ಬೆಂಗಳೂರು: ಟಿಆರ್ಪಿ ತಿರುಚಿ ಸುಳ್ಳು ವರದಿ ಸಿದ್ಧಪಡಿಸುತ್ತಿದ್ದ ಆರೋಪದ ಮೇಲೆ ಸಿಸಿಬಿ ಸೈಬರ್ ಠಾಣೆ ಪೊಲೀಸರು ಕಿರುತೆರೆ ಧಾರಾವಾಹಿ ನಿರ್ಮಾಪಕ ರಾಜು ಸೇರಿ ಐವರನ್ನು ಬಂಧಿಸಿದ್ದಾರೆ.
ಟಿಆರ್ಪಿ ಅಂಕಿ ಅಂಶಗಳನ್ನು ನಿರ್ಧರಿಸುವ ಬಾರ್ಕ್ ಸಂಸ್ಥೆ ಮುಖ್ಯಸ್ಥರು ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸೈಬರ್ ಠಾಣೆ ಅಧಿಕಾರಿಗಳು, ಐದು ಮಂದಿಯನ್ನು ಬಂಧಿಸಿದ್ದಾರೆ.
ರಾಜು, ಮಧು, ಸುರೇಶ್, ಜೆಮ್ಸಿ, ಸುಭಾಷ್ ಬಂಧಿತ ಆರೋಪಿಗಳು. ಇವರು ಹಲವಾರು ತಿಂಗಳುಗಳಿಂದ ಟಿಆರ್ಪಿಯನ್ನು ವ್ಯತ್ಯಾಸ ಮಾಡುತ್ತಾ ಜಾಹೀರಾತು ಸಂಸ್ಥೆಗಳು ಹಾಗೂ ಖಾಸಗಿ ವಾಹಿನಿಗಳಿಗೆ ಕೋಟ್ಯಂತರ ರೂ. ನಷ್ಟಕ್ಕೆ ಕಾರಣವಾಗಿದ್ದರು. ಈ ಹಿನ್ನೆಲೆಯಲ್ಲಿ ಬಾರ್ಕ್ ಸಂಸ್ಥೆಯ ದೂರಿನ ಆಧಾರದಲ್ಲಿ ನಗರ ಪೊಲೀಸ್ ಕಮಿಷನರ್ ಸುನಿಲ್ಕುಮಾರ್ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಸೈಬರ್ ಠಾಣೆ ಸಿಬ್ಬಂದಿ ಐದೂ ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೃತಕ ಟಿಆರ್ಪಿ ಹೇಗೆ?
ಬಂಧಿತ ಆರೋಪಿಗಳು ಟಿಆರ್ಪಿ ಯಂತ್ರಗಳನ್ನು ಅಳವಡಿಸುವ ಮತ್ತು ಕೃತಕ ಟಿಆರ್ಪಿ ರೇಟಿಂಗ್ ಸೃಷ್ಟಿಸುವುದರಲ್ಲೂ ಪಳಗಿದ್ದರು ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಟಿಆರ್ಪಿ ಮೀಟರ್ ಯಂತ್ರಗಳನ್ನು ಅಳವಡಿಸಿರುವ ಜಾಗಗಳನ್ನು ಗುರುತು ಹಿಡಿಯುತ್ತಿದ್ದ ಆರೋಪಿಗಳು, ಮೀಟರ್ ಅಳವಡಿಸಿರುವ ಭಾಗದಲ್ಲಿ ಹತ್ತಾರು ಟೀವಿಗಳನ್ನು ತಂದಿಟ್ಟು ಕೃತಕವಾಗಿ ಏರಿಕೆ ಕಾಣುವಂತೆ ಮಾಡುತ್ತಿದ್ದರು. ಇದಕ್ಕಾಗಿ ಮಧು ತಂಡವನ್ನೇ ಸಿದ್ಧಪಡಿಸಿದ್ದ. ರಾಜು ಗ್ಯಾಂಗ್ಗೆ ಅಲ್ಪ ಪ್ರಮಾಣದ ಹಣವನ್ನೂ ನೀಡುತ್ತಿದ್ದರು. ಹಣದ ಆಸೆಗೆ ಟಿಆರ್ಪಿ ಮೀಟರ್ ಅಳವಡಿಸಿರುವ ಪ್ರದೇಶದಲ್ಲಿ ಹಲವರು ಹೆಚ್ಚುವರಿಯಾಗಿ ಅಳವಡಿಸಿದ್ದ ಟೀವಿಗಳ ರಿಮೋಟ್ ಇಟ್ಟುಕೊಂಡು ಕೃತಕ ಏರಿಕೆಗೆ ಬೇಕಾದಂತೆ ಚಾನೆಲ್ಗಳನ್ನು ಬದಲಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಹಳ ಸುಲಭ
ಸದ್ಯ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇವರ ಕೃತ್ಯದಿಂದ ಹಲವಾರು ಜಾಹೀರಾತು ಸಂಸ್ಥೆಗಳು ಹಾಗೂ ಟಿವಿ ಚಾನೆಲ್ಗಳ ಆದಾಯದಲ್ಲಿ ಕೋಟಿ ರೂ. ಮೌಲ್ಯದ ವ್ಯತ್ಯಾಸವಾಗಿದೆ. ಒಟ್ಟು ಅವ್ಯವಹಾರದ ಮೊತ್ತ ಎಷ್ಟು ಎನ್ನುವುದು ವಿಚಾರಣೆ ಪೂರ್ಣಗೊಂಡ ಬಳಿಕ ಹೊರಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.