ಆ್ಯಪ್ನಗರ

ಸಂಪ್‌ಗೆ ಬಿದ್ದು ಇಬ್ಬರು ಮಕ್ಕಳ ಸಾವು

ನಿರ್ಮಾಣ ಹಂತದ ಕಟ್ಟಡದಲ್ಲಿ ನಿರ್ಮಿಸಿದ್ದ ನೀರಿನ ಸಂಪ್‌ಗೆ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಕೆ.ಆರ್‌ ಪುರದ ಕೊಡಿಗೇಹಳ್ಳಿಯಲ್ಲಿ ಗುರುವಾರ ನಡೆದಿದೆ.

Vijaya Karnataka 29 Mar 2019, 5:00 am
Vijaya Karnataka Web BNG-2803-2-2-SUMP PHOTO
ಬೆಂಗಳೂರು/ಕೆ.ಆರ್‌.ಪುರಂ: ನಿರ್ಮಾಣ ಹಂತದ ಕಟ್ಟಡದಲ್ಲಿ ನಿರ್ಮಿಸಿದ್ದ ನೀರಿನ ಸಂಪ್‌ಗೆ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಕೆ.ಆರ್‌ ಪುರದ ಕೊಡಿಗೇಹಳ್ಳಿಯಲ್ಲಿ ಗುರುವಾರ ನಡೆದಿದೆ.

ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಯಾದಗಿರಿ ಸಮೀಪದ ಚಿಂತಕುಂಟಾ ಮೂಲದ ಕೂಲಿ ಕಾರ್ಮಿಕರಾದ ಕವಿತಾ ಮತ್ತು ಮಲ್ಲಪ್ಪ ದಂಪತಿಯ ಮಕ್ಕಳಾದ ನವೀನ್‌(5) ಮತ್ತು ಒಂದೂವರೆ ವರ್ಷದ ಬಸಮ್ಮ ಮೃತರು. ಈ ಸಂಬಂಧ ಕಟ್ಟಡ ಮಾಲೀಕರ ವಿರುದ್ಧ ನಿರ್ಲಕ್ಷ್ಯತನ ಆರೋಪದಡಿ ಕೇಸ್‌ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ವೈಟ್‌ಫೀಲ್ಡ್‌ ಉಪ ವಿಭಾಗ ಡಿಸಿಪಿ ಅಬ್ದುಲ್‌ ಅಹದ್‌ ತಿಳಿಸಿದರು.

ಐದು ವರ್ಷಗಳ ಹಿಂದೆ ಮಲ್ಲಪ್ಪ ಮತ್ತು ಮಲ್ಲಪ್ಪ ದಂಪತಿ ಕೂಲಿ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಮಲ್ಲಪ್ಪ ಮತ್ತೊಂದು ಮದುವೆಯಾಗಿದ್ದು, ಆತನ ಪತ್ನಿ ಊರಿನಲ್ಲಿದ್ದರು. ಕೆಲ ತಿಂಗಳಿಂದ ಕೊಡಿಗೇಹಳ್ಳಿಯಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿ ಅಲ್ಲೇ ನೆಲೆಸಿದ್ದರು. 15 ದಿನಗಳ ಹಿಂದೆ ಮಲ್ಲಪ್ಪ ಯಾದಗಿರಿಯಲ್ಲಿರುವ ತನ್ನ ಎರಡನೇ ಪತ್ನಿ ಮನೆಗೆ ಹೋಗಿದ್ದ. ಕವಿತಾ ತನ್ನ ಸಹೋದರ ಭೀಮಪ್ಪ ಮತ್ತು ತಾಯಿ ಜತೆಯಲ್ಲಿ ವಾಸವಿದ್ದರು. ಗುರುವಾರ ಎಂದಿನಂತೆ ಕವಿತಾ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಮನೆ ಬಳಿಯೇ ಆಟವಾಡುತ್ತಿದ್ದ ನವೀನ್‌ ಮತ್ತು ಬಸಮ್ಮ ಮಧ್ಯಾಹ್ನ 12.30ರಲ್ಲಿ ಮುಚ್ಚಳ ಮುಚ್ಚದೇ ತೆರೆದ ಸ್ಥಿತಿಯಲ್ಲಿದ್ದ ನೀರಿನ ಸಂಪ್‌ಗೆ ಬಿದ್ದಿದ್ದಾರೆ. ಅವರು ಹೇಗೆ ಬಿದ್ದರು ಎನ್ನುವುದನ್ನು ಯಾರೂ ಗಮನಿಸಿಲ್ಲ. ಆಟವಾಡುತ್ತಿದ್ದ ಮಕ್ಕಳು ಕಾಣದೆ ಇದ್ದಾಗ ಸುತ್ತಲು ಹುಡುಕಾಟ ನಡೆಸಿದ ಕವಿತಾ, ಕೊನೆಗೆ ನೀರಿನ ಸಂಪ್‌ ನೋಡಿದಾಗ ಮಕ್ಕಳು ಬಿದ್ದಿರುವುದು ಗೊತ್ತಾಗಿದೆ. ತಕ್ಷಣ ಸ್ಥಳೀಯರನ್ನು ಕರೆಸಿ ಮೇಲೆತ್ತಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದರು.

ಪ್ರಕರಣ ದಾಖಲಿಸಿಕೊಂಡು ನಿರ್ಲಕ್ಷ್ಯತನ ಆರೋಪದಲ್ಲಿ ಕಟ್ಟಡ ಮಾಲೀಕರು ಹಾಗೂ ಸಂಬಂಧಪಟ್ಟ ಎಂಜಿನಿಯರ್‌, ಗುತ್ತಿಗೆದಾರರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ಮುಂಜಾಗ್ರತಾ ಕ್ರಮ ಇರಲಿಲ್ಲ: ಕಟ್ಟಡ ನಿರ್ಮಾಣದ ವೇಳೆ ವಿದ್ಯುತ್‌ ಸಂಪರ್ಕ, ನೀರಿನ ಸಂಪ್‌ ನಿರ್ವಹಣೆ ಮತ್ತು ಕೆಲಸ ಮಾಡುವ ಕಾರ್ಮಿಕರಿಗೆ ಅಪಾಯ ಸಂಭವಿಸದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಕಟ್ಟಡ ಮಾಲೀಕರು, ಎಂಜಿನಿಯರ್‌ ಮತ್ತು ಗುತ್ತಿಗೆದಾರರ ಜವಾಬ್ದಾರಿ. ಸಂಪ್‌ನ ಮೇಲೆ ಮುಚ್ಚಳ ಮುಚ್ಚಿರಬೇಕು. ಮುಚ್ಚಿದ್ದರೆ ಮಕ್ಕಳಿಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಹೀಗಾಗಿ, ನಿರ್ಲಕ್ಷ್ಯ ಸ್ಪಷ್ಟವಾಗಿದೆ ಎಂದು ಪೊಲೀಸರು ಹೇಳಿದರು.

ಬಿಬಿಎಂಪಿಯಿಂದ ಅನುಮತಿ ಇರಲಿಲ್ಲ: ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಅನುಮತಿ ಪಡೆದಿಲ್ಲ ಎಂದು ಪಾಲಿಕೆ ಸಹಾಯಕ ಎಂಜಿನಿಯರ್‌, ಕಟ್ಟಡ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದರು. ಮಂಜೂರಾತಿ ನಕ್ಷೆ, ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಪತ್ರ, ಭೂ ಪರಿವರ್ತನೆ ದಾಖಲೆ, ಬಿಬಿಎಂಪಿ ಖಾತಾ ಪ್ರಮಾಣ ಪತ್ರ ತರುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು. ಹಾಗಿದ್ದರೂ ಕಟ್ಟಡ ನಿರ್ಮಾಣ ಮುಂದುವರಿಸಿದ್ದರು ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ