* ಅಪಾರ್ಟ್ಮೆಂಟ್ನಿಂದ ಬಿದ್ದು ಕಾರ್ಮಿಕ ಸಾವು
ವಿಕ ಸುದ್ದಿಲೋಕ ಬೆಂಗಳೂರು
ಅಪಾರ್ಟ್ಮೆಂಟ್ನಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕ ಕೆಳಗೆ ಬಿದ್ದು ಮೃತಪಟ್ಟಾಗ ಅದು ರಸ್ತೆ ಅಪಘಾತದಿಂದ ಸಂಭವಿಸಿದ ಸಾವು ಎಂದು ಪೊಲೀಸರಿಗೆ ಸುಳ್ಳು ದೂರು ನೀಡಲು ಕಾರಣರಾದ ಮೇಸ್ತ್ರಿ ಸೇರಿದಂತೆ ಇಬ್ಬರನ್ನು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೇ 22ರಂದು ಅಕ್ಷಯ ನಗರದಲ್ಲಿ ನಿರ್ಮಾಣ ಹಂತದ 'ಹನಿ ಡ್ಯೂ' ಅಪಾರ್ಟ್ಮೆಂಟ್ನಲ್ಲಿ ಸೆಂಟ್ರಿಂಗ್ ಕೆಲಸ ಮಾಡುವ ವೇಳೆ ಮಿಲ್ಟನ್ ಹಾಲ್ದರ್(18) ಕೆಳಗೆ ಬಿದ್ದು ಮೃತಪಟ್ಟಿದ್ದ. ಈ ಸಂಬಂಧ ಕಾಮಗಾರಿ ಸ್ಥಳದ ಉಸ್ತುವಾರಿ ವಹಿಸಿದ್ದ ಮೊಹಮ್ಮದ್ ಹಬೀಬ್ ಹಾಗೂ ಮೇಸ್ತ್ರಿ ಕೋನಾರೆಡ್ಡಿ ಎಂಬುವರನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳ ಮೂಲದ ಮಿಲ್ಟನ್ ಕಳೆದೊಂದು ತಿಂಗಳಿಂದ 'ಹನಿ ಡ್ಯೂ' ಅಪಾರ್ಟ್ಮೆಂಟ್ನಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ. ಮೇ 22ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ 1ನೇ ಮಹಡಿಯಲ್ಲಿ ಸೆಂಟ್ರಿಂಗ್ ಕಟ್ಟುವಾಗ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದ. ಮೃತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದ, ಪಶ್ಚಿಮ ಬಂಗಾಳ ಮೂಲದ ಮತ್ತೊಬ್ಬ ವ್ಯಕ್ತಿ ಬಿಶ್ವಜಿತ್ ದಾಸ್(34), ಹಬೀಬ್ ಹಾಗೂ ಮೇಸ್ತ್ರಿ ಕೋನಾರೆಡ್ಡಿ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದರು. 'ಊಟಕ್ಕೆಂದು ತೆರಳಿದ್ದಾಗ ಎ.ಕೆ. ಕಾಲೋನಿ ಸಮೀಪದ ರಸ್ತೆಯಲ್ಲಿ ಯಾವುದೋ ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ' ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲೂ ಹೇಳಿಕೆ ನೀಡಿದ್ದರು. ಅದರಂತೆ ಸಂಚಾರ ಪೊಲೀಸರು ಹಿಟ್ ಆ್ಯಂಡ್ ರನ್ ಕೇಸ್ ದಾಖಲಿಸಿಕೊಂಡಿದ್ದರು.
ಅಪಘಾತದಿಂದ ಸಂಭವಿಸಿದ ಸಾವು ಅಲ್ಲ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ವೈದ್ಯರು ಉಲ್ಲೇಖಿಸಿದ್ದರು. ಹೀಗಾಗಿ, ಮರು ತನಿಖೆ ಆರಂಭಿಸಿದ ಸಂಚಾರ ಪೊಲೀಸರು, ಮಿಲ್ಟನ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಅಕ್ಕಪಕ್ಕದ ಮನೆಯವರ ವಿಚಾರಣೆ ನಡೆಸಿದ್ದಾರೆ. ಆಗ ವ್ಯಕ್ತಿಯೊಬ್ಬರು, ಮೃತ ಕಾರ್ಮಿಕ ಕಟ್ಟಡದಿಂದ ಬಿದ್ದಿದ್ದಾನೆ ಎಂದು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು, ಆರೋಪಿಗಳನ್ನು ಮರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಮಾಲೀಕನ ಸೂಚನೆಯಂತೆ ಸುಳ್ಳು :
''ಮಿಲ್ಟನ್ ಕಟ್ಟಡದಿಂದ ಬಿದ್ದಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಬೇಡಿ. ಬದಲಿಗೆ ರಸ್ತೆ ಅಪಘಾತದಿಂದ ಮೃತಪಟ್ಟಿದ್ದಾನೆಂದು ತಿಳಿಸಿ ಎಂದು ನಮಗೆ ಅಪಾರ್ಟ್ಮೆಂಟ್ ಮಾಲೀಕ ಸಮೀವುಲ್ಲಾ ಸೂಚಿಸಿದ್ದರು. ಅವರು ಹೇಳಿದಂತೆ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದೇವೆ'' ಎಂದು ಹಬೀಬ್ ಹಾಗೂ ಕೋನಾರೆಡ್ಡಿ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ನಿರ್ಲಕ್ಷ್ಯದಿಂದ ಸಾವು, ಸಾಕ್ಷ್ಯ ನಾಶ ಹಾಗೂ ಸುಳ್ಳು ಮಾಹಿತಿ ನೀಡಿದ ಸಂಬಂಧ ಕೇಸು ದಾಖಲಿಸಿ ಬೇಗೂರು ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಿದ್ದಾರೆ.
ಮಾಲೀಕ ಸಮೀವುಲ್ಲಾ ಹಾಗೂ ಬಿಶ್ವಜೀತ್ ದಾಸ್ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ಮುಂದುವರಿದಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಅಭಿಶೇಕ್ ಗೋಯಲ್ ಮಾಹಿತಿ ನೀಡಿದರು.