ಆ್ಯಪ್ನಗರ

ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್‌ ಸ್ಫೋಟ ಪ್ರಕರಣ, ಇಬ್ಬರು ಅಪರಾಧಿಗಳಿಗೆ 8 ವರ್ಷ ಜೈಲು

ಅಹಮ್ಮದ್‌ ಜಮಾಲ್‌ ಮತ್ತು ಆಫ್ತಾಬ್‌ ಆಲಮ್‌ ಅಲಿಯಾಸ್‌ ಫಾರೂಕ್‌ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ನ್ಯಾಯಾಲಯ ಮಂಗಳವಾರ ಶಿಕ್ಷೆ ಪ್ರಕಟಿಸಿದೆ.

Vijaya Karnataka 30 Jun 2020, 5:10 pm

ಬೆಂಗಳೂರು: 2010ರಲ್ಲಿ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡಿದ್ದ ಇಬ್ಬರು ಉಗ್ರರಿಗೆ ನ್ಯಾಯಾಲಯ 8 ವರ್ಷ ಜೈಲು ಶಿಕ್ಷೆ ಮತ್ತು 4 ಲಕ್ಷ ರೂಪಾಯಿ ದಂಡ ವಿಧಿಸಿದೆ.
Vijaya Karnataka Web Chinnaswamy Stadium Bomb Blast


ಅಹಮ್ಮದ್‌ ಜಮಾಲ್‌ ಮತ್ತು ಆಫ್ತಾಬ್‌ ಆಲಮ್‌ ಅಲಿಯಾಸ್‌ ಫಾರೂಕ್‌ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ನ್ಯಾಯಾಲಯ ಮಂಗಳವಾರ ಶಿಕ್ಷೆ ಪ್ರಕಟಿಸಿದೆ.

ಈ ಇಬ್ಬರು ನ್ಯಾಯಾಧೀಶ ವೆಂಕಟೇಶ್‌ ಆರ್‌. ಹುಲಗಿ ಅವರ ಎದುರಿಗೆ ತಪ್ಪೊಪ್ಪಿಗೆ ನೀಡಲು ಸಿದ್ಧವಿರುವುದಾಗಿ ಈ ಹಿಂದೆಯೇ ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ನ್ಯಾಯಾಲಯ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಕಲಂಗಳಡಿ ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಯನ್ನು ಸೋಮವಾರ ದಾಖಲಿಸಿಕೊಂಡಿತ್ತು.
ಚಿನ್ನಸ್ವಾಮಿ ಸ್ಫೋಟ ಪ್ರಕರಣ: 10 ವರ್ಷಗಳ ಬಳಿಕ ಯಾಸಿನ್ ಭಟ್ಕಳ್ ಸಹಚರನಿಗೆ ಜೈಲು ಶಿಕ್ಷೆ

‘‘ನಾವು ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆ ಸಕ್ರಿಯ ಸದಸ್ಯರು. ದೆಹಲಿಯ ಜಾಮೀಯಾನಗರದ ಮನೆಯೊಂದರಲ್ಲಿ ಒಳ ಸಂಚು ರೂಪಿಸಿದ್ದೆವು. ಇದೇ ಫ್ಲ್ಯಾಟ್‌ನಲ್ಲಿದ್ದ ನಮಗೆ ‘ಲಷ್ಕರ್‌ ಇ-ತೋಯ್ಬಾ’ ಸಂಘಟನೆಯ ಆರ್ಥಿಕ ಸಹಾಯ ದೊರಕಿತ್ತು. ಬಾಂಬ್‌ ಸ್ಫೋಟಿಸುವ ಸ್ಥಳವನ್ನು ಪ್ರಮುಖ ಆರೋಪಿ ಮಹಮದ್‌ ಯಾಸಿನ್‌ ಅಲಿಯಾಸ್‌ ಶಾರೂಕ್‌ ನಿರ್ದಶನದಂತೆ ಗುರುತಿಸಲಾಗಿತ್ತು. ಬಳಿಕ ಕೃತ್ಯಕ್ಕೆ ನೆರವಾಗಲು ಬೆಂಗಳೂರಿನ ಸದಾಶಿವನಗರ ಮತ್ತು ತುಮಕೂರಿನಲ್ಲಿ ಸಂಚು ರೂಪಿಸಲಾಗಿತ್ತು. ಆರೋಪಿ ಎ2 ಮತ್ತು ಎ4 ಜತೆ ಇಬ್ಬರು ಸೇರಿ ಸ್ಫೋಟಕಗಳನ್ನು ತಯಾರು ಮಾಡಿದ್ದೆವು. ಎಲೆಕ್ಟ್ರಿಕಲ್‌ ಡಿಟೋನೇಟರ್ಸ್‌, ಬ್ಯಾಟರಿಗಳನ್ನು ಸೇರಿಸಿ ಸ್ಫೋಟಕ ಸಿದ್ಧಪಡಿಸಿದ್ದೆವು. ಅದಕ್ಕಾಗಿ ಕೆಎಸ್‌ಸಿಎ ಸುತ್ತಮುತ್ತ ಸುತ್ತಾಡಿ ಜಾಗ ಸೆಟ್‌ ಮಾಡಿದ್ದೆವು. ಸ್ಫೋಟಕಗಳನ್ನು ತುಮಕೂರಿನಿಂದ ಬೆಂಗಳೂರಿಗೆ ತಂದೆವು. ಯಾಸಿನ್‌ ಮತ್ತು ನಾಲ್ವರು ಸೇರಿಕೊಂಡು ಅಲ್ಲಿಂದ ಐದು ಸ್ಫೋಟಕಗಳನ್ನು ಶಿಫ್ಟ್‌ ಮಾಡಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಳವಡಿಸಿದ್ದೆವು. ಟೈಮರ್‌ಗಳ ಮೂಲಕ ಸ್ಫೋಟದ ಸಮಯ ನಿಗದಿ ಮಾಡಿದೆವು. ಅನಿಲ್‌ ಕುಂಬ್ಳೆ ಸರ್ಕಲ್‌ ಗೇಟ್‌ ನಂಬರ್‌ 12, ಕ್ವೀನ್ಸ್‌ ರೋಡ್‌ ಗೇಟ್‌ ನಂ. 8 ಪುಟ್‌ಪಾತ್‌ ಗೇಟ್‌ ನಂ 1, ಬಿಎಂಟಿಸಿ ಬಸ್‌ ಸ್ಟಾಪ್‌ ಗೇಟ್‌ ನಂ. 1ರ ಬಳಿ ಸ್ಫೋಟಕ ಇಟ್ಟಿದ್ದೆವು. ಅದರಲ್ಲಿ ಗೇಟ್‌ ನಂ. 12ರಲ್ಲಿದ್ದ ಬಾಂಬ್‌ ಸ್ಫೋಟಗೊಂಡು 15 ಮಂದಿ ಗಾಯಗೊಂಡಿದ್ದರು. ಉಳಿದವುಗಳನ್ನು ಪೊಲೀಸರು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದರು’’ ಎಂದು ಈ ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದರು. ಇದೇ ಹೇಳಿಕೆಯನ್ನೇ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳ ವಿರುದ್ದ ಸರಕಾರಿ ಅಭಿಯೋಜಕ ಸಿ.ಎ. ರವೀಂದ್ರ ವಾದಿಸಿದ್ದರು. ಅವರಿಗೆ ಸಹಾಯಕ ಅಭಿಯೋಜಕರಾಗಿ ಸುದನ್ವಾ ಅವರು ವಾದ ಮಾಡಿದ್ದರು. ಆರೋಪಿಗಳಿಬ್ಬರ ಹೇಳಿಕೆ ದಾಖಲಿಸಿಕೊಂಡಿರುವ ನ್ಯಾಯಾಲಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತ್ತು.

ತಪ್ಪೊಪ್ಪಿಗೆ ತಿರಸ್ಕರಿಸಿ

ಈ ನಡುವೆ, ಆರೋಪಿಗಳ ತಪ್ಪೊಪ್ಪಿಗೆ ತಿರಸ್ಕರಿಸುವಂತೆ ಸರಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮನವಿ ಮಾಡಿದರು. ‘‘ಆರೋಪಿಗಳು ಖಿನ್ನತೆ ಮತ್ತು ಹತಾಶೆಯಿಂದ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳು ಕೇಂದ್ರ ಸರಕಾರದ ವಿರುದ್ಧ ಯುದ್ಧ ಸಾರಿದವರು. ಹೀಗಾಗಿ, ಇವರಿಗೆ ಶಿಕ್ಷೆ ಆಗಲೇಬೇಕು. ತಪ್ಪೊಪ್ಪಿಗೆ ಅರ್ಜಿ ವಜಾ ಮಾಡಬೇಕು’’ ಎಂದು ವಾದಿಸಿದ್ದರು. ಆದರೆ ಇಬ್ಬರು ಅರೋಪಿಗಳ ಹೇಳಿಕೆ ಆಧಾರದಲ್ಲಿ ಮುಂದಿನ ತೀರ್ಪನ್ನು ನ್ಯಾಯಾಲಯ ಮಂಗಳವಾರಕ್ಕೆ ಕಾದಿರಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ