ಆ್ಯಪ್ನಗರ

ಕಳ್ಳಿಯನ್ನು ಬೆನ್ನತ್ತಿ ಹಿಡಿದ ಗೃಹಿಣಿ

ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸೋದರಿಯರನ್ನು ಗೃಹಿಣಿಯೊಬ್ಬರು ಧೈರ್ಯದಿಂದ ಬೆನ್ನತ್ತಿ ಒಬ್ಬಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಕ ಸುದ್ದಿಲೋಕ 5 Nov 2016, 4:36 am
ಮೈಸೂರು: ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸೋದರಿಯರನ್ನು ಗೃಹಿಣಿಯೊಬ್ಬರು ಧೈರ್ಯದಿಂದ ಬೆನ್ನತ್ತಿ ಒಬ್ಬಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Vijaya Karnataka Web housewife caught chasing stolen jewelery
ಕಳ್ಳಿಯನ್ನು ಬೆನ್ನತ್ತಿ ಹಿಡಿದ ಗೃಹಿಣಿ


ಅಗ್ರಹಾರದ ನಿವಾಸಿ ಸಂದೀಪ್‌ ಅವರ ಪತ್ನಿ ದಿವ್ಯಾ ಈ ಸಾಹಸಿ. ಆಂಧ್ರ ಮೂಲದ ಈ ಇಬ್ಬರು ಸೋದರಿಯರನ್ನು ಸುಮಾರು ಒಂದು ಗಂಟೆ ಬೆನ್ನತ್ತಿದ್ದ ದಿವ್ಯಾ, ಒಬ್ಬಳನ್ನು ಹಿಡಿದು ಚಿನ್ನಾಭರಣ ಸಮೇತ ಪೊಲೀಸರಿಗೆ ಒಪ್ಪಿಸಿದ್ದು, ಮತ್ತೊಬ್ಬಳು ಪರಾರಿಯಾಗಿದ್ದಾಳೆ.

ಆಗಿದ್ದಿಷ್ಟು: ಶುಕ್ರವಾರ ಮಧ್ಯಾಹ್ನ ನಟರಾಜ ಕಾಲೇಜು ಬಳಿ ಶ್ರೀರಾಮ ರಸ್ತೆಯ ಸಮೀಪ ತೆರಳುತ್ತಿದ್ದ ದಿವ್ಯಾ ಅವರ ಬಳಿ ಬಂದ 15 ವರ್ಷದ ಒಬ್ಬ ಬಾಲಕಿ, ಕೆ.ಆರ್‌.ಆಸ್ಪತ್ರೆಯ ವಿಳಾಸ ಕೇಳಿದ್ದಾರೆ. ದಾರಿ ತೋರಿಸಿದ ಬಳಿಕ ಮತ್ತೆ ದಿವ್ಯಾ ಅವರನ್ನೇ ಹಿಂಬಾಲಿಸಿದ ಆಕೆ, ‘‘ನಮ್ಮ ತಂದೆ ನಾಪತ್ತೆಯಾಗಿದ್ದು ಊರಿಗೆ ತೆರಳಲು ಹಣವಿಲ್ಲ. ಈ ಚಿನ್ನದ ಸರವನ್ನು ಪಡೆದು ಹಣ ನೀಡಿ,’’ ಎಂದು ಕೇಳಿದ್ದಾಳೆ. ‘‘ಈ ಚಿನ್ನಾಭರಣ ಎಲ್ಲಿಂದ ಬಂತು,’’ ಎಂದು ದಿವ್ಯಾ ಪ್ರಶ್ನಿಸುತ್ತಿದ್ದಂತೆ ಬಾಲಕಿಯ ಅಕ್ಕ ಆರೇಳು ತಿಂಗಳ ಮಗುವಿನೊಂದಿಗೆ ಹತ್ತಿರ ಬಂದು ’’ಚಿನ್ನಾಭರಣ ನಮ್ಮವೇ. ಗಿರವಿ ಅಂಗಡಿಯಲ್ಲಿ ಕೇಳಿದರೆ ಅನುಮಾನಪಡುತ್ತಾರೆ. ಆದ್ದರಿಂದ ನೀವೇ ಹಣ ನೀಡಿ,’’ ಎಂದು ತಮ್ಮಲ್ಲಿದ್ದ ಹಳೆಯ ಕಾಲದ ಚಿನ್ನದ ಸರ, ಚಿನ್ನದ ಕಾಸು ಸೇರಿದಂತೆ ಹಲವು ಆಭರಣಗಳನ್ನು ತೋರಿಸಿದ್ದಾರೆ. ಅನುಮಾನಗೊಂಡ ದಿವ್ಯಾ ಇನ್ನಷ್ಟು ಪ್ರಶ್ನೆ ಹಾಕುತ್ತಿದ್ದಂತೆ ಇಬ್ಬರೂ ಕಾಲ್ಕಿತ್ತಿದ್ದಾರೆ.

ದಿವ್ಯಾ ಅವರು ಅಗ್ರಹಾರ ವೃತ್ತದ ಬಳಿ ಕರ್ತವ್ಯನಿರತರಾಗಿದ್ದ ಪೊಲೀಸ್‌ ಪೇದೆಗೆ ಮಾಹಿತಿ ನೀಡಿ ಅವರನ್ನೂ ಕರೆದುಕೊಂಡು ಆಟೋ ರಿಕ್ಷಾದಲ್ಲಿ ಬೆನ್ನತ್ತಿದ್ದಾರೆ. ಚಾಮರಾಜ ಜೋಡಿ ರಸ್ತೆಯ ಸಹಕಾರ ಭವನದ ಎದುರು, ಆ ಇಬ್ಬರೂ ಸಿಕ್ಕಿದ್ದಾರೆ. ತಕ್ಷಣ ಆಟೋ ರಿಕ್ಷಾದಿಂದ ಇಳಿದು ಹೋಗಿ ಪೊಲೀಸ್‌ ಪೇದೆಯ ನೆರವಿನಿಂದ ಹಿಡಿದುಕೊಂಡಿದ್ದಾರೆ. ಆದರೆ ಜತೆಯಲ್ಲಿದ್ದ ಬಾಲಕಿ ಪರಾರಿಯಾಗಿದ್ದಾಳೆ. ಮಹಿಳೆಯನ್ನು ವಶಕ್ಕೆ ಪಡೆದ ಕೆ.ಆರ್‌.ಠಾಣೆ ಪೊಲೀಸರು, ಆಕೆಯ ಬಳಿಯಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ