ಆ್ಯಪ್ನಗರ

ಆಭರಣ ದೋಚಿದ ಖದೀಮರು

ಬ್ಯಾಂಕ್‌ ಲಾಕರ್‌ನಿಂದ ಚಿನ್ನ ತೆಗೆದುಕೊಂಡು ಕಾರಿನಲ್ಲಿ ಮನೆಗೆ ಹೋಗುತ್ತಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಲೂಟಿ ಮಾಡಿದ ಘಟನೆ ಎಚ್‌ಆರ್‌ಬಿಆರ್‌ ಲೇಔಟ್‌ನಲ್ಲಿ ನಡೆದಿದೆ.

Vijaya Karnataka 28 Apr 2018, 5:00 am
ಬೆಂಗಳೂರು: ಬ್ಯಾಂಕ್‌ ಲಾಕರ್‌ನಿಂದ ಚಿನ್ನ ತೆಗೆದುಕೊಂಡು ಕಾರಿನಲ್ಲಿ ಮನೆಗೆ ಹೋಗುತ್ತಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಲೂಟಿ ಮಾಡಿದ ಘಟನೆ ಎಚ್‌ಆರ್‌ಬಿಆರ್‌ ಲೇಔಟ್‌ನಲ್ಲಿ ನಡೆದಿದೆ.
Vijaya Karnataka Web jewelry grab
ಆಭರಣ ದೋಚಿದ ಖದೀಮರು


ಎಚ್‌ಆರ್‌ಬಿಆರ್‌ ಲೇಔಟ್‌ 1ನೇ ಬ್ಲಾಕ್‌ ನಿವಾಸಿ ಲಕ್ಷ್ಮೇಪ್ರಸನ್ನ ರೆಡ್ಡಿ ಲಕ್ಷಾಂತರ ರೂ. ಮೌಲ್ಯದ ಆಭರಣ ಕಳೆದುಕೊಂಡವರು. ಬುಧವಾರ ಮಧ್ಯಾಹ್ನ ಮನೆಯಿಂದ ತಮ್ಮ ಕಾರಿನಲ್ಲಿ ಎಚ್‌ಆರ್‌ಬಿಆರ್‌ ಲೇಔಟ್‌ 100 ಅಡಿ ರಸ್ತೆಯಲ್ಲಿರುವ ಆಂಧ್ರಾ ಬ್ಯಾಂಕ್‌ಗೆ ಹೋಗಿದ್ದ ಪ್ರಸನ್ನ ರೆಡ್ಡಿ, ಲಾಕರ್‌ನಲ್ಲಿದ್ದ 18 ಚಿನ್ನದ ಬಳೆಗಳು, 5 ಸರ ಮತ್ತಿತರ ಒಡವೆಗಳನ್ನು ಬಿಡಿಸಿಕೊಂಡು ಬ್ಯಾಗ್‌ನಲ್ಲಿ ಹಾಕಿಕೊಂಡು 3 ಗಂಟೆ ಸುಮಾರಿಗೆ ಹೊರ ಬಂದಿದ್ದಾರೆ. ಅದೇ ವೇಳೆಗೆ ದುಷ್ಕರ್ಮಿಯೊಬ್ಬ ಅವರ ಬಳಿ ಬಂದು, ಕಾರಿನ ಬಳಿ ಹಣ ಬಿದ್ದಿದೆ ನೋಡಿ ನಿಮ್ಮದಿರಬೇಕು ಎಂದು ಹೇಳಿದ್ದಾನೆ. ಹಣ ನನ್ನದಲ್ಲ ಎಂದು ಹೇಳಿದ ಪ್ರಸನ್ನ ರೆಡ್ಡಿ, ಕಾರು ಚಲಾಯಿಸಿಕೊಂಡು ಮನೆಗೆ ಹೋಗಿದ್ದಾರೆ. 3.15ರ ಸುಮಾರಿಗೆ ಮನೆಗೆ ಬಂದ ಅವರನ್ನು ಕಾರನ್ನು ಪಾರ್ಕ್‌ ಮಾಡಿ ಚಿನ್ನವಿದ್ದ ಬ್ಯಾಗ್‌ ಎತ್ತಿಕೊಂಡು ಒಳಗೆ ಹೋಗುತ್ತಿದ್ದಂತೆ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿ ಬ್ಯಾಗ್‌ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಈ ಸಂಬಂಧ ಪ್ರಸನ್ನ ರೆಡ್ಡಿ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಲವು ಆಭರಣ ಹಳೆಯದಾಗಿರುವ ಕಾರಣ ನಿಖರ ಮೌಲ್ಯ ತಿಳಿದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

''ಬ್ಯಾಂಕ್‌ ಬಳಿ ಹಣ ಬಿದ್ದಿದೆ ಎಂದು ಹೇಳಿ ಗಮನ ಬೇರೆಡೆ ಸೆಳೆಯಲು ಯತ್ನಿಸಿದ ತಂಡವೇ ಬ್ಯಾಗ್‌ ಕದಿಯಲು ಪ್ರಸನ್ನ ರೆಡ್ಡಿಯವರ ಕಾರನ್ನು ಹಿಂಬಾಲಿಸಿಕೊಂಡು ಬಂದು ಬ್ಯಾಗ್‌ ದೋಚಿರುವ ಸಾಧ್ಯತೆ ಇದೆ,'' ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ಆರಂಭಿಸಿರುವ ಪೊಲೀಸರು ಬ್ಯಾಂಕ್‌ ಹಾಗೂ ಘಟನೆ ನಡೆದ ಸ್ಥಳದಲ್ಲಿರುವ ಕಟ್ಟಡಗಳಲ್ಲಿನ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ.ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳ ಬಳಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಆಭರಣ ಹಾಗೂ ಹಣ ದೋಚುವುದರಲ್ಲಿ ಕುಖ್ಯಾತಿ ಪಡೆದಿರುವ ಆಂಧ್ರಪ್ರದೇಶದ ಒಜಿ ಕುಪ್ಪಂ ಗ್ಯಾಂಗ್‌ನ ಕೈವಾಡ,'' ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ