ಆ್ಯಪ್ನಗರ

ಪ್ರಿಯಕರನ ಜತೆ ಸೇರಿ ಪತಿ ಕೊಲೆ: ಬಂಧನ

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನ ಜತೆ ಸೇರಿ ಪತ್ನಿಯೇ ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ.

Vijaya Karnataka 19 Mar 2019, 5:00 am
ಬೆಂಗಳೂರು : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನ ಜತೆ ಸೇರಿ ಪತ್ನಿಯೇ ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ.
Vijaya Karnataka Web husbands murder wife arrest
ಪ್ರಿಯಕರನ ಜತೆ ಸೇರಿ ಪತಿ ಕೊಲೆ: ಬಂಧನ


ಹೆಸರುಘಟ್ಟದ ದಾಸೇನಹಳ್ಳಿ ಗ್ರಾಮದ ಸುಖಿತಾ(30) ಹಾಗೂ ಆಕೆಯ ಪ್ರಿಯಕರ ಶ್ರೀನಿವಾಸ (31) ಬಂಧಿತರು. ಇವರಿಬ್ಬರೂ ಸೇರಿ ಉಮಾಶಂಕರ್‌ ಅವರನ್ನು ಕೊಲೆ ಮಾಡಿ ಹೃದಯಾಘಾತದಿಂದ ಸಾವು ಎಂದು ನಾಟಕ ಆಡಿದ್ದರು.

ನಡೆದದ್ದೇನು ?

15 ವರ್ಷಗಳ ಹಿಂದೆ ಸುಖಿತಾ ಮತ್ತು ಉಮಾಶಂಖರ್‌ ವಿವಾಹ ಆಗಿದ್ದರು. ಇವರ ದಾಂಪತ್ಯಕ್ಕೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಉಮಾಶಂಕರ್‌ಗೆ ಕುಡಿತದ ಚಟ ಇತ್ತು. ಇದೇ ಕಾರಣಕ್ಕೆ ಸಂಸಾರದಲ್ಲಿ ಜಗಳ ಮಾಮೂಲಾಗಿತ್ತು. ಈ ನಡುವೆ ಸುಖಿತಾ ಆಟೋ ಚಾಲಕ ಶ್ರೀನಿವಾಸ್‌ ಜತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದಳು. ದಾಸೇನಹಳ್ಳಿ ಗ್ರಾಮದವನೇ ಆದ ಶ್ರೀನಿವಾಸ್‌ ಆಗಾಗ ಮನೆಗೆ ಬಂದು ಹೋಗುತ್ತಿರುವ ವಿಚಾರ ಉಮಾಶಂಕರ್‌ಗೆ ಗೊತ್ತಾಗಿತ್ತು. ಇದನ್ನು ಪ್ರಶ್ನಿಸಿದಾಗ ಸುಖಿತಾ ಆರೋಪ ನಿರಾಕರಿಸಿ ತಾನು ಅಂಥವಳಲ್ಲ ಎಂದೇ ವಾದ ಮಾಡಿದ್ದಳು. ನಂತರದ ದಿನಗಳಲ್ಲಿ ಶ್ರೀನಿವಾಸ್‌ನ ಮೇಲೆ ನಿಗಾ ಇಟ್ಟಿದ್ದ ಉಮಾಶಂಕರ್‌ ಒಮ್ಮೆ ತಾನು ಮನೆಯಲ್ಲಿ ಇಲ್ಲದಿದ್ದಾಗ ಆತ ಮನೆಗೆ ಬಂದು ಹೋಗಿದ್ದನ್ನು ಪತ್ತೆಹಚ್ಚಿ ಪತ್ನಿ ಜತೆ ಜಗಳ ಆಡಿದ್ದ. ಇದಾಗಿ ಕೆಲ ದಿನಗಳಲ್ಲೇ ಸುಖಿತಾ, ಶ್ರೀನಿವಾಸ್‌ ಜತೆಗಿದ್ದದ್ದನ್ನು ರೆಡ್‌ ಹ್ಯಾಂಡಾಗಿ ಹಿಡಿದಿದ್ದ. ಬಳಿಕ ಪತ್ನಿ ಮೇಲೆ ಹಲ್ಲೆ ನಡೆಸಿದ್ದ.

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಉಮಾಶಂಕರನನ್ನು ಮುಗಿಸಲು ಇಬ್ಬರೂ ತೀರ್ಮಾನಿಸಿದ್ದರು. ಫೆ.25 ರಂದು ಪತಿ ಕುಡಿದು ಮನೆಗೆ ಬಂದಿದ್ದ ಸಮಯಲ್ಲಿ ಸುಖಿತಾ ಪ್ರಿಯಕರನನ್ನು ಮನೆಗೆ ಕರೆಯಿಸಿಕೊಂಡಿದ್ದಳು. ಇಬ್ಬರೂ ಸೇರಿ ತಲೆ ದಿಂಬನ್ನು ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಆ ನಂತರ ಏನೂ ನಡೆದೇ ಇಲ್ಲ ಎನ್ನುವಂತೆ ನಾಟಕ ಆಡಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದ ಸುಖಿತಾ, ಪತಿ ಶವದ ಎದುರು ಅಕ್ಕ ಪಕ್ಕದವರೆಲ್ಲಾ ನೋಡುವಂತೆ ಗೋಳಾಡಿದ್ದಳು ಎಂದು ಪೊಲೀಸರು ತಿಳಿಸಿದರು.

ಸ್ಥಳಕ್ಕೆ ಬಂದಿದ್ದ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಸುಮ್ಮನಾಗಿದ್ದರು. ಆದರೆ, ಕೆಲ ದಿನಗಳ ಬಳಿಕ ಉಮಾಶಂಕರ್‌ ಅವರ ಸಂಬಂಧಿ ಅಶ್ವಥಪ್ಪ ಅವರು ಠಾಣೆಗೆ ಬಂದು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಅಷ್ಟು ಹೊತ್ತಿಗೆ ಶವ ಪರೀಕ್ಷೆಯ ವರದಿಯೂ ಪೊಲೀಸರ ಕೈ ಸೇರಿತ್ತು. ಬಲವಂತದಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಆಧಾರದಲ್ಲಿ ಸುಖಿತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಳು. ಈಕೆಯೇ ಕೊಟ್ಟ ಮಾಹಿತಿ ಮೇರೆಗೆ ಈಕೆಯ ಪ್ರಿಯಕರನನ್ನೂ ಬಂಧಿಸಿರುವ ಪೊಲೀಸರು ಇಬ್ಬರನ್ನೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ