ಬೆಂಗಳೂರು: ಚಾಮರಾಜಪೇಟೆ ಪೊಲೀಸ್ ಠಾಣೆ ಸಮೀಪದಲ್ಲೇ ಕಾರು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ ಆರೋಪಿಯನ್ನು ಸಾರ್ವಜನಿಕರು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಶುಕ್ರವಾರ ನಡೆದಿದೆ.
ವಾಲ್ಮೀಕಿ ನಗರ ನಿವಾಸಿ ಇಮ್ತಿಯಾಜ್ ಖಾನ್ ಅಲಿಯಾಸ್ ಜಬ್ಬಾರ್ (20) ಬಂಧಿತ ದರೋಡೆಕೋರ.
ಶುಕ್ರವಾರ ಬೆಳಗ್ಗೆ 10.30 ಸುಮಾರಿಗೆ ಕೆಂಗೇರಿ ಮಾರ್ಗವಾಗಿ ಉಬರ್ ಟ್ಯಾಕ್ಸಿಯೊಂದು ಚಾಮರಾಜಪೇಟೆ 2ನೇ ಮುಖ್ಯರಸ್ತೆಗೆ ಬಂದಿದೆ. ಕಾರು ತಿರುವು ಪಡೆಯುತ್ತಿದ್ದಾಗ ಏಕಾಏಕಿ ಕಾರಿಗೆ ತನ್ನ ಪಲ್ಸರ್ ಬೈಕ್ ಅಡ್ಡ ನಿಲ್ಲಿಸಿದ ಜಬ್ಬಾರ್, ಚಾಲಕ ಸುರೇಶ್ನನ್ನು ಕೆಳಗಿಳಿಯುವಂತೆ ಬೆದರಿಸಿದ್ದ. ಬಳಿಕ ಮಾರಕಾಸ್ತ್ರ ಹಿಡಿದು ಹೆದರಿಸಿ ಮೊಬೈಲ್ ಕಸಿದು, ಪರ್ಸ್ ನೀಡುವಂತೆ ಕೇಳಿದ್ದಾನೆ. ಈ ವೇಳೆ ಆತಂಕಗೊಂಡ ಚಾಲಕ, ಜೋರಾಗಿ ಕೂಗಿಕೊಂಡಿದ್ದಾನೆ. ತಕ್ಷಣ ಸ್ಥಳಕ್ಕೆ ಜಮಾಯಿಸಿದ್ದ ಸಾರ್ವಜನಿಕರು ಗುಂಪು ಸೇರಿ ಜಬ್ಬಾರ್ನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಜಬ್ಬಾರ್ ಈ ಹಿಂದೆ ಮನೆ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ ಈಗಲೂ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದಾನೆ. ಆರೋಪಿಯಿಂದ ಜಪ್ತಿ ಮಾಡಲಾಗಿರುವ ಬೈಕ್ಗೆ ಯಾವುದೇ ದಾಖಲೆಗಳು ಇಲ್ಲ. ಹೀಗಾಗಿ, ಬೈಕ್ ಕೂಡಾ ಕಳ್ಳತನ ಮಾಡಿ ಬಳಕೆ ಮಾಡುತ್ತಿರುವ ಅನುಮಾನವಿದ್ದು, ವಿಚಾರಣೆ ನಡೆಸಲಾಗುತ್ತಿದೆ,'' ಎಂದು ಚಾಮರಾಜಪೇಟೆ ಪೊಲೀಸರು ತಿಳಿಸಿದ್ದಾರೆ.