ಆ್ಯಪ್ನಗರ

ಸುಪಾರಿ ಕಿಲ್ಲರ್‌ ಕಾಲಿಗೆ ಪೊಲೀಸರ ಗುಂಡೇಟು

ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸುಪಾರಿ ಕಿಲ್ಲರ್‌ ಮತ್ತು ಕಿಡ್ನ್ಯಾಪರ್‌ ಒಬ್ಬನ ಕಾಲಿಗೆ ಗುಂಡು ಹೊಡೆದು ಪೂರ್ವ ಡಿಸಿಪಿ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.

Vijaya Karnataka 1 Mar 2019, 5:00 am
ಬೆಂಗಳೂರು: ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸುಪಾರಿ ಕಿಲ್ಲರ್‌ ಮತ್ತು ಕಿಡ್ನ್ಯಾಪರ್‌ ಒಬ್ಬನ ಕಾಲಿಗೆ ಗುಂಡು ಹೊಡೆದು ಪೂರ್ವ ಡಿಸಿಪಿ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.
Vijaya Karnataka Web shoot out to supari killer
ಸುಪಾರಿ ಕಿಲ್ಲರ್‌ ಕಾಲಿಗೆ ಪೊಲೀಸರ ಗುಂಡೇಟು


ಕೊತ್ತನೂರಿನ ಬಿಳಿ ಶಿವಾಲೆ ನಿವಾಸಿ ದಿನೇಶ್‌ (30) ಗುಂಡೇಟು ತಿಂದವನು. ಗೆದ್ದಲಹಳ್ಳಿ ರೈಲ್ವೆ ಬ್ರಿಡ್ಜ್‌ ಬಳಿ ಈತನನ್ನು ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ಇದೇ ಸ್ಥಳದಲ್ಲಿ ಹಾಡ ಹಗಲೇ ಸಿಗರೇಟ್‌ ಏಜೆಂಟ್‌ ಒಬ್ಬನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಒಂದೂವರೆ ಲಕ್ಷ ರೂ. ದರೋಡೆ ಮಾಡಿ ಪರಾರಿ ಆಗಿದ್ದ. ಅಲ್ಲದೆ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ಆಪ್ತನಾಗಿದ್ದ ವಿನಯ್‌ ಕಿಡ್ನ್ಯಾಪ್‌ ಪ್ರಕರಣದಲ್ಲೂ ಪೊಲೀಸರಿಗೆ ಬೇಕಾದವನಾಗಿದ್ದ . ಕೊಲೆ ಪ್ರಕರಣದಲ್ಲಿ ಜೈಲು ಸೇರಿ 2 ವರ್ಷಗಳ ಹಿಂದೆ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಹತ್ತಾರು ಬಂಧನ ವಾರೆಂಟ್‌ಗಳಿದ್ದೂ ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದ .

ಪೊಲೀಸರ ಮೇಲೆ ಹಲ್ಲೆ ಯತ್ನ: ಮೂರು ದಿನಗಳ ಹಿಂದೆ ಈತ ಬೆಂಗಳೂರಿಗೆ ಕಾಲಿಟ್ಟಿದ್ದಾನೆ ಎನ್ನುವ ಮಾಹಿತಿ ತನಿಖಾ ತಂಡಕ್ಕೆ ಸಿಕ್ಕಿತ್ತು. ಸ್ವತಃ ಎಸಿಪಿ ಅವರೇ ಈತನ ಬಂಧನಕ್ಕೆ ಫೀಲ್ಡಿಗೆ ಇಳಿದರು. ಗೆದ್ದಲಹಳ್ಳಿ ಸೇತುವೆ ಬಳಿ ರಾತ್ರಿ ಬರುತ್ತಾನೆ. ಇದೇ ಈತನ ಅಡ್ಡಾ ಎನ್ನುವ ಮಾಹಿತಿಯನ್ನು ಪೊಲೀಸರು ಮೊದಲೇ ಸಂಗ್ರಹಿಸಿದ್ದರು. ಅದರಂತೆ ಈ ಜಾಗದ ಮೇಲೆ ನಿಗಾ ಇಟ್ಟಿದ್ದರು. ಬುಧವಾರ ತಡರಾತ್ರಿ ಆರೋಪಿಯನ್ನು ಸುತ್ತುವರೆದಿದ್ದರು. ಪೊಲೀಸರು ಸುತ್ತುವರೆದಿದ್ದಾರೆ ಎನ್ನುವ ಸುಳಿವು ಸಿಕ್ಕ ತಕ್ಷಣ ಆರೋಪಿ ದಿನೇಶ್‌ ಮುಖ್ಯಪೇದೆ ಧರ್ಮ ಎನ್ನುವವರ ಮೇಲೆರಗಿ ಚಾಕುವಿನಿಂದ ಇರಿದು ಪರಾರಿ ಆಗಲು ಯತ್ನಿಸಿದ್ದ. ಅಪಾಯ ಅರಿತ ಎಸಿಪಿ ಮಾದೇವಪ್ಪ ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರು. ಆಗಲೂ ಎಚ್ಚೆತ್ತುಕೊಳ್ಳದಿದ್ದಾಗ ಆರೋಪಿಯ ಎರಡೂ ಕಾಲುಗಳ ಮಂಡಿ ಚಿಪ್ಪಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾಲಿನಿಂದ ಗುಂಡು ಹೊರ ತೆಗೆಯಲಾಗಿದೆ. ಆರೋಪಿ ಪ್ರಾಣಾಯಾಪದಿಂದ ಪಾರಾಗಿದ್ದು, ಚೇತರಿಸಿಕೊಂಡ ನಂತರ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇರೆ ರಾಜ್ಯಗಳಲ್ಲೂ ಪ್ರಕರಣ: ಬಂಧಿತ ದಿನೇಶ್‌ ವಿರುದ್ಧ ಆಂದ್ರಪ್ರದೇಶ, ತಮಿಳುನಾಡು, ತೆಲಂಗಾಣ ಸೇರಿದಂತೆ ರಾಜ್ಯದಲ್ಲೂ ಹತ್ತಾರು ಪ್ರಕರಣಗಳು ದಾಖಲಾಗಿವೆ. ಯಾವತ್ತೂ ಗ್ಯಾಂಗ್‌ ಜತೆಗೆ ಓಡಾಡದೆ ಒಂದಿಬ್ಬರು ಸಹಚರರ ಜತೆ ಮಾತ್ರ ಓಡಾಡಿಕೊಂಡು ಕೃತ್ಯಗಳನ್ನು ಎಸಗುತ್ತಿದ್ದ. ಅಪಹರಣ ಮತ್ತು ಕೊಲೆಗೆ ಸುಪಾರಿ ಪಡೆದ ನಂತರ ಪ್ರತಿ ಕೆಲಸಕ್ಕೂ ಬೇರೆ ಬೇರೆ ಹುಡುಗರನ್ನು ಜತೆ ಮಾಡಿಕೊಂಡು ಕೃತ್ಯ ನಡೆಸಿ ಊರು ಬಿಟ್ಟು ಪರಾರಿ ಆಗುತ್ತಿದ್ದ . ಈತನ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿತ್ತಾದರೂ ಪೊಲೀಸರ ಕಣ್ಣಿಗೆ ಬಿದ್ದಿರಲಿಲ್ಲ.

ರೌಡಿ ಶೀಟರ್‌ ಪಳನಿ ಕೊಲೆ ಆರೋಪ ಸೇರಿದಂತೆ ಹತ್ತಾರು ಪ್ರಕರಣಗಳು ದಿನೇಶ್‌ ಮೇಲಿವೆ. ನ್ಯಾಯಾಲಯದಿಂದ ಬಂಧನ ವಾರೆಂಟ್‌ಗಳೂ ಇವೆ. ಬಂಧನ ಪ್ರಕ್ರಿಯೆಯಲ್ಲಿ ನಮ್ಮ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ. ಹೀಗಾಗಿ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.
-ಮಾದೇವಪ್ಪ, ಎಸಿಪಿ, ಬಾಣಸವಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ