ಆ್ಯಪ್ನಗರ

ರೌಡಿ ಲಕ್ಷ್ಮಣನ ಹತ್ಯೆ: ಕ್ಯಾಟ್‌ ರಾಜ ಅರೆಸ್ಟ್‌

ಯಶವಂತಪುರದ ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿ ಬಳಿ ಕುಖ್ಯಾತ ರೌಡಿ ಲಕ್ಷ್ಮಣನನ್ನು(40) ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ರೌಡಿ ರಾಜ ಅಲಿಯಾಸ್‌ ಕ್ಯಾಟ್‌ ರಾಜ(30)ನನ್ನು ಉತ್ತರ ವಿಭಾಗ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

Vijaya Karnataka 10 Mar 2019, 5:00 am
ಬೆಂಗಳೂರು : ಯಶವಂತಪುರದ ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿ ಬಳಿ ಕುಖ್ಯಾತ ರೌಡಿ ಲಕ್ಷ್ಮಣನನ್ನು(40) ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ರೌಡಿ ರಾಜ ಅಲಿಯಾಸ್‌ ಕ್ಯಾಟ್‌ ರಾಜ(30)ನನ್ನು ಉತ್ತರ ವಿಭಾಗ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
Vijaya Karnataka Web rowdy lakshmana arrest cat raja arrest
ರೌಡಿ ಲಕ್ಷ್ಮಣನ ಹತ್ಯೆ: ಕ್ಯಾಟ್‌ ರಾಜ ಅರೆಸ್ಟ್‌


ಲಕ್ಷ್ಮಣನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಸುಮಾರು 13 ರಿಂದ 14 ಜನರ ಪೈಕಿ ಕ್ಯಾಟ್‌ ರಾಜ ಕೂಡ ಒಬ್ಬನಾಗಿದ್ದಾನೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆದಿದೆ. ಪ್ರಕರಣದ ಕುರಿತು ಸಿಸಿಬಿ ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ. ಕ್ಯಾಟ್‌ ರಾಜನನ್ನು ಶನಿವಾರ ಬೆಳಗ್ಗೆ ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ವಶಕ್ಕೆ ಪಡೆಯಲಾಯಿತು ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್‌ ತಿಳಿಸಿದರು.

ಮಾ.7ರಂದು ಕೊಲೆ ಮಾಡಿದ್ದ ಆರೋಪಿಗಳು ಬೇರೆ ಬೇರೆಯಾಗಿ ತಮ್ಮ ಮನೆ, ಅಡ್ಡಗಳನ್ನು ಸೇರಿದ್ದರೆ ಮತ್ತೆ ಕೆಲವರು ಊರು ಬಿಟ್ಟಿದ್ದಾರೆ. ಕೊಲೆ ನಡೆದ ಸ್ಥಳದಲ್ಲಿ ಪತ್ತೆಯಾದ ಒಂದು ಮೊಬೈಲ್‌ ಫೋನ್‌ ಹಾಗೂ ಸಿಸಿ ಕ್ಯಾಮೆರಾ ವಿಡಿಯೋ ಕ್ಯಾಟ್‌ ರಾಜನ ಕುರಿತು ಮಾಹಿತಿ ನೀಡಿತ್ತು. ಇದನ್ನಾಧರಿಸಿ ಗುಡಿಬಂಡೆಗೆ ತೆರಳಿದ ಪೊಲೀಸರು, ಕೆರೆಯಲ್ಲಿ ಮೀನು ಹಿಡಿದುಕೊಂಡು ಕಾಲ ಕಳೆಯುತ್ತಿದ್ದ ರಾಜನನ್ನು ವಶಕ್ಕೆ ಪಡೆದರು. ನಂತರ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳ ಕುರಿತು ಕೇಳಿದಾಗ ಪೀಣ್ಯದಲ್ಲಿವೆ ಎಂದಿದ್ದಾನೆ. ಹೀಗಾಗಿ, ಪೀಣ್ಯ ಕೈಗಾರಿಕಾ ಪ್ರದೇಶದ ದೊಡ್ಡಣ್ಣ ಎಸ್ಟೇಟ್‌ಗೆ ಆತನನ್ನು ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿಯು ಪೊಲೀಸರ ಮೇಲೆ ಕಲ್ಲು ತೂರಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಆದರೂ, ಕಲ್ಲು ತೂರಾಟ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತನ ಎರಡೂ ಕಾಲುಗಳಿಗೆ ತಲಾ ಒಂದೊಂದು ಗುಂಡು ಹಾರಿಸಿ ಬಂಧಿಸಿದ್ದಾರೆ.

ಕೊಲೆಗೆ ಹಲವು ಕಾರಣಗಳು

ಕ್ಯಾಟ್‌ ರಾಜನ ವಿರುದ್ಧ ಬೆಂಗಳೂರು ನಗರವೊಂದರಲ್ಲೇ 28 ಕೇಸ್‌ಗಳಿವೆ. ಉಳಿದಂತೆ ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆ ಕೊಲೆ, ಕೊಲೆ ಯತ್ನ, ದರೋಡೆ, ಪೊಲೀಸರ ಮೇಲೆ ಹಲ್ಲೆ, ಸುಲಿಗೆ, ಸುಪಾರಿ, ಬೆದರಿಕೆ, ವ್ಯಾಜ್ಯದ ಜಮೀನುಗಳ ಕಬಳಿಕೆ ಮುಂತಾದ ಕೇಸ್‌ಗಳಿವೆ.

ಕ್ಯಾಟ್‌ ರಾಜ ಹಾಗೂ ಕೊಲೆಯಾದ ಲಕ್ಷ್ಮಣ ಇಬ್ಬರು ರೌಡಿ ಕ್ಷೇತ್ರದ ಸ್ನೇಹಿತರು. ಲ್ಯಾಂಡ್‌ ಡೀಲಿಂಗ್‌, ಫೈನಾನ್ಸ್‌, ಹುಡುಗಿ ವಿಚಾರ, ರಾಜಕಾರಣಿಗಳ ಜೊತೆ ಬೆಂಬಲಿಗರಾಗಿ ಓಡಾಡುವ ವೇಳೆ ವೈಮನಸ್ಸು ಉಂಟಾಗಿತ್ತು. ಈ ವಿಚಾರವಾಗಿ ಕೊಲೆ ಮಾಡಲು ಪರಸ್ಪರ ಸಂಚು ರೂಪಿಸುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಸ್ಕೆಚ್‌ ಹಾಕಿದ್ದ ರೂಪೇಶ, ಹೇಮಂತ


ವಿವಿಧ ಕೇಸ್‌ಗಳಲ್ಲಿ ಭಾಗಿಯಾಗಿರುವ ರಾಜರಾಜೇಶ್ವರಿನಗರ ರೌಡಿ ಶೀಟರ್‌ ರೂಪೇಶ ಮತ್ತು ಬ್ಯಾಡರಹಳ್ಳಿಯ ರೌಡಿ ಹೇಮಂತ್‌, ಲಕ್ಷ್ಮಣನ ಹತ್ಯೆಗೆ ಪ್ರಮುಖವಾಗಿ ಸ್ಕೆಚ್‌ ಹಾಕಿದ್ದರು ಎನ್ನಲಾಗಿದೆ. ಕೆಲ ತಿಂಗಳ ಹಿಂದೆ ವ್ಯಾಜ್ಯದಲ್ಲಿರುವ ಜಮೀನಿನ ವಿಚಾರವಾಗಿ ರೌಡಿಗಳಾದ ರೂಪೇಶ ಮತ್ತು ಲಕ್ಷ್ಮಣ ಜಗಳ ಮಾಡಿಕೊಂಡಿದ್ದರು. ಈ ವಿಷಯ ಪೊಲೀಸ್‌ ಠಾಣೆಯ ಮೆಟ್ಟಿಲೇರಿತ್ತು. ಈ ವೇಳೆ ನಿನ್ನನ್ನು ಬಿಡುವುದಿಲ್ಲ ಎಂದು ರೂಪೇಶನಿಗೆ ಲಕ್ಷ್ಮಣ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದರಿಂದ ರೂಪೇಶ ಕುಪಿತಗೊಂಡಿದ್ದ. ಕಳ್ಳತನ ಕೇಸ್‌ನಲ್ಲಿ ಜೈಲು ಸೇರಿದ್ದ ರೂಪೇಶ, ಅಲ್ಲಿ ರೌಡಿ ಹೇಮಂತ ಹಾಗೂ ಆಕಾಶ ಎಂಬುವವರ ಜೊತೆ ಸೇರಿ ಲಕ್ಷ್ಮಣನ ಕೊಲೆಗೆ ಸ್ಕೆಚ್‌ ಹಾಕಿದ್ದರು.

ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳು ಮುತ್ತತ್ತಿಯಲ್ಲಿ ಒಟ್ಟಿಗೆ ಸೇರಿದ್ದರು. ವಾಹನ ಒದಗಿಸುವುದರಿಂದ ಹಿಡಿದು ಯಾವ ಜಾಗದಲ್ಲಿ ಮುಗಿಸಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದರು. ರೌಡಿ ಹೇಮಂತ 2 ವಾಹನಗಳನ್ನು ಮತ್ತು ಹತ್ತಕ್ಕೂ ಹೆಚ್ಚು ಜನರನ್ನು ಕೊಲೆಗೆ ಸಿದ್ಧಪಡಿಸಿಕೊಂಡಿದ್ದ. ಚಲನವಲನದ ಕುರಿತು ರೂಪೇಶ ಮಾಹಿತಿ ನೀಡಿದ್ದ.

ಮಾ.7ರಂದು ಮಹಾಲಕ್ಷ್ಮೇ ಲೇಔಟ್‌ನಲ್ಲಿರುವ ಹೊಟೇಲ್‌ವೊಂದರಲ್ಲಿ ಹುಡುಗಿಯನ್ನು ಕಾಣಲು ಬರುತ್ತಿದ್ದಾನೆಂಬ ಮಾಹಿತಿಯನ್ನು ರೂಪೇಶ ಸಂಗ್ರಹಿಸಿ ಹೇಮಂತನಿಗೆ ನೀಡಿದ್ದ. ಕೂಡಲೇ ಕ್ಯಾಟ್‌ ರಾಜ ಸೇರಿದಂತೆ ಸುಮಾರು 10 ರಿಂದ 12 ಜನರ ಗುಂಪು, ಲಕ್ಷ್ಮಣ ಇದ್ದ ಇನ್ನೋವಾ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಕೊಚ್ಚಿ ಪರಾರಿಯಾಗಿತ್ತು.


ಹಲವರಿಂದ ಲಕ್ಷ್ಮಣನ ಕೊಲೆಗೆ ಸ್ಕೆಚ್‌

ಲಕ್ಷ್ಮಣನ ಹತ್ಯೆಗೆ ಎದುರಾಳಿ ಗುಂಪಿನ ಹಲವು ತಂಡಗಳು ಸ್ಕೆಚ್‌ ಹಾಕಿದ್ದವು. ಬೇರೆಯವರು ಮುಗಿಸುವ ಮೊದಲು ನಾವೇ ಮುಗಿಸಬೇಕು. ಅದರ ಕ್ರೆಡಿಟ್‌ ನಾವೇ ತೆಗೆದುಕೊಳ್ಳಬೇಕು ಎಂದು ಓಡಾಡಿಕೊಂಡಿದ್ದರು ಎಂದು ಹೇಳಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ