ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿ ಅವರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿದ್ದ ಸುಮಾರು 50 ಗ್ರಾಂ ತೂಕದ ಚಿನ್ನಾಭರಣಗಳನ್ನು ಕದ್ದುಕೊಂಡು ಹೋಗಿದ್ದಾರೆ.
ಮನೆ ಮಂದಿಯೆಲ್ಲಾ ಹೊರ ಊರಿಗೆ ಹೋಗಿದ್ದ ಸಂದರ್ಭವನ್ನು ಕಾದುಕೊಂಡಿದ್ದ ಕಳ್ಳರು ಸಂಜಯ್ನಗರದಲ್ಲಿದ್ದ ಅವರ ಮನೆಯ ಬಾಗಿಲನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಒಳಗೆ ಪ್ರವೇಶಿಸಿ ಕೃತ್ಯ ಎಸಗಿದ್ದಾರೆ. ತಮ್ಮ ಗುರುತು ಸಿಗಬಾರದೆಂದು ಮನೆ ಮುಂದಿದ್ದ ಸಿಸಿಟಿವಿ ಕ್ಯಾಮೆರಾಗೆ ಬಟ್ಟೆ ಸುತ್ತಿ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಡಿ.22 ರಂದು ಕಳ್ಳತನ ನಡೆದಿದ್ದು ಡಿ.26 ರಂದು ಮಧ್ಯಾಹ್ನ ಶ್ರೀನಿವಾಸಾಚಾರಿ ಅವರ ಕುಟುಂಬ ಮೈಸೂರಿನಿಂದ ವಾಪಸಾದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಶ್ರೀನಿವಾಸಾಚಾರಿ ಅವರ ಪುತ್ರ ವಕೀಲ ಗೌತಮ್ ಅವರು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಮನೆ ಹೊರಗೆ ಬಿದ್ದಿತ್ತು ಪೇಪರ್: ಮನೆಯೊಳಗೆ ಯಾರೂ ಇಲ್ಲ ಎನ್ನುವುದನ್ನು ಕಳ್ಳರು ಮನೆ ಮುಂದೆ ಬಿದ್ದಿದ್ದ ದಿನ ಪತ್ರಿಕೆ ಮತ್ತು ಹಾಲಿನ ಕವರ್ನಿಂದ ತಿಳಿದುಕೊಂಡಿದ್ದರು. ಸ್ಥಳಕ್ಕೆ ಶ್ವಾನದಳ ಸಿಬ್ಬಂದಿ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿ ಬೆರಳಚ್ಚು ಮತ್ತು ಇನ್ನಿತರೆ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಮನೆಯ ಒಳಗೂ ಒಂದು ಸಿಸಿಟಿವಿ ಕ್ಯಾಮೆರಾ ಇತ್ತು. ಅದರಲ್ಲಿ ಆರೋಪಿಗಳ ಮುಖಚಹರೆ ಸ್ಪಷ್ಟವಾಗಿ ದಾಖಲಾಗಿದೆ.