇಶ್‌ ಎನ್ನುವವರಿಗೆ ವಂಚಕರು ಟೋಪಿ ಹಾಕಲು ಯತ್ನಿಸಿದ್ದರು. ಆದರೆ ಉದ್ಯಮಿ ತನ್ನ ಮಕ್ಕಳ ಜತೆ ಈ ಬಗ್ಗೆ ಚರ್ಚಿಸಿದಾಗ ಚಿನ್ನ ಮಾರಾಟಕ್ಕೆ ಬಂದಿರುವವರು ವಂಚಕರು ಎಂದು ತಿಳಿಸಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿ ಪರಾರಿ ಆಗುವ ಯತ್ನದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪರಮೇಶ್‌ ಅವರನ್ನು ಕಳೆದ 15 ದಿನಗಳ ಹಿಂದೆ ಸಂಪರ್ಕಿಸಿದ್ದ ಇಬ್ಬರು ವಂಚಕರು, ತಮ್ಮ ಬಳಿ 5 ಕೆಜಿ ಬಂಗಾರದ ಒಡವೆಗಳಿವೆ. ನದಿಯೊಂದರ ದಡದಲ್ಲಿ ಅದು ಸಿಕ್ಕಿದ್ದು. ಅದನ್ನು 50 ಲಕ್ಷಕ್ಕೆ ಮಾರಾಟ ಮಾಡಲು ಸಿದ್ಧರಿರುವುದಾಗಿ ತಿಳಿಸಿದ್ದರು. ಉದ್ಯಮಿ ಇವರನ್ನು ನಂಬಲು ಹಿಂದೆ ಮುಂದೆ ನೋಡಿದಾಗ ಸಣ್ಣದೊಂದು ಬಂಗಾರದ ತುಂಡನ್ನು ನೀಡಿದ್ದರು. ಉದ್ಯಮಿ ಅದನ್ನು ಪರೀಕ್ಷಿಸಿದಾಗ ಅದು ನಿಜವಾದದ್ದೇ ಆಗಿತ್ತು. ಆದ್ದರಿಂದ ಉಳಿದ ಬಂಗಾರವನ್ನೂ ಖರೀದಿಸಲು ಮನಸ್ಸು ಮಾಡಿದ್ದರು. ಕೊನೆ ಕ್ಷಣದಲ್ಲಿ ಈ ಬಗ್ಗೆ ತಮ್ಮ ಮಕ್ಕಳ ಜತೆ ಚರ್ಚಿಸಿದ್ದರು. ''ಆರಂಭದಲ್ಲಿ ಪರೀಕ್ಷಿಸಲು ಅಸಲಿ ಚಿನ್ನ ನೀಡಿ ನಂತರ ನಕಲಿ ಚಿನ್ನದ ಆಭರಣಗಳನ್ನು ನೀಡಿ ವಂಚಿಸುವ ಗ್ಯಾಂಗ್‌'' ಇರಬಹುದು ಎಂದು ಮಕ್ಕಳು ತಂದೆಗೆ ಎಚ್ಚರಿಸಿದ್ದರು. ಆ ನಂತರ ಅವರೇ ಪೊಲೀಸರಿಗೆ ಮಾಹಿತಿ ನೀಡಿ, ಒಡವೆಗಳನ್ನು ಖರೀದಿಸುವ ನೆಪದಲ್ಲಿ ಆರೋಪಿಗಳನ್ನು ಬರಲು ಹೇಳಿದ್ದರು. ಆರೋಪಿಗಳು ನಕಲಿ ಒಡವೆಗಳ ಸಮೇತ ಬರುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪೊಲೀಸರು ಸುತ್ತು ವರಿದರಾದರೂ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆರೋಪಿಗಳ ಯತ್ನ ವಿಫಲಗೊಳಿಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಅವರ ಬಳಿ ಇದ್ದ ನಕಲಿ ಚಿನ್ನವನ್ನೂ ವಶಕ್ಕೆ ಪಡೆದಿದ್ದಾರೆ.

''ಆರೋಪಿಗಳು ಪೊಲೀಸ್‌ ವಶದಲ್ಲಿದ್ದಾರೆ. ಉದ್ಯಮಿ ಪರಮೇಶ್‌ ಅವರು ಇನ್ನೂ ದೂರು ದಾಖಲಿಸಿಲ್ಲ. ದೂರು ದಾಖಲಿಸಿಕೊಂಡು ವಿಚಾರಣೆ ಪೂರ್ಣಗೊಳಿಸಿ ಎಫ್‌ಐಆರ್‌ ದಾಖಲಿಸಿದ ನಂತರ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲಾಗುವುದು'' ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ