ಆ್ಯಪ್ನಗರ

ಜಿಮ್‌ ಟ್ರೇನರ್‌ ಇರ್ಫಾನ್‌ ಕೊಲೆ ಆರೋಪಿಗಳ ಬಂಧನ

ತನ್ನ ಮಗಳನ್ನು ಮಾತನಾಡಿಸುತ್ತಿದ್ದ ಎನ್ನುವ ಕಾರಣದಿಂದ ತಂದೆ ಮತ್ತು ಗಂಡು ಮಕ್ಕಳು ಸೇರಿ ಯುವಕನೊಬ್ಬನಿಗೆ ಮಚ್ಚಿನಿಂದ ಹೊಡೆದು, ಡ್ಯಾಗರ್‌ನಿಂದ ಚುಚ್ಚಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಭೀಕರ ಘಟನೆ ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದಲ್ಲಿ ನಡೆದಿದೆ. ಆರೋಪಿ ರೌಡಿ ...

Vijaya Karnataka 29 Nov 2018, 5:00 am
ಬೆಂಗಳೂರು : ಶಿವಾಜಿನಗರದ ಜಿಮ್‌ ತರಬೇತುದಾರ ಇರ್ಫಾನ್‌ ಅಲಿಯಾಸ್‌ ಮಚ್ಚಿ ಕೊಲೆ ಪ್ರಕರಣದಲ್ಲಿ ಮಾಜಿ ಕಾರ್ಪೋರೇಟರ್‌ ದಿವಾನ ಅಲಿ ಕೊಲೆ ಪ್ರಕರಣದ ಆರೋಪಿ ರೌಡಿ ಶೀಟರ್‌ ಬರ್ಖತ್‌ ಅಲಿ ಸೇರಿ ಆರು ಮಂದಿಯನ್ನು ಪೂರ್ವ ಡಿಸಿಪಿ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.
Vijaya Karnataka Web jim trainer irfan murder arrest
ಜಿಮ್‌ ಟ್ರೇನರ್‌ ಇರ್ಫಾನ್‌ ಕೊಲೆ ಆರೋಪಿಗಳ ಬಂಧನ


ನ.19ರ ತಡರಾತ್ರಿ ನಡೆದಿದ್ದ ಕೊಲೆಗೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಬರ್ಖತ್‌ ಅಲಿ ಸೇರಿ ಈತನ ಸಹಚರರಾದ ಮಾಗಡಿ ರೋಡ್‌ ಇಲಿಯಾಸ್‌ ಅಲಿಯಾಸ್‌ ಅಲ್ಲು, ಕೆ.ಜಿ.ಹಳ್ಳಿ ನಿವಾಸಿ ಮುಬಾರಕ್‌, ಅರೇಬಿಕ್‌ ಕಾಲೇಜು ರಸ್ತೆಯ ನಿವಾಸಿ ಶೇಖ್‌ ಅಹಮದ್‌ ಅಲಿಯಾಸ್‌ ಸಮಿ ಹಾಗೂ ಶಿವಾಜಿನಗರದ ಇರ್ಫಾನ್‌ ಷರೀಫ್‌ ಬಂಧಿತ ಆರೋಪಿಗಳು.

ಕಿರುಕುಳವೇ ಕಾರಣ


ಜಿಮ್‌ ತರಬೇತುದಾರನಾಗಿದ್ದ ಮಚ್ಚಿ, ಫೈನಾನ್ಸ್‌ ವ್ಯವಹಾರ ಕೂಡ ನಡೆಸುತ್ತಿದ್ದ. ಜತೆಗೆ ಅಕ್ವೇರಿಯಂ ಶಾಪ್‌ ಕೂಡ ಇಟ್ಟುಕೊಂಡಿದ್ದ. ಕೆಲವೇ ವರ್ಷಗಳಲ್ಲಿ ಈತ ಜೋರಾಗಿ ಬೆಳೆದಿದ್ದಲ್ಲದೆ, ಸುಮಾರು 3 ಕೋಟಿ ರೂ ವೆಚ್ಚದಲ್ಲಿ ದೊಡ್ಡದೊಂದು ಮನೆ ಕಟ್ಟುತ್ತಿದ್ದಾನೆ ಎನ್ನುವ ಹೊಟ್ಟೆಕಿಚ್ಚು ಈತನ ಜತೆಗಿದ್ದವರಿಗೆ ಇತ್ತು. ತನ್ನ ಆತ್ಮೀಯ ಸ್ನೇಹಿತ ಇರ್ಫಾನ್‌ ಷರೀಫ್‌ ಎನ್ನುವವನಿಗೇ ತನ್ನ ಮನೆ ಕಟ್ಟುವ ಕಾಂಟ್ರಾಕ್ಟ್ ಕೊಟ್ಟಿದ್ದಲ್ಲದೆ 50 ಲಕ್ಷ ರೂ ಹಣವನ್ನು ಮುಂಗಡವಾಗಿ ಕೊಟ್ಟಿದ್ದ. ಮುಂಗಡ ಹಣ ಪಡೆದ ನಂತರವೂ ಷರೀಫ್‌ ತನ್ನ ಅಗತ್ಯಕ್ಕಾಗಿ ಮತ್ತೂ 10 ಲಕ್ಷ ರೂ ಸಾಲ ಪಡೆದಿದ್ದ. ಈ ಸಾಲಕ್ಕೆ ಮಚ್ಚಿ, ಶೇ 30 ರಷ್ಟು ಬಡ್ಡಿ ಪಡೆಯುತ್ತಿದ್ದ. ತಾನು ಪಡೆದ ಸಾಲಕ್ಕೆ ಬಡ್ಡಿ ಕಟ್ಟಲಾರದೆ ಇರ್ಫಾನ್‌ ಷರೀಫ್‌ ಪರದಾಡುತ್ತಿದ್ದ. ಮನೆ ಕಟ್ಟಲು ಮುಂಗಡವಾಗಿ ಕೊಟ್ಟಿದ್ದ ದುಡ್ಡಲ್ಲೇ ಬಡ್ಡಿ ಕಟ್ಟಿದ್ದ . ಕೈಯಲ್ಲಿ ಮುಂಗಡ ಹಣವೂ ಖಾಲಿ ಆದಾಗ ಸಾಲ, ಬಡ್ಡಿ ಕಟ್ಟಲಾಗದೆ ಪರದಾಡುತ್ತಿದ್ದ ಆರೋಪಿ ಮನೆ ಕಟ್ಟುವ ಕಡೆಗೂ ಸರಿಯಾಗಿ ಗಮನ ಕೊಡುತ್ತಿರಲಿಲ್ಲ. ಹೀಗಾಗಿ ಮುಂಗಡ ಹಣವನ್ನು ವಾಪಾಸ್‌ ಕೊಡುವಂತೆ ಮಚ್ಚಿ ಪೀಡಿಸಲು ಶುರು ಮಾಡಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ''ಹಣ ವಾಪಾಸ್‌ ಕೊಡು, ಇಲ್ಲದಿದ್ದರೆ ನಿನ್ನ ಪತ್ನಿ, ತಾಯಿ, ತಂಗಿ ಯಾರನ್ನೂ ಬಿಡದೆ ಎಲ್ಲರನ್ನೂ ರೇಪ್‌ ಮಾಡ್ತೀನಿ ಎಂದು ಟಾರ್ಚರ್‌ ಕೊಡಲು ಶುರು ಮಾಡಿದ್ದ. ಇದೇ ಕೊಲೆಗೆ ಪ್ರಮುಖ ಕಾರಣವಾಯಿತು'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ಯಾಂಗ್‌ ಕಟ್ಟಿದ ಬರ್ಖತ್‌

ಈ ವೇಳೆ ಆರೋಪಿ ಶೇಖ್‌ ಅಹ್ಮದ್‌ ಮೂಲಕ ಸುಪಾರಿ ಕಿಲ್ಲರ್‌ ಹಾಗೂ ರೌಡಿ ಶೀಟರ್‌ ಬರ್ಖತ್‌ನನ್ನು ಷರೀಫ್‌ ಭೇಟಿ ಆಗಿ ಚರ್ಚಿಸಿದ್ದ. ತನ್ನ ಸಹಚರರ ಉಳಿದ ಗ್ಯಾಂಗ್‌ ಕಟ್ಟಿದ ಬರ್ಖತ್‌ ನ.19 ಕ್ಕೆ ಕೊಲೆ ಮಾಡಲು ಸ್ಕೆಚ್‌ ಹಾಕಿದ್ದ. ಈತ ಪ್ರತೀ ದಿನ ರಾತ್ರಿ ಜ್ಯೂಸ್‌ ಕುಡಿಯಲು ಹೊರಗೆ ಬರುತ್ತಾನೆ ಎನ್ನುವ ಮಾಹಿತಿಯನ್ನೂ ಬರ್ಖತ್‌ ಸಂಗ್ರಹಿಸಿದ್ದ. ಆ ದಿನ ರಾತ್ರಿ ಜ್ಯೂಸ್‌ ಸೆಂಟರ್‌ ಎದುರಿನ ರಸ್ತೆಯಲ್ಲೇ ಮೂರು ಬೈಕ್‌ಗಳಲ್ಲಿ ಆರು ಮಂದಿ ಹೊಂಚು ಹಾಕಿ ಕುಳಿತಿದ್ದರು. ಮಚ್ಚಿ ಜ್ಯೂಸ್‌ ಕುಡಿದು ಮನೆಗೆ ವಾಪಸ್ಸಾಗುವಾಗ ಹಿಂದಿನಿಂದ ಬಂದು ಕೊಲೆ ಮಾಡಿ ಪರಾರಿ ಆಗಿದ್ದರು. ಆರೋಪಿಗಳೆಲ್ಲಾ ಹೆಲ್ಮೆಟ್‌ ಹಾಕಿಕೊಂಡಿದ್ದರಿಂದ ಯಾರ ಗುರುತೂ ಸಿಕ್ಕಿರಲಿಲ್ಲ. ಆದರೆ ತನಿಖೆ ವೇಳೆ ಸಿಕ್ಕ ಸುಳಿವಿನ ಆಧಾರದಲ್ಲಿ ಬರ್ಖತ್‌ ಸೇರಿ ಆರು ಮಂದಿಯನ್ನು ಬಲೆಗೆ ಕೆಡವಿಕೊಳ್ಳುವಲ್ಲಿ ತನಿಖಾ ತಂಡ ಯಶಸ್ವಿ ಆಗಿದೆ.

ಈ ಯಶಸ್ವಿ ಕಾರ್ಯಚರಣೆಗಾಗಿ ಶಿವಾಜಿನಗರ ಠಾಣೆಯ ಇನ್ಸ್‌ಪೆಕ್ಟರ್‌ ತಬ್ರೇಜ್‌ ಮತ್ತು ಸಬ್‌ ಇನ್ಸ್‌ಪೆಕ್ಟರ್‌ ಶೀಲಾ ತಂಡವನ್ನು ಪೂರ್ವ ವಿಭಾಗದ ಡಿಸಿಪಿ ರಾಹುಲ್‌ ಶ್ಲಾಘಿಸಿದ್ದಾರೆ.


ಗ್ಯಾಂಗ್‌ ಕಟ್ಟುವುದರಲ್ಲಿ ನಿಸ್ಸೀಮ

ಬಂಧಿತ ಬರ್ಖತ್‌ ಅಹಮದ್‌ ಹೊಸ ಹುಡುಗರನ್ನು ಪಳಗಿಸಿ ಕೊಲೆಗೆ ಬಳಸಿಕೊಳ್ಳುವುದರಲ್ಲಿ ಪಳಗಿದ್ದಾನೆ. ಮಾಜಿ ಕಾರ್ಪೋರೇಟರ್‌ ದಿವಾನ ಅಲಿ ಕೊಲೆಯಲ್ಲೂ ಈತ ಜತೆಗಿದ್ದವರೇ ಪ್ರಮುಖ ಆರೋಪಿಗಳು. ದಿವಾನ ಅಲಿ ವಿರುದ್ಧ ಸೇಡಿಗಾಗಿ ಕಾತರಿಸುತ್ತಿದ್ದ ಅಪ್ಪಿ ಒಟ್ಟು 30 ಹುಡುಗರನ್ನು ಒಟ್ಟಾಗಿಸಿದ್ದ. ಆದರೆ ಕೊನೆ ಕ್ಷಣದಲ್ಲಿ ತಾವು ಕೊಲೆ ಮಾಡಲು ಹೊರಟಿರುವುದು ದಿವಾನ್‌ ಅಲಿಯನ್ನು ಎಂಬ ವಿಷಯ ಗೊತ್ತಾಗಿ ಕೊಲೆಗೆ ಬಂದಿದ್ದ 24 ಮಂದಿ ಓಡಿ ಹೋಗಿದ್ದರು. ಆಗ ಉಳಿದಿದ್ದೇ ಬರ್ಖತ್‌ ಗ್ಯಾಂಗ್‌. ಈ ತಂಡವೇ ದಿವಾನ್‌ ಅಲಿಯನ್ನು ಕೊಲೆ ಮಾಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ