ಆ್ಯಪ್ನಗರ

ಒಂಟಿ ಕೈ ಮನೋಜ್‌ ಸೇರಿ ಇಬ್ಬರ ಬಂಧನ

ಕೈ ಮುರಿದಿದ್ದರೂ ಸಹಚರರ ಜೊತೆ ಸೇರಿ ಅಮಾಯಕ ದಾರಿಹೋಕರನ್ನು ಅಡ್ಡಗಟ್ಟಿ ಬೆದರಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದ ಒಂಟಿ ಕೈ ಮನೋಜ್‌ (24) ಮತ್ತು ಆತನ ಸಹಚರನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

Vijaya Karnataka 13 Oct 2018, 5:00 am
ಬೆಂಗಳೂರು: ಕೈ ಮುರಿದಿದ್ದರೂ ಸಹಚರರ ಜೊತೆ ಸೇರಿ ಅಮಾಯಕ ದಾರಿಹೋಕರನ್ನು ಅಡ್ಡಗಟ್ಟಿ ಬೆದರಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದ ಒಂಟಿ ಕೈ ಮನೋಜ್‌ (24) ಮತ್ತು ಆತನ ಸಹಚರನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web singal hand manoj arrest
ಒಂಟಿ ಕೈ ಮನೋಜ್‌ ಸೇರಿ ಇಬ್ಬರ ಬಂಧನ


ರಾಜಾಜಿನಗರದ ಮನೋಜ್‌ ಮತ್ತು ಸಹಚರ ಮದನ್‌ (24) ಬಂಧಿತರು. ಆರೋಪಿಗಳು ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಜೊತೆ ಸೇರಿ ಆ.26ರಂದು ಮಧ್ಯರಾತ್ರಿ 12.30ರ ಸುಮಾರಿಗೆ ರಾಜಾಜಿನಗರದ ವಾಟಾಳ್‌ ನಾಗರಾಜ್‌ ರಸ್ತೆಯಲ್ಲಿ ಮೋಹನ್‌ರಾಜ್‌ ಎಂಬಾತನನ್ನು ಅಡ್ಡಗಟ್ಟಿ ಮಾರಕಾಸ್ತ್ರದಿಂದ ಕುತ್ತಿಗೆಗೆ ಹಲ್ಲೆ ಮಾಡಿ ಮೊಬೈಲ್‌ ಫೋನ್‌ ದೋಚಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಮೋಹನ್‌, ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಸಾರ್ವಜನಿಕರಲ್ಲಿ ಭೀತಿ ಮೂಡಿಸುವ ದರೋಡೆ ಕೃತ್ಯ ಸಮೀಪದ ಕಟ್ಟಡವೊಂದರಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಓರ್ವ ದುಷ್ಕರ್ಮಿಗೆ ಕೈ ಇರಲಿಲ್ಲ ಎಂಬ ಸುಳಿವನ್ನು ದರೋಡೆಗೆ ಒಳಗಾಗಿದ್ದ ಮೋಹನ್‌ ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ಕೈ ಮುರಿದಿರುವ ಹಳೇ ಆರೋಪಿಗಳ ಕುರಿತು ಮಾಹಿತಿ ಸಂಗ್ರಹಿಸಿದಾಗ ಮನೋಜ್‌ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ, ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿ ತಲೆಮರೆಸಿಕೊಂಡು ಓಡಾಡುತ್ತಿದ್ದ.

ಖಚಿತ ಮಾಹಿತಿ ಆಧರಿಸಿ ಇತ್ತೀಚೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆ.26ರಂದು ಮೋಹನ್‌ರಾಜ್‌ ಅವರನ್ನು ದರೋಡೆ ಮಾಡಿರುವುದು ಖಚಿತವಾಗಿದೆ.

ಮನೋಜ್‌ ವಿರುದ್ಧ ಕುಮಾರಸ್ವಾಮಿ ಲೇಔಟ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಅಲ್ಲದೆ, ಎಚ್‌ಎಸ್‌ಆರ್‌ ಲೇಔಟ್‌, ಹುಳಿಮಾವು ಸೇರಿದಂತೆ ನಗರದ ನಾನಾ ಕಡೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಎದುರಾಳಿಗಳು ಕೈ ಕತ್ತರಿಸಿದ್ದರು

ಅಪರಾಧ ಕೃತ್ಯವೊಂದರಲ್ಲಿ ಭಾಗಿಯಾಗಿರುವ ಮನೋಜ್‌ಗೆ ಎದುರಾಳಿ ತಂಡದ ಸದಸ್ಯರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಕಾರಣ ಬಲಗೈ ಮುರಿದು ಹೋಗಿದೆ. ಆದರೂ, ಸಹಚರರ ಜೊತೆ ಸೇರಿ ದ್ವಿಚಕ್ರ ವಾಹನದಲ್ಲಿ ರಾತ್ರಿ ವೇಳೆ ಒಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ