ಆ್ಯಪ್ನಗರ

ಬೆಡ್‌ರೂಂನಲ್ಲೇ ಅವಿತಿದ್ದ ಆಗಂತುಕ ಚಾಕು ತೋರಿಸಿ ದರೋಡೆ ಮಾಡಿದ

25 ವರ್ಷದ ಒಂಟಿ ಮಹಿಳೆಯನ್ನು ಚಾಕುವಿನಿಂದ ಬೆದರಿಸಿ ಅವರ ಮೈಮೇಲಿದ್ದ ಒಡವೆಗಳನ್ನು ದರೋಡೆ ಮಾಡಿಕೊಂಡು ಪರಾರಿ ಆಗಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ.

Vijaya Karnataka 12 Dec 2018, 5:00 am
ಬೆಂಗಳೂರು : ಮಲಗುವ ಕೋಣೆಯಲ್ಲಿ ಬಚ್ಚಿಟ್ಟುಕೊಂಡಿದ್ದ ದುಷ್ಕರ್ಮಿಯೊಬ್ಬ 25 ವರ್ಷದ ಒಂಟಿ ಮಹಿಳೆಯನ್ನು ಚಾಕುವಿನಿಂದ ಬೆದರಿಸಿ ಅವರ ಮೈಮೇಲಿದ್ದ ಒಡವೆಗಳನ್ನು ದರೋಡೆ ಮಾಡಿಕೊಂಡು ಪರಾರಿ ಆಗಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ.
Vijaya Karnataka Web robbery1


ಡಿ.9 ರಂದು ಘಟನೆ ನಡೆದಿದೆ. ಪ್ರತಿಷ್ಠಿತ ವಿವಿಯಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡಿಕೊಂಡಿರುವ ಸಂಧ್ಯಾ (ಹೆಸರು ಬದಲಾಯಿಸಿದೆ) ಅವರ ಮನೆಯಲ್ಲಿ ಘಟನೆ ನಡೆದಿದ್ದು ದುಷ್ಕರ್ಮಿ ಘಟನೆ ವೇಳೆ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬನಶಂಕರಿ ಮೂರನೇ ಹಂತದ ಐಟಿಐ ಬಡಾವಣೆಯಲ್ಲಿ ನೆಲೆಸಿರುವ ಮಹಿಳೆ ಕೆಲಸ ಮುಗಿಸಿ ಮನೆಗೆ ಬಂದು ರಾತ್ರಿ ಮಲಗುವ ಕೋಣೆಗೆ ಹೋಗುತ್ತಿದ್ದಂತೆ ಮನೆಯಲ್ಲೇ ಅವಿತಿದ್ದ ದುಷ್ಕರ್ಮಿ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅವರ ಬಳಿ ಇದ್ದ ಒಂದೂವರೆ ಲಕ್ಷ ರೂ ಮೌಲ್ಯದ ಚಿನ್ನದ ಸರವನ್ನು ಕದ್ದುಕೊಂಡು ಪರಾರಿ ಆಗಿದ್ದಾನೆ. ಆ ದಿನ ಸಂಜೆ 5.30 ರ ಸುಮಾರಿಗೆ ಸಂಧ್ಯಾಗೆ ಪತಿ ಕರೆ ಮಾಡಿ, ಸ್ನೇಹಿತರ ಮನೆಗೆ ಹೋಗುತ್ತಿದ್ದೇನೆ, ಬರುವುದು ಲೇಟಾಗುತ್ತದೆ ಎಂದು ತಿಳಿಸಿದ್ದರು. ಇದರಿಂದ ಸಂಧ್ಯಾ ಅವರು ಕೆಲಸ ಮುಗಿದ ನಂತರ ತ್ಯಾಗರಾಜನಗರದಲ್ಲಿರುವ ತಾಯಿ ಮನೆಗೆ ಹೋಗಿ ರಾತ್ರಿ 8.30 ರ ಸುಮಾರಿಗೆ ವಾಪಸ್ಸಾಗಿದ್ದರು. ರಾತ್ರಿ ಊಟ ಮುಗಿಸಿ ಸ್ವಲ್ಪ ಸಮಯ ಟಿವಿ ನೋಡಿದ ನಂತರ 9.30ರ ಸುಮಾರಿಗೆ ಮಲಗುವ ಕೋಣೆಗೆ ಹೋಗಿದ್ದರು. ಇನ್ನೇನು ಮಲಗಬೇಕೆನ್ನುವಷ್ಟರಲ್ಲಿ ಧುತ್ತನೆ ಎದುರಿಗೆ ಪ್ರತ್ಯಕ್ಷವಾದ ಆಗಂತುಕ ಚಾಕು ತೋರಿಸಿ ಮೈಮೇಲಿದ್ದ ಚಿನ್ನದ ಸರವನ್ನು ಕಿತ್ತಿದ್ದಲ್ಲದೆ, ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನೂ ದೋಚಿಕೊಂಡು ಪರಾರಿ ಆಗಿದ್ದಾನೆ. ಘಟನೆಯಿಂದ ಎಲ್ಲರೂ ಆಘಾತಗೊಂಡಿದ್ದು, ಆಗಂತುಕ ಮನೆಯೊಳಗೆ ಹೇಗೆ ಬಂದ ಎನ್ನುವ ಪ್ರಶ್ನೆಗೆ ಉತ್ತರ ಸಿಗದೆ ಗೊಂದಲಕ್ಕೆ ಒಳಗಾಗಿದ್ದಾರೆ.

ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ''ಚೆನ್ನಾಗಿ ಪರಿಚಯ ಇರುವವರೇ ಅಥವಾ ಕುಟುಂಬಕ್ಕೆ ಹತ್ತಿರ ಇರುವವರೇ ಕೃತ್ಯದ ಹಿಂದೆ ಇರುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ ಇದನ್ನು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ