ಆ್ಯಪ್ನಗರ

ಪತ್ನಿ ಹಂತಕನಿಗೆ ಜೀವಾವಧಿ ಜೈಲು ಶಿಕ್ಷೆ

ಎಂ.ಟೆಕ್‌ ಶಿಕ್ಷಣ ಮುಂದುವರಿಸುವುದನ್ನು ಸಹಿಸದೆ ಪತ್ನಿಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದ ಸಂತೋಷ್‌ ಕುಮಾರ್‌ ಎಂಬಾತನಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.

Vijaya Karnataka 28 Sep 2018, 5:00 am
ಬೆಂಗಳೂರು: ಎಂ.ಟೆಕ್‌ ಶಿಕ್ಷಣ ಮುಂದುವರಿಸುವುದನ್ನು ಸಹಿಸದೆ ಪತ್ನಿಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದ ಸಂತೋಷ್‌ ಕುಮಾರ್‌ ಎಂಬಾತನಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.
Vijaya Karnataka Web MURDER1


2013ರ ಸೆ.21ರಂದು ಪತ್ನಿ ಪ್ರೀತ್‌ಗೆ (28) ಮಚ್ಚಿನಿಂದ ಸಂತೋಷ್‌ ಕುಮಾರ್‌ ಹಲ್ಲೆ ನಡೆಸಿದ್ದ. ಚಿಕಿತ್ಸೆ ಫಲಿಸದೆ ಮರುದಿನ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಮೃತಳ ಪಾಲಕರು ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ನಗರದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಸಂತೋಷ್‌ ಕುಮಾರ್‌ ಮತ್ತು ಶಿವಮೊಗ್ಗ ಮೂಲದ ಪ್ರೀತ್‌ ನಡುವೆ 2013ರ ಫೆ.7ರಂದು ವಿವಾಹವಾಗಿತ್ತು. ಇಬ್ಬರು ಮಂಜುನಾಥ ನಗರದಲ್ಲಿ ವಾಸವಿದ್ದರು. ಮದುವೆ ಸಂದರ್ಭದಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರೀತ್‌, ಬೆಂಗಳೂರಿಗೆ ಬಂದ ಬಳಿಕ ನಗರದ ಖಾಸಗಿ ಕಾಲೇಜಿನಲ್ಲಿ ತನ್ನ ವ್ಯಾಸಂಗ ಮುಂದುವರಿಸಿದ್ದರು. ಆದರೆ, ಪತ್ನಿ ಎಂ.ಟೆಕ್‌ ಮಾಡುತ್ತಿರುವುದಕ್ಕೆ ಸಂತೋಷ್‌ ವಿರೋಧ ವ್ಯಕ್ತಪಡಿಸುತ್ತಿದ್ದ. ಶಿಕ್ಷಣ ನಿಲ್ಲಿಸಬೇಕು ಇಲ್ಲದಿದ್ದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. ಈ ಕುರಿತು ಪ್ರೀತ್‌, ತನ್ನ ಪಾಲಕರ ಬಳಿ ಹೇಳಿಕೊಂಡಿದ್ದಳು.

ಇದೇ ವೇಳೆ ತವರು ಮನೆಯಿಂದಲೂ ಹಣ ಮತ್ತು ಒಡವೆ ತರುವಂತೆ ಕಿರುಕುಳ ನೀಡುತ್ತಿದ್ದ ಸಂತೋಷ್‌, 2013ರ ಸೆ.21ರಂದು ಮನೆಯಲ್ಲೇ ಪತ್ನಿಯ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದ.

ತನಿಖೆ ಪೂರ್ಣಗೊಳಿಸಿದ್ದ ಬಸವೇಶ್ವರ ನಗರ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಂಡು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಂತೋಷ್‌ಗೆ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಎಸ್‌. ಶೋಭಾ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾಗಿ ಶರಣಗೌಡ ವಿ. ಪಾಟೀಲ್‌ ವಾದ ಮಂಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ