ಆ್ಯಪ್ನಗರ

ಟಿವಿ ಪ್ರಭಾವಕ್ಕೆ ಒಳಗಾಗಿ ಬಾಲಕಿ ಆತ್ಮಹತ್ಯೆ?

ಬಾಗಲಗುಂಟೆ ನಿವಾಸಿಗಳಾದ ರಂಗೇಗೌಡ ಮತ್ತು ಶಾರದಾ ದಂಪತಿಯ ಪುತ್ರಿ ಪೂಜಾ ಮೃತ ಬಾಲಕಿ. ಈಕೆ ಖಾಸಗಿ ಶಾಲೆಯೊಂದರಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.

Vijaya Karnataka 8 May 2019, 7:43 am
ಬೆಂಗಳೂರು: ಹನ್ನೊಂದು ವರ್ಷದ ಬಾಲಕಿಯೊಬ್ಬಳು ಮನೆಯಲ್ಲಿ ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಟಿವಿ ಪ್ರಭಾವಕ್ಕೆ ಒಳಗಾಗಿ ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
Vijaya Karnataka Web suicide


ಬಾಗಲಗುಂಟೆ ನಿವಾಸಿಗಳಾದ ರಂಗೇಗೌಡ ಮತ್ತು ಶಾರದಾ ದಂಪತಿಯ ಪುತ್ರಿ ಪೂಜಾ ಮೃತ ಬಾಲಕಿ. ಈಕೆ ಖಾಸಗಿ ಶಾಲೆಯೊಂದರಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.

ಆಂಧ್ರಪ್ರದೇಶದ ಮಡಕಶಿರಾ ಮೂಲದ ರಂಗೇಗೌಡ ತಳ್ಳುಗಾಡಿಯಲ್ಲಿ ಗೋಬಿ ಮಂಚೂರಿ ವ್ಯಾಪಾರ ಮಾಡುತ್ತಾರೆ. ಇವರ ಕೆಲಸಕ್ಕೆ ಪತ್ನಿ ಸಹಕರಿಸುತ್ತಿದ್ದರು. ಸೋಮವಾರ ಸಂಜೆ ಎಂದಿನಂತೆ ದಂಪತಿ, ಗೋಬಿ ಮಂಚೂರಿ ವ್ಯಾಪಾರಕ್ಕೆ ತೆರಳಿದ್ದರು. ಬಾಲಕಿ ಪೂಜಾ ಮನೆಯಲ್ಲಿ ಟಿವಿ ನೋಡಿಕೊಂಡು ಇದ್ದಳು. ರಾತ್ರಿ 9.30ರ ಸುಮಾರಿಗೆ ವ್ಯಾಪಾರ ಮುಗಿಸಿಕೊಂಡು ದಂಪತಿ ಮನೆಗೆ ಆಗಮಿಸಿದಾಗ ಬಾಲಕಿ ಟವೆಲ್‌ನಿಂದ ನೇಣು ಹಾಕಿಕೊಂಡಿರುವುದು ಕಾಣಿಸಿದೆ. ಕೂಡಲೇ ಆಕೆಯನ್ನು ಪಾಲಕರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದು, ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಬಾಗಲಗುಂಟೆ ಪೊಲೀಸರು ತಿಳಿಸಿದರು.

ಟವೆಲ್‌ನಿಂದ ಆತ್ಮಹತ್ಯೆ

ಪುಟ್ಟ ಮನೆಯ ಒಳಭಾಗದಲ್ಲೇ ಬಟ್ಟೆ ಒಣಗಿಸಲು ಒಂದು ಬದಿಯಿಂದ ಮತ್ತೊಂದು ಬದಿಗೆ ಹಗ್ಗ ಕಟ್ಟಲಾಗಿದೆ. ಆ ಹಗ್ಗದ ನಡುವೆ ಟವಲ್‌ ಅನ್ನು ಕುತ್ತಿಗೆಗೆ ಕಟ್ಟಿಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

''ಬಾಲಕಿಗೆ ಯಾರಾದರೂ ತೊಂದರೆ, ಕಿರುಕುಳ ನೀಡುತ್ತಿರುವ, ನೀಡಿರುವ ಯಾವುದೇ ಘಟನೆಗಳು ನಡೆದಿಲ್ಲ ಎಂದು ಪಾಲಕರು ತಿಳಿಸಿದ್ದಾರೆ. ಅಲ್ಲದೆ, ಆಕೆ ಏನಾದರೂ ನಿರ್ದಿಷ್ಟ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲು ವಯೋ ಪ್ರೌಢಿಮೆಯೂ ಇಲ್ಲ. ಹೀಗಾಗಿ, ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ'' ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.


ಟಿವಿ ಆನ್‌ ಆಗಿಯೇ ಇತ್ತು


ಬಾಲಕಿ ಟಿವಿಯನ್ನು ನೋಡುತ್ತಿದ್ದಳು. ಅದರಲ್ಲಿ ಬರುವ ಕಾರ್ಯಕ್ರಮಗಳು, ಸಿನಿಮಾಗಳಿಂದ ಪ್ರಭಾವಿತಳಾಗಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಾಣಿಸುತ್ತದೆ. ಪಾಲಕರು ಮನೆಗೆ ಬಂದಾಗ ಟಿವಿ ಆನ್‌ನಲ್ಲೇ ಇತ್ತು. ಅಲ್ಲದೇ, ಮನೆಯೊಳಗೆ ಬೇರೆಯವರು ಪ್ರವೇಶಿಸಿರುವುದು ಅಥವಾ ಚೆಲ್ಲಾಪಿಲ್ಲಿಯಾಗಿರುವಂತೆ ಅಹಿತಕರ ಘಟನೆ ನಡೆದಿರುವುದು ಕಂಡು ಬಂದಿಲ್ಲ. ಮತ್ತಷ್ಟು ತನಿಖೆ ನಂತರ ಹೆಚ್ಚಿನ ಮಾಹಿತಿ ಲಭಿಸುತ್ತದೆ ಎಂದು ಪೊಲೀಸ್‌ ಅಧಿಕಾರಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ