ಆ್ಯಪ್ನಗರ

ರೈಲಿನಲ್ಲಿ ಕಳವು ಮಾಡುತ್ತಿದ್ದ ಗ್ಯಾಂಗ್‌ ಸೆರೆ

ರೈಲ್ವೆ ಪೊಲೀಸರಿಗೆ ಹಲವು ತಿಂಗಳುಗಳಿಂದ ತಲೆನೋವಾಗಿದ್ದ ಕಳ್ಳತನ ಮತ್ತು ದರೋಡೆ ಗ್ಯಾಂಗ್‌ ಕೊನೆಗೂ ಬಲೆಗೆ ಬಿದ್ದಿದೆ.

Vijaya Karnataka 28 Feb 2019, 5:00 am
ಬೆಂಗಳೂರು : ರೈಲ್ವೆ ಪೊಲೀಸರಿಗೆ ಹಲವು ತಿಂಗಳುಗಳಿಂದ ತಲೆನೋವಾಗಿದ್ದ ಕಳ್ಳತನ ಮತ್ತು ದರೋಡೆ ಗ್ಯಾಂಗ್‌ ಕೊನೆಗೂ ಬಲೆಗೆ ಬಿದ್ದಿದೆ.
Vijaya Karnataka Web gang arrested
ರೈಲಿನಲ್ಲಿ ಕಳವು ಮಾಡುತ್ತಿದ್ದ ಗ್ಯಾಂಗ್‌ ಸೆರೆ


ಸಹ ಪ್ರಯಾಣಿಕರ ಸೋಗಿನಲ್ಲಿ ರೈಲ್ವೆ ಪ್ರಯಾಣಿಕರ ಲಗೇಜ್‌ ಇಳಿಸಲು ನೆರವಾಗುವ ಸೋಗಿನಲ್ಲಿ ಅವರ ಬ್ಯಾಗ್‌ನಿಂದ ಚಿನ್ನಾಭರಣ ಲಪಟಾಯಿಸುತ್ತಿದ್ದ ದೆಹಲಿ ಮೂಲದ ಐವರು ಕುಖ್ಯಾತ ಕಳ್ಳರನ್ನು ನಗರ ರೈಲ್ವೆ ಪೊಲೀಸರು ಬಂಧಿಸಿ 28 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ದೆಹಲಿ ನಾರ್ಥ್‌ವೆಸ್ಟ್‌ ಸುಲ್ತಾನ್‌ಪುರಿಯ ರಣವೀರ ಸಿಂಗ್‌(43), ಸತ್ಬೀರ(46), ವಿನೋದ್‌ (31), ಲಲಿತ್‌ ಕುಮಾರ್‌ (27), ಹರಿಯಾಣದ ಸುಭಾಷ್‌(44) ಬಂಧಿತರು. ಅಂತಾರಾಜ್ಯ ಚೋರರ ಬಂಧನದಿಂದ ಸುಮಾರು ಹತ್ತು ಪ್ರಕರಣಗಳನ್ನು ಪತ್ತೆ ಹಚ್ಚಿದಂತಾಗಿದೆ ಎಂದು ರೈಲ್ವೆ ಎಸ್‌ಪಿ ಭೀಮಾಶಂಕರ್‌ ಗುಳೇದ್‌ ತಿಳಿಸಿದರು.

ಕೃತ್ಯ ಹೇಗೆ ?

ರೈಲುಗಳಲ್ಲಿ ಮಾಮೂಲು ಪ್ರಯಾಣಿಕರಂತೆ ತೆರಳುವ ಗ್ಯಾಂಗ್‌ ಅಕ್ಕ ಪಕ್ಕದವರನ್ನು ಪರಿಚಯ ಮಾಡಿಕೊಳ್ಳುತ್ತಿತ್ತು. ಮಾತಿನ ನಡುವೆ ಅವರು ಇಳಿದುಕೊಳ್ಳುವ ನಿಲ್ದಾಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಹೆಚ್ಚಾಗಿ ವೃದ್ದರು ಮತ್ತು ಒಂಟಿ ಪ್ರಯಾಣಿಕರನ್ನು ಇವರು ಟಾರ್ಗೆಟ್‌ ಮಾಡುತ್ತಿದ್ದರು. ಲಗೇಜ್‌ ಇಳಿಸುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದರು. ಕೆಲವೊಮ್ಮೆ ಗುಂಪಾಗಿ ಅವರನ್ನು ಬೆದರಿಸಿ ದರೋಡೆ ಕೂಡ ನಡೆಸುತ್ತಿದ್ದರು. ರೈಲು ನಿಲ್ದಾಣಗಳಲ್ಲೇ ನಿಂತಿದ್ದು ರೈಲು ಹೊರಡಲು ಕೆಲ ಹೊತ್ತು ಬಾಕಿ ಇರುವಾಗ ಮಾತಿಗಿಳಿದು ಕಳ್ಳತನ ಮಾಡುತ್ತಿದ್ದರು. ಇವರ ವಿರುದ್ಧ ದಂಡು ರೈಲು ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ಠಾಣೆಗಳಲ್ಲಿ 10 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಈ ಬಗ್ಗೆ ನಿಗಾ ವಹಿಸಿದ್ದ ಪೊಲೀಸರ ತಂಡ ಸಿಸಿಟಿವಿಗಳಲ್ಲಿ ಆರೋಪಿಗಳ ಚಹರೆಗಳನ್ನು ಗುರುತು ಹಿಡಿದು ಬಂಧಿಸಿದೆ.

ಬಂಧಿತ ಗ್ಯಾಂಗ್‌ ಕಳೆದ ನಾಲ್ಕೈದು ವರ್ಷಗಳಿಂದ ಕೃತ್ಯದಲ್ಲಿ ತೊಡಗಿತ್ತು. ಐದೂ ಮಂದಿ ಆರೋಪಿಗಳೂ ಸಂಬಂಧಿಗಳಾಗಿದ್ದು, ರೈಲಿನಲ್ಲಿ ಕಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದರು. ಕದ್ದ ಮಾಲನ್ನು ದೆಹಲಿ, ಹರಿಯಾಣದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.


ಹೆಚ್ಚು ಬ್ಯಾಗ್‌ ಹೊಂದಿರುವವರೇ ಗುರಿ

ಐದಾರು ಬ್ಯಾಗ್‌ಗಳಿದ್ದರೆ ಅಂಥವರನ್ನೇ ಗ್ಯಾಂಗ್‌ ಗುರಿಯಾಗಿಸಿಕೊಳ್ಳುತ್ತಿತ್ತು. ಪ್ರಯಾಣಿಕರಿಗೆ ನೆರವಾಗುವ ಸೋಗಿನಲ್ಲಿ ಬ್ಯಾಗ್‌ ಎತ್ತಿಕೊಳ್ಳುತ್ತಿದ್ದ ಇವರು ಮೌಲ್ಯಯುತ ವಸ್ತುಗಳನ್ನು ಲಪಟಾಯಿಸುತ್ತಿದ್ದರು.

ಸಿಕ್ಕಿ ಬಿದ್ದಿದ್ದು ಹೇಗೆ?

ದಿಲ್ಲಿಯಿಂದ ರೈಲಿನಲ್ಲಿ ನಗರಕ್ಕೆ ಆಗಮಿಸಿದ್ದ ದಂಪತಿಗೆ ನೆರವಾಗುವ ಸೋಗಿನಲ್ಲಿ ಬ್ಯಾಗ್‌ ಇಳಿಸಿಕೊಟ್ಟಿದ್ದ ಗ್ಯಾಂಗ್‌ ಸದಸ್ಯರು 270 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ದಂಪತಿ ಮನೆಗೆ ಬಂದು ಬ್ಯಾಗ್‌ ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿತ್ತು. ಈ ಬಗ್ಗೆ ಕೆ.ಆರ್‌.ಪುರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಕೆ.ಆರ್‌.ಪುರ ರೈಲ್ವೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದಾಗ ಇತರೆಡೆಯಲ್ಲೂ ನಡೆಸಿದ್ದ ಕಳ್ಳತನಗಳ ಬಗ್ಗೆ ಬಾಯಿ ಬಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ