ವಿಕ ಸುದ್ದಿಲೋಕ ಬೆಂಗಳೂರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ದಾಂಧಲೆ ನಡೆಸಿದ್ದಲ್ಲದೆ, ಗುರಾಯಿಸಿ ನೋಡಿದ ಕಾರಣಕ್ಕೆ ಯುವಕನೊಬ್ಬನ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಮೂವರನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆ ನಿವಾಸಿಗಳಾದ ಮಂಜುನಾಥ್ (19), ರಂಜಿತ್ ಅಲಿಯಾಸ್ ಕೆಂಚ (23), ಸಂಜಯ್ (19) ಬಂಧಿತ ಆರೋಪಿಗಳು. ಮೂವರೂ ಯಾವುದೇ ಉದ್ಯೋಗ ಮಾಡದೆ, ಬೇರೆಯವರಿಗೆ ಭೀತಿ ಹುಟ್ಟಿಸಿ ಹಣ ಕೀಳುವ ಚಾಳಿ ಬೆಳೆಸಿಕೊಂಡಿದ್ದರು. ಹಣ ಕೀಳುವ ದೃಶ್ಯ ಘಟನಾ ಸ್ಥಳದಲ್ಲಿ ಸಿಸಿ ಕ್ಯಾಮೆರಾವೊಂದರಲ್ಲಿ ದಾಖಲಾಗಿದ್ದು, ಬಳಿಕ ವೈರಲ್ ಆಗಿತ್ತು.
ನಡೆದದ್ದೇನು ?
ಫೆ.28ರ ರಾತ್ರಿ 11.45ರಲ್ಲಿ ಚಾಮರಾಜಪೇಟೆ 4ನೇ ರಸ್ತೆಯಲ್ಲಿ ಘಟನೆ ನಡೆದಿತ್ತು. ಬಾರ್ನಲ್ಲಿ ಕಂಠಮಟ್ಟ ಕುಡಿದಿದ್ದ ದುಷ್ಕರ್ಮಿಗಳು ರಸ್ತೆಯಲ್ಲೇ ಮಚ್ಚನ್ನು ಬೀಸುತ್ತಾ ನಡೆದು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿ ಸ್ನೇಹಿತರ ಜತೆ ಮಾತನಾಡುತ್ತ ನಿಂತಿದ್ದ ಗೋಪಿನಾಥ್, ಆರೋಪಿಗಳ ಕಡೆ ನೋಡಿದ್ದರು. ನಮ್ಮನ್ನೇಕೆ ಗುರಾಯಿಸುತ್ತಿದ್ದೀಯ ಎಂದು ಕ್ಯಾತೆ ತೆಗೆದು ದುಷ್ಕರ್ಮಿಗಳು ಗೋಪಿನಾಥ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದ ಭೀಕರ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.