ಬೆಂಗಳೂರು: ಮದ್ಯದ ಅಮಲಿನಲ್ಲಿದ್ದ ಯುವಕ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತ ಬಹುಮಹಡಿ ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಘಟನೆ ಸಂಜಯ್ ನಗರದಲ್ಲಿ ನಡೆದಿದೆ.
ಗೆದ್ದಲಹಳ್ಳಿ ನಿವಾಸಿ, ಕೋಲಾರ ಜಿಲ್ಲೆ ಮಾಲೂರು ಮೂಲದ ಗಜೇಂದ್ರ (24) ಮೃತರು.ಬಿಇಎಲ್ನ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದ ಗಜೇಂದ್ರ 10 ವರ್ಷಗಳಿಂದ
ಗೆದ್ದಲಹಳ್ಳಿಯಲ್ಲಿ ಸ್ನೇಹಿತರೊಂದಿಗೆ ನೆಲೆಸಿದ್ದ.
ಕೆಲ ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ . ಇತ್ತೀಚೆಗೆ ಆಕೆಯೊಂದಿಗೆ ಭಿನ್ನಾಭಿಪ್ರಾಯ ಮೂಡಿತ್ತು. ಬುಧವಾರ ರಾತ್ರಿ 8.30ರ ಸುಮಾರಿಗೆ ಸ್ನೇಹಿತರ ಜತೆ ಮದ್ಯಪಾನ ಮಾಡಿದ್ದ ಗಜೇಂದ್ರ, ಸ್ನೇಹಿತನೊಬ್ಬನನ್ನು ಮನೆಗೆ ಡ್ರಾಪ್ ಮಾಡಿ ಆರ್ಎಂವಿ ಎರಡನೇ ಹಂತದಲ್ಲಿರುವ ಆರ್ಎಂವಿ ಡಯಾಗ್ನೋಸ್ಟಿಕ್ ಸೆಂಟರ್ ಇರುವ ಕಟ್ಟಡದ 4ನೇ ಮಹಡಿ ಹತ್ತಿದ್ದ. ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಲೇ 4 ಮಹಡಿ ಇದ್ದ ಕಟ್ಟಡದ ತಾರಸಿಗೆ ತೆರಳಿದ್ದಾನೆ. ಅನುಮಾನಗೊಂಡ ಭದ್ರತಾ ಸಿಬ್ಬಂದಿ ಹಿಂಬಾಲಿಸಿ ಯಾರೆಂದು ಕೂಗಿ ಕೇಳಿದ್ದಾರೆ. ಇದಕ್ಕೆ ಉತ್ತರಿಸುವ ಬದಲಾಗಿ ಆತ ಫೋನ್ನಲ್ಲಿ ಮಾತನಾಡುತ್ತಲೇ ಇದ್ದ. 'ಮೊದಲು ನೀನು ರೂಂನಿಂದ ಹೊರಗೆ ಬಾ' ಎಂದು ಜೋರಾಗಿ ಕಿರುಚಾಡಿದ್ದ. ತಾರಸಿಯಲ್ಲಿ ಮುಂದುವರಿದು ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪ್ರೇಯಸಿಯೊಂದಿಗೆ ಜಗಳ ?
ಭದ್ರತಾ ಸಿಬ್ಬಂದಿಯ ಹೇಳಿಕೆ ಗಮನಿಸಿದರೆ, ಆತ ಪ್ರೇಯಸಿಯೊಂದಿಗೆ ಜಗಳವಾಡುತ್ತಿದ್ದ ಅನುಮಾನವಿದೆ ಎಂದು ಸಂಜಯ್ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.