ಆ್ಯಪ್ನಗರ

ಶಾಲಾ ಬಸ್‌ ಹಿಂದಿಕ್ಕಲು ಹೋಗಿ ಬೈಕ್‌ ಸವಾರ ಸಾವು

ಶಾಲಾ ಬಸ್‌ ಹಿಂದಿಕ್ಕಲು ಹೋಗಿ ಆಯತಪ್ಪಿ ಬಿದ್ದ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ 5 ಗಂಟೆ ವೇಳೆಗೆ ಕನಕಪುರ ಮುಖ್ಯರಸ್ತೆಯ ತಾತಗುಣಿ ಎಸ್ಟೇಟ್‌ ಬಳಿ ನಡೆದಿದೆ.

ವಿಕ ಸುದ್ದಿಲೋಕ 23 Sep 2016, 4:00 am

ಅಪಘಾತದಲ್ಲಿ ಶಾಲಾ ಬಸ್‌ಗೆ ಬೆಂಕಿ ; ಮಕ್ಕಳು ಪಾರು

Vijaya Karnataka Web school bus accident
ಶಾಲಾ ಬಸ್‌ ಹಿಂದಿಕ್ಕಲು ಹೋಗಿ ಬೈಕ್‌ ಸವಾರ ಸಾವು


ಬೆಂಗಳೂರು: ಶಾಲಾ ಬಸ್‌ ಹಿಂದಿಕ್ಕಲು ಹೋಗಿ ಆಯತಪ್ಪಿ ಬಿದ್ದ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ 5 ಗಂಟೆ ವೇಳೆಗೆ ಕನಕಪುರ ಮುಖ್ಯರಸ್ತೆಯ ತಾತಗುಣಿ ಎಸ್ಟೇಟ್‌ ಬಳಿ ನಡೆದಿದೆ.

ದ್ವಿಚಕ್ರ ವಾಹನ ಬಸ್‌ನ ಅಡಿ ಸಿಲುಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡೂ ವಾಹನಗಳು ಹೊತ್ತಿ ಉರಿದಿವೆ. ಅದೃಷ್ಟವಶಾತ್‌ ಬಸ್‌ನಲ್ಲಿದ್ದ ಶಾಲಾ ಮಕ್ಕಳಿಗೆ ಯಾವುದೇ ತೊಂದರೆ ಆಗಿಲ್ಲ. ಬಸ್‌ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜೆ.ಪಿ.ನಗರ ನಿವಾಸಿ ವೆಂಕಟೇಶ್‌(19) ಮೃತ ವಿದ್ಯಾರ್ಥಿ. ಆತನ ಜತೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಯುವತಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಅಲ್ಲದೆ ಅವರು ಎಲ್ಲಿಗೆ ಹೋಗುತ್ತಿದ್ದರು ಎಂಬ ಬಗ್ಗೆ ಕುಟುಂಬ ಸದಸ್ಯರಿಗೆ ಸರಿಯಾದ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಅತಿವೇಗದಿಂದ ಅನಾಹುತ

ತಲಘಟ್ಟಪುರದ ಮಂಜುನಾಥ ಶಾಲೆಗೆ ಸೇರಿದ ಬಸ್‌ ಸಂಜೆ ಶಾಲೆ ಮುಗಿದ ನಂತರ ಮಕ್ಕಳನ್ನು ಕರೆದುಕೊಂಡು ಹೋಗುತ್ತಿತ್ತು. ಕನಕಪುರ ರಸ್ತೆಯ ತಾತಗುಣಿ ಎಸ್ಟೇಟ್‌ ದಾಟಿದ ನಂತರ ತಿರುವಿದ್ದ ಕಾರಣ ಚಾಲಕ ಬಸ್‌ ಅನ್ನು ನಿಧಾನವಾಗಿ ಚಲಾಯಿಸುತ್ತಿದ್ದರು.

ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಬೈಕ್‌ ಸವಾರ ಶಾಲಾ ಬಸ್‌ ಹಿಂದಿಕ್ಕಲು ಯತ್ನಿಸಿದಾಗ, ತಿರುವಿನಲ್ಲಿ ನಿಯಂತ್ರಣ ತಪ್ಪಿ, ಬಸ್‌ಗೆ ಡಿಕ್ಕಿ ಹೊಡೆದರು. ಘಟನೆಯಲ್ಲಿ ಆಯತಪ್ಪಿ ಸವಾರರಿಬ್ಬರೂ ಕೆಳಗೆ ಬಿದ್ದರು. ಈ ವೇಳೆ ಬೈಕ್‌, ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಸುಮಾರು 30 ಮೀ.ನಷ್ಟು ದೂರ ಎಳೆದುಕೊಂಡು ಹೋದ ರಭಸಕ್ಕೆ ಬೈಕ್‌ನಿಂದ ಪೆಟ್ರೋಲ್‌ ಸೋರಿ ಬೆಂಕಿಯ ಕಿಡಿ ಹೊತ್ತಿಕೊಂಡಿತು. ಅದನ್ನು ಗಮನಿಸಿದ ಚಾಲಕ ದೇವರಾಜ್‌ ತಕ್ಷ ಣ ವಾಹನ ನಿಲ್ಲಿಸಿದರು. ಕೂಡಲೇ ಆಯಾ ಹಾಗೂ ಚಾಲಕ ಸೇರಿ ಬಸ್‌ನಲ್ಲಿದ್ದ ಎಲ್ಲಾ ಮಕ್ಕಳನ್ನು ಕೆಳಗಿಳಿಸಿದರು.

ಅಷ್ಟರಲ್ಲಿ ಬಸ್‌ ಹಾಗೂ ಬೈಕ್‌ ಎರಡೂ ಬೆಂಕಿಗಾಹುತಿಯಾದವು. ಅದೃಷ್ಟವಶಾತ್‌ ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ. ಕೆಲವು ಮಕ್ಕಳ ಬ್ಯಾಗ್‌ಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ.

ಈ ಮಧ್ಯೆ, ಕೆಳಗೆ ಬಿದ್ದ ತಲೆಗೆ ಗಂಭೀರ ಗಾಯಗೊಂಡ ವೆಂಕಟೇಶ್‌ನನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟ. ಈತ ನಗರದ ವಿಜಯಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.

ಬೈಕ್‌ನಲ್ಲಿ ಆತನ ಜತೆ ಇದ್ದ ಯುವತಿ ಪಕ್ಕದ ಮನೆಯ ನಿವಾಸಿಯಾಗಿದ್ದು, ಸ್ನೇಹಿತರ ಹುಟ್ಟುಹಬ್ಬ ಇದ್ದ ಕಾರಣ ಅವರ ಮನೆಗೆ ಹೋಗುತ್ತಿದ್ದುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬೈಕ್‌ ಚಾಲಕ ವೇಗವಾಗಿ ಬಂದದ್ದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಬಸ್‌ ಚಾಲಕ ದೇವರಾಜು, ಕಗ್ಗಲೀಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ