ಆ್ಯಪ್ನಗರ

ಐಟಿ ಅಧಿಕಾರಿ ಸೋಗಿನಲ್ಲಿ ಬ್ಯಾಂಕ್‌ ಖಾತೆಗೆ ಕನ್ನ: ಆರೋಪಿ ಬಂಧನ

ಆದಾಯ ತೆರಿಗೆ ಇಲಾಖೆ ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರ ಬ್ಯಾಂಕ್‌ ಖಾತೆಗೆ ಕನ್ನ ಹಾಕಿ ಹಣ ಲಪಟಾಯಿಸುತ್ತಿದ್ದ ನಾಗಾಲ್ಯಾಂಡ್‌ ಮೂಲದ ಜಾನ್‌ ಕಜಿಛೆ (24) ಯನ್ನು ಸೈಬರ್‌ ಠಾಣೆ ಇನ್ಸ್‌ಪೆಕ್ಟರ್‌ ಯಶವಂತಕುಮಾರ್‌ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Vijaya Karnataka 22 Dec 2018, 5:00 am
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರ ಬ್ಯಾಂಕ್‌ ಖಾತೆಗೆ ಕನ್ನ ಹಾಕಿ ಹಣ ಲಪಟಾಯಿಸುತ್ತಿದ್ದ ನಾಗಾಲ್ಯಾಂಡ್‌ ಮೂಲದ ಜಾನ್‌ ಕಜಿಛೆ (24) ಯನ್ನು ಸೈಬರ್‌ ಠಾಣೆ ಇನ್ಸ್‌ಪೆಕ್ಟರ್‌ ಯಶವಂತಕುಮಾರ್‌ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
Vijaya Karnataka Web BNG-2112-2-2-KAJICHE


ವಂಚನೆ ಹೇಗೆ?: ಖಾತೆದಾರರ ಮೊಬೈಲ್‌ ಸಂಖ್ಯೆಗೆ ಕರೆ ಮಾಡುತ್ತಿದ್ದ ಆರೋಪಿ, ತನ್ನನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಆನಂತರ ''ನಿಮ್ಮ ಆದಾಯ ತೆರಿಗೆ ಖಾತೆಯನ್ನು ಅಪ್‌ಡೇಟ್‌ ಮಾಡಬೇಕಿದೆ. ಅದಕ್ಕಾಗಿ ನಿಮ್ಮ ಮೊಬೈಲ್‌ಗೆ ಒಂದು ಲಿಂಕ್‌ ಕಳುಹಿಸುತ್ತೇನೆ. ಅದನ್ನು ಓಪನ್‌ ಮಾಡಿದರೆ ಒಂದು ಒಟಿಪಿ ಸಂಖ್ಯೆ ಬರುತ್ತದೆ. ಅದರ ಬಗ್ಗೆ ತಿಳಿಸಿ'' ಎಂದು ಸಲಹೆ ನೀಡುತ್ತಿದ್ದ. ಈತನ ಮಾತನ್ನು ನಂಬಿದವರು ಅದೇ ರೀತಿ ಮಾಡುತ್ತಿದ್ದರು. ಹೀಗೇ ಅವರನ್ನು ವಂಚನೆಯ ಜಾಲಕ್ಕೆ ಕೆಡವಿಕೊಂಡು ಬ್ಯಾಂಕ್‌ ಖಾತೆಯ ಪಾಸ್‌ವರ್ಡ್‌ ಪಡೆದುಕೊಳ್ಳುತ್ತಿದ್ದ. ಖಾತೆದಾರರು ಈತನ ಜತೆ ಸಂಪರ್ಕದಲ್ಲಿದ್ದು, ಈತ ಕೇಳುವ ವಿವರಗಳನ್ನೆಲ್ಲಾ ಕೊಡುತ್ತಿದ್ದ ವೇಳೆಯಲ್ಲೇ ಈತನ ಸಹಚರರು ಪಾಸ್‌ವರ್ಡ್‌ ಮೂಲಕ ಖಾತೆಗೆ ಕನ್ನ ಹಾಕಿ ಲಕ್ಷಾಂತರ ರೂ. ಲಪಟಾಯಿಸಿಬಿಡುತ್ತಿದ್ದರು.

ಬನ್ನೇರುಘಟ್ಟ ರಸ್ತೆಯ ನೋಬೊ ನಗರದ ನಿವಾಸಿಯೊಬ್ಬರಿಗೂ ಇದೇ ರೀತಿ ವಂಚಿಸಿದ್ದ ಆರೋಪಿ, ಅವರ ಖಾತೆಯಿಂದ 2.2 ಲಕ್ಷ ರೂ. ಲಪಟಾಯಿಸಿದ್ದ. ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ ಸೈಬರ್‌ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಖಾತೆ ತೆರೆದಿದ್ದ: ಬಂಧಿತ ಆರೋಪಿ ತನ್ನ ವಂಚನೆಗೆ ಅನುಕೂಲ ಆಗಲೆಂದೇ ಆಡುಗೋಡಿಯ ಹೊಸೂರು ರಸ್ತೆಯಲ್ಲಿರುವ ಕೋಟಕ್‌ ಮಹೀಂದ್ರ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದ. ಆದರೆ ಖಾತೆಗೆ ಸಂಬಂಧಪಟ್ಟ ಎಟಿಎಂ ಕಾರ್ಡ್‌ ಅನ್ನು ದೂರದ ಊರಿನಲ್ಲಿರುವ ಸಹಚರನ ಕೈಗೆ ನೀಡಿರುವ ಆರೋಪಿ ತನ್ನ ಖಾತೆಗೆ ಹಣ ಬಂದ ಕೂಡಲೇ ಎಟಿಎಂ ಕಾರ್ಡ್‌ ಮೂಲಕ ಡ್ರಾ ಮಾಡಿಕೊಳ್ಳಲು ಸೂಚಿಸುತ್ತಿದ್ದ. ತಾನೇ ಹಣ ಡ್ರಾ ಮಾಡಿಕೊಳ್ಳಲು ಹೋದರೆ ಎಟಿಎಂ ಕೇಂದ್ರಗಳಲ್ಲಿರುವ ಸಿಸಿಟಿವಿಗಳಲ್ಲಿ ಮುಖಚಹರೆ ದಾಖಲಾಗಿ ಸಿಕ್ಕಿ ಬೀಳುವ ಭಯ ಈತನಿಗೆ ಇತ್ತು. ಆದರೆ ಆರೋಪಿಯನ್ನು ಬೆಂಗಳೂರಿನಲ್ಲೇ ಪತ್ತೆ ಹಚ್ಚಿರುವ ಸೈಬರ್‌ ತನಿಖಾ ತಂಡ ಆತನನ್ನು ಬಂಧಿಸಿ ವಿಚಾರಣೆಯನ್ನು ತೀವ್ರಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ