ಆ್ಯಪ್ನಗರ

ಪರಿಹಾರ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ದರೋಡೆ

ಕಾರಿಗೆ ಆಗಿರುವ ಡ್ಯಾಮೇಜ್‌ಗೆ ಪರಿಹಾರ ಪಡೆಯುವ ನೆಪದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು, ತಂದೆ-ಮಗಳಿಗೆ ಬೆದರಿಸಿ ಹಲ್ಲೆ ನಡೆಸಿ ಚಿನ್ನಾಭರಣ ದೋಚಿರುವ ಘಟನೆ ಬಿಟಿಎಂ ಲೇಔಟ್‌ನಲ್ಲಿ ನಡೆದಿದೆ.

Vijaya Karnataka 4 Jul 2018, 11:48 am
ಬೆಂಗಳೂರು: ಕಾರಿಗೆ ಆಗಿರುವ ಡ್ಯಾಮೇಜ್‌ಗೆ ಪರಿಹಾರ ಪಡೆಯುವ ನೆಪದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು, ತಂದೆ-ಮಗಳಿಗೆ ಬೆದರಿಸಿ ಹಲ್ಲೆ ನಡೆಸಿ ಚಿನ್ನಾಭರಣ ದೋಚಿರುವ ಘಟನೆ ಬಿಟಿಎಂ ಲೇಔಟ್‌ನಲ್ಲಿ ನಡೆದಿದೆ.
Vijaya Karnataka Web theft


ಬಿಟಿಎಂ ಲೇಔಟ್‌ 1ನೇ ಹಂತದ ಸುಂದರೇಶ್‌(56) ಹಲ್ಲೆಗೊಳಗಾದವರು.

ಜೂ.27ರಂದು ಬೆಳಗ್ಗೆ ಸುಂದರೇಶ್‌ ತಮ್ಮ ಮಗಳು ಸ್ನೇಹಾಗೆ ಮನೆಯ ಬಳಿ ಕಾರ್‌ ಡ್ರೈವಿಂಗ್‌ ಹೇಳಿ ಕೊಡುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಕಾರೊಂದು ಸ್ನೇಹ ಚಲಾಯಿಸುತ್ತಿದ್ದ ಕಾರಿನ ಮುಂದೆ ಅಡ್ಡ ನಿಂತಿತ್ತು. ಡ್ರೈವಿಂಗ್‌ ಕಲಿಯುತ್ತಿದ್ದ ಸ್ನೇಹ, ಎದುರಿಗೆ ನಿಂತ ಕಾರು ನೋಡಿ ಗಲಿಬಿಲಿಗೊಂಡರು. ಕಾರನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಲಘುವಾಗಿ ಡಿಕ್ಕಿ ಹೊಡೆದಿತ್ತು. ಆಗ ಕಾರಿನ ಒಳಗಿದ್ದ ನಾಲ್ವರು ಏಕಾಏಕಿ ಜಗಳ ತೆಗೆದಿದ್ದರು. ಈ ವೇಳೆ ಸುಂದರೇಶ್‌, ಕಾರಿಗೆ ಆಗಿರುವ ಹಾನಿಗೆ 2 ಸಾವಿರ ರೂ. ಪರಿಹಾರ ಕೊಡುವುದಾಗಿ ಒಪ್ಪಿಕೊಂಡಿದ್ದರು.

ಅದರಂತೆ ಹಣ ಕೊಡಲು ಅವರನ್ನು ಮನೆ ಹತ್ತಿರ ಕರೆದುಕೊಂಡು ಹೋಗಿ ಬೀರು ತೆಗೆಯುತ್ತಿದ್ದಂತೆಯೇ ಒಳಗೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಬೆದರಿಸಿ 53 ಸಾವಿರ ರೂ. ನಗದು, ಚಿನ್ನಾಭರಣ ಸೇರಿದಂತೆ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ತಡೆಯಲು ಬಂದ ಸ್ನೇಹ ಅವರ ಕತ್ತು ಮತ್ತು ಕೈಗೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯರ ನೆರವಿನಿಂದ ತಂದೆ-ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ