ಆ್ಯಪ್ನಗರ

ವ್ಯಸನಮುಕ್ತ ಕೇಂದ್ರದಲ್ಲಿ ಕೊಲೆ: ಮೂವರು ವಶಕ್ಕೆ

ವ್ಯಸನ ಮುಕ್ತ ಕೇಂದ್ರದಲ್ಲಿ ನಡೆದಿದ್ದ ಕೊಲೆ ಸಂಬಂಧ ಪೊಲೀಸರು ನಾಲ್ಕು ಮಂದಿಯನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಂತರ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Vijaya Karnataka 23 May 2018, 5:00 am
ಬೆಂಗಳೂರು: ವ್ಯಸನ ಮುಕ್ತ ಕೇಂದ್ರದಲ್ಲಿ ನಡೆದಿದ್ದ ಕೊಲೆ ಸಂಬಂಧ ಪೊಲೀಸರು ನಾಲ್ಕು ಮಂದಿಯನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಂತರ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Vijaya Karnataka Web murdered in addictive center three detained
ವ್ಯಸನಮುಕ್ತ ಕೇಂದ್ರದಲ್ಲಿ ಕೊಲೆ: ಮೂವರು ವಶಕ್ಕೆ


ಕೊತ್ತನೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಘಟನೆ ನಡೆದಿದೆ. ಕಾಡುಗೊಂಡನಹಳ್ಳಿಯ ನರಸಮ್ಮ ಲೇಔಟ್‌ ನಿವಾಸಿ ಷಣ್ಮುಗಂ(40) ಎನ್ನುವವರು ಮೃತಪಟ್ಟಿದ್ದರು. ಇವರಿಗೆ ನಿದ್ರೆ ಮಾತ್ರೆ ನೀಡಿ ಹಲ್ಲೆ ನಡೆಸಿದ್ದರಿಂದ ಮೃತಪಟ್ಟಿದ್ದಾರೆ ಎಂದು ಷಣ್ಮುಗಂ ಪತ್ನಿ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು. ಈ ಸಂಬಂಧ ಯಲಹಂಕ ಸಮೀಪದ ಭೈರವೇಶ್ವರ ಲೇಔಟ್‌ನಲ್ಲಿನಲ್ಲಿರುವ ಜೀವನ್‌ ಕೇರ್‌ ಸೆಂಟರ್‌ನ ರಾಬರ್ಟ್‌ ಸಂತೋಷ್‌, ಶ್ರೀರಾಮ್‌, ಲೋಕೇಶ್‌ ಮತ್ತು ಪ್ರಸಾದ್‌ ಎಂಬುವವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರಿಸಿದ್ದಾರೆ.

ಷಣ್ಮುಗಂ ಕೂಲಿ ಕಾರ್ಮಿಕರಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು ಕುಡಿತದ ಅಭ್ಯಾಸ ಇದ್ದುದರಿಂದ ಜೀವನ್‌ ಕೇರ್‌ ಸೆಂಟರ್‌ಗೆ ದಾಖಲಿಸಲಾಗಿತ್ತು. ಮೂರು ತಿಂಗಳ ಕಾಲ ವ್ಯಸನದಿಂದ ಮುಕ್ತರಾಗಿದ್ದ ಷಣ್ಮುಗಂ ಮತ್ತೆ ಕುಡಿಯಲು ಆರಂಭಿಸಿದ್ದರು. ಆದ್ದರಿಂದ ಸಂಬಂಧಿಕರ ಸಲಹೆ ಮೇರೆಗೆ ಪತ್ನಿಯೇ ಮೇ 15ರಂದು ಜೀವನ್‌ ಕೇರ್‌ ಸೆಂಟರ್‌ಗೆ ಪತಿಯನ್ನು ಕರೆತಂದು ದಾಖಲಿಸಿದ್ದರು. ಮೇ 20ರ ಮಧ್ಯಾಹ 3 ಗಂಟೆಗೆ ಉಷಾಗೆ ಕರೆ ಮಾಡಿದ ಸಿಬ್ಬಂದಿ, ನಿಮ್ಮ ಪತಿ ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಅವರನ್ನು ಯಾವ ಆಸ್ಪತ್ರೆಗೆ ಸೇರಿಸಬೇಕೆಂದು ಸಲಹೆ ಕೇಳಿದ್ದರು. ಗಾಬರಿಗೊಂಡ ಉಷಾ, ಮನೆಗೆ ಹತ್ತಿರದ ಅಂಬೇಡ್ಕರ್‌ ಆಸ್ಪತ್ರೆಗೆ ಸೇರಿಸುವಂತೆ ತಿಳಿಸಿದ್ದರು. ಬಳಿಕ ಉಷಾ ಆಸ್ಪತ್ರೆಗೆ ಹೋದಾಗ ಪತಿ ಸಾವನ್ನಪ್ಪಿರುವ ಸುದ್ದಿ ಗೊತ್ತಾಗಿದೆ. ಎರಡೂ ಕೈಗಳು ಊದಿಕೊಂಡಿದ್ದು, ಬಾಯಲ್ಲಿ ರಕ್ತ ಬಂದಿತ್ತು. ಆರೋಪಿ ರಾಬರ್ಟ್‌ ಸಂತೋಷ್‌ನನ್ನು ಕೇಳಿದಾಗ ಯಾವುದೇ ಉತ್ತರ ನೀಡಿರಲಿಲ್ಲ. ಅಲ್ಲಿಂದ ಜೀವನ್‌ ಕೇರ್‌ ಸೆಂಟರ್‌ ಬಳಿಗೆ ತೆರಳಿದ ಉಷಾ, ಚಾಲಕ ವೆಂಕಟೇಶ್‌ನನ್ನು ವಿಚಾರಿಸಿದ್ದರು.

ಕೈ ಕಟ್ಟಿ ಹಾಕಿ ಹಲ್ಲೆ

ಮೇ 19ರ ರಾತ್ರಿ 11.30ರ ಸುಮಾರಿಗೆ ಷಣ್ಮುಗಂ ಅರೆ ಪ್ರಜ್ಞಾವಸ್ಥೆಯಲ್ಲಿ ಕೂಗಾಡುತ್ತಿದ್ದಾಗ ರಾಬರ್ಟ್‌ ಮತ್ತು ಶ್ರೀರಾಮ್‌ ಸೇರಿದಂತೆ ಅಲ್ಲಿನ ಸಿಬ್ಬಂದಿ ಅವರ ಕೈಗಳನ್ನು ಬಟ್ಟೆಯಿಂದ ಕಟ್ಟಿ ಹಾಕಿದ್ದರು. ಒದ್ದಾಡುತ್ತಿದ್ದ ಕಾರಣ ಲೋಕೇಶ್‌ ಕೆಲ ನಿದ್ದೆ ಮಾತ್ರೆಗಳನ್ನು ನೀಡಿದ್ದರು. ಆದರೂ ಕೂಗಾಟ ನಿಲ್ಲಿಸದೆ ಇದ್ದಾಗ ಕೈಗಳಿಂದ ಹಲ್ಲೆ ನಡೆಸಿ ಜೋರಾಗಿ ತಳ್ಳಿದಾಗ ಕೆಳಗೆ ಬಿದ್ದ ಷಣ್ಮುಗಂ ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ ಎಂದು ಸೆಂಟರ್‌ನ ವಾಹನ ಚಾಲಕ ವೆಂಕಟೇಶ್‌ ಸೇರಿದಂತೆ ಇನ್ನಿತರ ಸಿಬ್ಬಂದಿ ಉಷಾ ಅವರಿಗೆ ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ಜೀವನ್‌ ಕೇರ್‌ ಸೆಂಟರ್‌ನ ನಾಲ್ವರ ವಿರುದ್ಧ ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರನ್ನು ವಶಕ್ಕೆ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ