ಆ್ಯಪ್ನಗರ

ಗ್ಯಾಸ್‌ ಸೋರಿಕೆಯಿಂದ ಉಸಿರುಗಟ್ಟಿ ಬಾಲಕ ಸಾವು

ಗೃಹ ಬಳಕೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಬಾಲಕನೊಬ್ಬ ಮೃತಪಟ್ಟು, ಮತ್ತೊಬ್ಬ ಅಸ್ವಸ್ಥನಾಗಿರುವ ಘಟನೆ ಎಚ್‌ಎಎಲ್‌ ಸಮೀಪದ ಜಗದೀಶ ನಗರದಲ್ಲಿ ನಡೆದಿದೆ.

Vijaya Karnataka 9 Mar 2019, 5:00 am
ಬೆಂಗಳೂರು: ಗೃಹ ಬಳಕೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಬಾಲಕನೊಬ್ಬ ಮೃತಪಟ್ಟು, ಮತ್ತೊಬ್ಬ ಅಸ್ವಸ್ಥನಾಗಿರುವ ಘಟನೆ ಎಚ್‌ಎಎಲ್‌ ಸಮೀಪದ ಜಗದೀಶ ನಗರದಲ್ಲಿ ನಡೆದಿದೆ.
Vijaya Karnataka Web 1CFB73F8-BD27-49B7-87A3-055F008BF0C6


ನೇಪಾಳ ಮೂಲದ ಕಲಾವತಿ ಎಂಬುವರ ಪುತ್ರ ಸಮೀರ್‌ (13) ಮೃತಪಟ್ಟಿದ್ದು, ಅಸ್ವಸ್ಥಗೊಂಡಿರುವ ಶಂಶೀರ್‌(5) ಎಂಬಾತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಜಗದೀಶ್‌ನಗರದ ಚರ್ಚ್‌ ಸಮೀಪದ ಮನೆಯೊಂದರ ಮೆಟ್ಟಿಲುಗಳ ಕೆಳ ಭಾಗದ ಖಾಲಿ ಜಾಗವನ್ನೇ ಚಿಕ್ಕ ಕೊಠಡಿ ಮಾಡಿಕೊಂಡು ಅದರಲ್ಲಿ ಕಲಾವತಿ ತಮ್ಮ ಇಬ್ಬರು ಮಕ್ಕಳ ಜತೆ ವಾಸವಿದ್ದರು. ಕಲಾವತಿ ಮನೆ ಕೆಲಸ ಮಾಡಿಕೊಂಡು ಇಬ್ಬರು ಮಕ್ಕಳನ್ನು ಸಾಕುತ್ತಿದ್ದರು. ಖಾಸಗಿ ಶಾಲೆಯಲ್ಲಿ ಸಮೀರ್‌ 5ನೇ ತರಗತಿ ಓದುತ್ತಿದ್ದ. ಶಂಶೀರ್‌ ಒಂದನೇ ತರಗತಿಯಲ್ಲಿ ಓದುತ್ತಿದ್ದಾನೆ.

ಪ್ರತಿದಿನದಂತೆ ಶನಿವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಕಲಾವತಿ ಕೆಲಸಕ್ಕೆ ಹೊರಡುವ ಮುನ್ನ ಮಕ್ಕಳಿಗೆ ಬಾಗಿಲು ಹಾಕಿಕೊಂಡು ಮಲಗುವಂತೆ ಹೇಳಿದ್ದರು. ಅದರಂತೆ ಮಕ್ಕಳು ಬಾಗಿಲು ಹಾಕಿಕೊಂಡು ಮಲಗಿದ್ದಾರೆ. ಕೆಲಸ ಮುಗಿಸಿಕೊಂಡು ಎಂಟು ಗಂಟೆ ಸುಮಾರಿಗೆ ಕಲಾವತಿ ವಾಪಸ್‌ ಮನೆಗೆ ಬಂದಾಗ ಬಾಗಿಲ ಬಳಿಯೇ ಗ್ಯಾಸ್‌ ವಾಸನೆ ಗ್ರಹಿಸಿದ್ದಾರೆ. ಬಾಗಿಲು ಬಡಿದಾಗ ತೆಗೆದಿಲ್ಲ. ಹೀಗಾಗಿ, ಆತಂಕಗೊಂಡು ಸ್ಥಳೀಯರನ್ನು ಕರೆಸಿ ಬಾಗಿಲು ಒಡೆದು ನೋಡಿದಾಗ, ಮಕ್ಕಳಿಬ್ಬರು ಹಾಸಿಗೆ ಮೇಲೆ ಮಲಗಿದಲ್ಲೇ ಪ್ರಜ್ಞಾಹೀನರಾಗಿದ್ದರು. ಕೂಡಲೇ ಇಬ್ಬರನ್ನೂ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಸಮೀರ್‌ ಮೃತಪಟ್ಟಿರುವುದು ಧೃಡವಾಗಿದೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಶಂಶೀರ್‌ನನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕಿಟಕಿ ಇಲ್ಲದ ಕೊಠಡಿ: ಕಲಾವತಿ ಅವರ ಪತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಹೀಗಾಗಿ, ಮಕ್ಕಳ ಜೊತೆ ಮೆಟ್ಟಿಲ ಕೆಳಭಾಗದ ಖಾಲಿ ಜಾಗವನ್ನೇ ಕೊಠಡಿ ಮಾಡಿಕೊಂಡು ಅಲ್ಲೇ ಬಾಡಿಗೆಗೆ ವಾಸವಿದ್ದರು. ಬಾಗಿಲು ಮುಚ್ಚಿದರೆ ಗಾಳಿಯಾಡಲು ಯಾವುದೇ ವ್ಯವಸ್ಥೆ ಇಲ್ಲ. ಬೆಳಕು ಕೂಡಾ ಒಳಗೆ ಪ್ರವೇಶಿಸುವುದಿಲ್ಲ ಎಂದು ಪೊಲೀಸರು ತಿಳಿಸಿದರು.

ಏಜೆನ್ಸಿ, ನೌಕರನ ವಿರುದ್ಧ ಕೇಸ್‌: ಗ್ಯಾಸ್‌ ಏಜೆನ್ಸಿಯ ಸಿಬ್ಬಂದಿ ಸಿಲಿಂಡರ್‌ ಮತ್ತು ಸ್ಟೌ ನಡುವೆ ಸರಿಯಾದ ರೀತಿಯಲ್ಲಿ ಸಂಪರ್ಕ ಕಲ್ಪಿಸದ ಕಾರಣ ಗ್ಯಾಸ್‌ ಸೋರಿಕೆಯಾಗಿ ಮಗ ಮೃತಪಟ್ಟು ಮತ್ತೊಬ್ಬ ಅಸ್ವಸ್ಥಗೊಂಡಿದ್ದಾನೆ. ಏಜೆನ್ಸಿಯ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಮಕ್ಕಳ ತಾಯಿ ದೂರಿನಲ್ಲಿ ಕೋರಿದ್ದಾರೆ. ಹೀಗಾಗಿ, ಗ್ಯಾಸ್‌ ಏಜೆನ್ಸಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ