ಆ್ಯಪ್ನಗರ

ಗುಂಡು ಹಾರಿಸಿ ಕೊಲೆ ಆರೋಪಿ ಸೆರೆ

ಗಾಂಜಾ ಖರೀದಿಗೆ ಹಣ ಕೊಟ್ಟಿಲ್ಲವೆಂದು ಎಟಿಎಂ ಕೇಂದ್ರದ ಭದ್ರತಾ ಸಿಬ್ಬಂದಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿಯ ಎರಡು ಕಾಲುಗಳಿಗೆ ಗುಂಡು ಹಾರಿಸಿ ಕುಮಾರಸ್ವಾಮಿ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

Vijaya Karnataka 31 Mar 2019, 5:00 am
ಬೆಂಗಳೂರು : ಗಾಂಜಾ ಖರೀದಿಗೆ ಹಣ ಕೊಟ್ಟಿಲ್ಲವೆಂದು ಎಟಿಎಂ ಕೇಂದ್ರದ ಭದ್ರತಾ ಸಿಬ್ಬಂದಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿಯ ಎರಡು ಕಾಲುಗಳಿಗೆ ಗುಂಡು ಹಾರಿಸಿ ಕುಮಾರಸ್ವಾಮಿ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web murder convict arrest
ಗುಂಡು ಹಾರಿಸಿ ಕೊಲೆ ಆರೋಪಿ ಸೆರೆ


ಬನ್ನೇರುಘಟ್ಟ ರಸ್ತೆಯ ಸಿ.ಕೆ ಪಾಳ್ಯದ ರಾಜೇಂದ್ರ (28)ಅಲಿಯಾಸ್‌ ಬೆಂಕಿ ರಾಜ, ಅಲಿಯಾಸ್‌ ಸೈಕೋ ರಾಜ ಬಂಧಿತ ಆರೋಪಿ. ಮಾ.24ರ ನಸುಕಿನಲ್ಲಿ ಉತ್ತರಹಳ್ಳಿ ಮುಖ್ಯರಸ್ತೆ ಕದಿರೇನಹಳ್ಳಿಯಲ್ಲಿರುವ ಕರ್ಣಾಟಕ ಬ್ಯಾಂಕ್‌ ಎಟಿಎಂ ಗಾರ್ಡ್‌ ಲಿಂಗಪ್ಪ (60)ಎಂಬುವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಅದಾದ ನಾಲ್ಕೇ ದಿನಗಳಲ್ಲಿ ಜೆ.ಪಿ. ನಗರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ, ಆರೋಪಿಯ ಬಂಧನಕ್ಕೆ ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಟಿ. ಮಹದೇವ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

ಶನಿವಾರ ಬೆಳಗ್ಗೆ ಕೋಣನಕುಂಟೆಯ ಡಬ್ಬಲ್‌ ರಸ್ತೆಯಲ್ಲಿ ಆರೋಪಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಇನ್‌ಸ್ಪೆಕ್ಟರ್‌ ಹರೀಶ್‌ ಅವರಿದ್ದ ತಂಡ, 4.30ರಲ್ಲಿ ಆರೋಪಿಯನ್ನು ಬಂಧಿಸಲು ಸ್ಥಳಕ್ಕೆ ತೆರಳಿತ್ತು. ಆಗ ಪೊಲೀಸರ ಮೇಲೆ ಕಲ್ಲು ತೂರಿ ಆರೋಪಿ ಪರಾರಿಯಾಗಲು ಯತ್ನಿಸಿದ. ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದ್ದರು. ಆದರೂ ಕಲ್ಲು ತೂರಾಟ ಮುಂದುವರಿಸಿದ ಕಾರಣ ಸೈಕೋ ರಾಜನ ಕಾಲಿಗೆ ಗುಂಡು ಹಾರಿಸಲಾಯಿತು. ಒಂದು ಗುಂಡು ಮೊಣಕಾಲಿಗೆ, ಮತ್ತೊಂದು ಪಾದಕ್ಕೆ ಬಿದ್ದಿದೆ. ಆತನನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದರು.


150 ರೂ.ಗಾಗಿ ಕೊಲೆ

ರಾಜ ಹಣ ಕೇಳಿದಾಗ ಲಿಂಗಪ್ಪ ಅವರು ಹಣ ಕೊಡಲು ನಿರಾಕರಿಸಿದ್ದರು. ಅವರ ಬಳಿ ಹೆಚ್ಚೇನೂ ಹಣ ಇರಲಿಲ್ಲ. ಕೇವಲ 150 ರೂ. ಇತ್ತು. ಕೊಲೆ ಮಾಡಿದ ಬಳಿಕ ಆ ಹಣವನ್ನು ಎತ್ತಿಕೊಂಡು ಹೋಗಿದ್ದ. ಬೆಳಗ್ಗೆ 4.20ರ ಸುಮಾರಿಗೆ ಮೆಟ್ಟಿಲುಗಳ ಮೇಲೆ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದರು.


ತಂಗಿಯನ್ನೇ ಕೊಲೆ ಮಾಡಿದ್ದ

ಆರೋಪಿ ರಾಜೇಂದ್ರ, 10 ವರ್ಷಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಸ್ವಂತ ತಂಗಿಯನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿ ಮನೆ ಬಿಟ್ಟಿದ್ದ. ಬಳಿಕ ಈತನನ್ನು ಬಂಧಿಸಿದ್ದ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಬಸವನಗುಡಿಯಲ್ಲಿ ಕಟ್ಟಡ ನಿರ್ಮಾಣ ಮೇಲ್ವಿಚಾರಕನನ್ನು ಕೊಲೆ ಮಾಡಿದ್ದ. ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿ, ಗಾಂಜಾ ಸೇವನೆಗಾಗಿ ರಸ್ತೆ ಬದಿ ಮಲಗಿರುವವರು, ಅಮಾಯಕರ ಮೇಲೆ ಹಲ್ಲೆ ನಡೆಸಿ ಕೈಗೆ ಸಿಕ್ಕ ಹಣ ದೋಚಿ ಗಾಂಜಾ ಖರೀದಿಸುತ್ತಿದ್ದ. 2016ರಲ್ಲಿ ನಗರದಲ್ಲಿ ನಡೆದ ಕಾವೇರಿ ನದಿ ನೀರು ವಿಚಾರವಾಗಿ ನಡೆದ ಗಲಭೆ ವೇಳೆ ವಾಹನಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ ಪ್ರಕರಣದಲ್ಲಿ ರಾಜ ಭಾಗಿಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ