ಭಯ ಹುಟ್ಟಿಸಲು ರುದ್ರೇಶ್ ಕೊಲೆ: NIA ದೋಷಾರೋಪ
ಆರ್ಎಸ್ಎಸ್ ಸಂಘಟನೆ ಕಾರ್ಯಕರ್ತ ವಲಯದಲ್ಲಿ ಭಯ ಸೃಷ್ಟಿಸುವ ರುದ್ರೇಶ್ ಕೊಲೆ ನಡೆದಿದೆ ಎಂದು ಎನ್ಐಎ ತಿಳಿಸಿದೆ.
ಬೆಂಗಳೂರು: ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ನಡೆದದ್ದು ಸೈದ್ಧಾಂತಿಕ ಕಾರಣಕ್ಕೆ. ಆರ್ಎಸ್ಎಸ್ ಸಂಘಟನೆ ಕಾರ್ಯಕರ್ತ ವಲಯದಲ್ಲಿ ಭಯ ಸೃಷ್ಟಿಸುವ ಉದ್ದೇಶದಿಂದಲೇ ಕೊಲೆ ನಡೆದಿದೆ ಎಂದು ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯಕ್ಕೆ ತಿಳಿಸಿದೆ.
2016ರ ಆಗಸ್ಟ್ 12ರ ಹಾಡ ಹಗಲೇ ನಡೆದಿದ್ದ ರುದ್ರೇಶ್ ಭೀಕರ ಕೊಲೆ ಪ್ರಕರಣದ ಐದೂ ಮಂದಿ ಆರೋಪಿಗಳ ವಿರುದ್ಧ ಶುಕ್ರವಾರ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದ್ದು ಈ ಕೊಲೆ ಸೈದ್ಧಾಂತಿಕ ಕಾರಣಕ್ಕೇ ಸಂಘಟಿತವಾಗಿ ನಡೆದಿದೆ ಎನ್ನುವುದು ತನಿಖೆ ವೇಳೆ ಬಹಿರಂಗಗೊಂಡಿರುವುದಾಗಿ ಎನ್ಐಎ ತಿಳಿಸಿದೆ.
ಕೊಲೆ ಆರೋಪಿಗಳನ್ನು ಬೆಂಗಳೂರು ಪೊಲೀಸರೇ ಬಂಧಿಸಿ ಒಂದು ಹಂತದ ತನಿಖೆ ಪೂರ್ಣಗೊಳಿಸಿದ್ದರು. ಅಕ್ಟೋಬರ್ 27 ರಂದು ಕೊಲೆ ಪ್ರಕರಣದ ಮೊದಲ ನಾಲ್ವರು ಆರೋಪಿಗಳು ಬಂಧಿತರಾಗಿದ್ದರೆ, ನ.2 ರಂದು ಐದನೇ ಆರೋಪಿಯನ್ನು ಬೆಂಗಳೂರು ಪೊಲೀಸರೇ ಬಂಧಿಸಿದ್ದರು. ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆಯ ಸೂಚನೆಯಂತೆ ಹೈದರಾಬಾದ್ನ ರಾಷ್ಟ್ರೀಯ ತನಿಖಾ ದಳ ತನಿಖೆಗೆ ಕೈಗೆತ್ತಿಕೊಂಡು ಪ್ರತ್ಯೇಕ ದೂರು ದಾಖಲಿಸಿತ್ತು. ಈ ದೂರಿನ ಆಧಾರದ ಮೇಲೆ ನ್ಯಾಯಾಂಗ ವಶದಲ್ಲಿದ್ದ ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು ಆರೋಪಿಗಳೆಲ್ಲರೂ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಹಾಗೂ ಎಸ್ಡಿಪಿಐ ರಾಜಕೀಯ ಪಕ್ಷದ ಕಾರ್ಯಕರ್ತರು ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದೆ.
ಸಭೆ ನಡೆಸಿದ್ದರು
ಬಂಧಿತ ಆರೋಪಿಗಳು ಕೃತ್ಯ ನಡೆಸುವುದಕ್ಕೂ ಮೊದಲು ಸಭೆಗಳನ್ನು ನಡೆಸಿದ್ದರು. ಅಕ್ಸ ಮಸೀದಿ ಮತ್ತು ಚೋಟಾ ಚಾರ್ಮಿನಾರ್ ಬಳಿ ಸಭೆ ಸೇರಿ ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸಿದ್ದರು. ಸೆಪ್ಟೆಂಬರ್ ತಿಂಗಳಿನಲ್ಲಿ ಸಂಚು ನಡೆಸಿ ಅಕ್ಟೋಬರ್ ತಿಂಗಳಿನಲ್ಲಿ ಸಂಚನ್ನು ಜಾರಿಗೊಳಿಸಿದ್ದಾರೆ. ಕೊಲೆಆದ ರುದ್ರೇಶ್ಗೂ ಆರೋಪಿಗಳಿಗೂ ಯಾವುದೇ ವೈಯುಕ್ತಿಕ ದ್ವೇಷ ಇರಲಿಲ್ಲ. ಇಸ್ಲಾಂ ಮತ್ತು ಜಿಹಾದಿ ಉದ್ದೇಶವನ್ನು ಈಡೇರಿಸುವುದಕ್ಕಾಗಿಯೇ ವಿಗ್ರಹಾರಾಧಕನಾದ (ಕಾಫಿರ್) ರುದ್ರೇಶ್ನನ್ನು ಕೊಲೆ ಮಾಡಲಾಗಿದೆ ಎನ್ನುವುದು ತನಿಖೆ ವೇಳೆ ತಮಗೆ ಗೊತ್ತಾಗಿದೆ ಎಂದು ಎನ್ಐಎ ಆರೋಪ ಪಟ್ಟಿಯಲ್ಲಿ ವಿವರಿಸಿದ್ದು ತನಿಖೆ ಮುಂದುವರಿದಿರುವುದಾಗಿ ತಿಳಿಸಿದೆ.
ಆರೋಪಿಗಳು ಯಾರಾರಯರು ?
ಎ1-ಇರ್ಫಾನ್ ಪಾಷಾ (32), ಗೋವಿಂದಪುರ ನಿವಾಸಿ
ಎ2-ವಸೀಂ ಅಹಮದ್ (32), ಆಸ್ಟಿನ್ ಟೌನ್ ನಿವಾಸಿ
ಎ3-ಮಹಮದ್ ಸಾದಿಕ್ (35), ಮಾರಪ್ಪ ಗಾರ್ಡನ್ ನಿವಾಸಿ
ಎ4-ಮಹ್ಮದ್ ಮುಜೀಬುಲ್ಲಾ (46), ಆರ್.ಟಿ.ನಗರ ನಿವಾಸಿ
ಎ5- ಆಸಿಮ್ ಷರೀಫ್ (40), ಬೆನ್ಸನ್ ಟೌನ್ ನಿವಾಸಿ
===========
* ಕೊಲೆ ನಡೆದಿರುವುದು ಸಂಘಟನೆ ಕಾರಣಕ್ಕೆ
* ಪಥಸಂಚಲನ ಮುಗಿಸಿ ಮನೆಗೆ ಹೊರಡುವಾಗಲೇ ಇಬ್ಬರು ಕಾರ್ಯಕರ್ತರನ್ನು ಕೊಲೆ ಮಾಡುವ ಉದ್ದೇಶ ಇತ್ತು
* ಆರ್ಎಸ್ಎಸ್ ಸಮವಸ್ತ್ರದಲ್ಲಿರುವಾಗಲೇ ಕೊಲೆ ಮಾಡಿದರೆ ಸ್ಪಷ್ಟ ಸಂದೇಶ ರವಾನೆ ಆಗುತ್ತದೆ ಎನ್ನುವ ಗುರಿ ಇತ್ತು.
* ಸಮವಸ್ತ್ರದಲ್ಲಿರುವಾಗಲೇ ಕೊಲೆ ಮಾಡಿದರೆ ಉಳಿದವರು ಸಂಘಟನೆ ಸೇರಲು ಹೆದರುತ್ತಾರೆ ಎನ್ನುವ ಉದ್ದೇಶವೂ ಇತ್ತು.
* ಆರೋಪಿಗಳು ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಯ ಸದಸ್ಯರು