ಆ್ಯಪ್ನಗರ

ಕಾಂಪೌಂಡ್‌ ಕುಸಿದು ಖಾಸಗಿ ಕಂಪನಿ ಉದ್ಯೋಗಿ ಸಾವು ಗೋಶಾಲೆ ಮಾಲೀಕರ ವಿರುದ್ಧ ಕೇಸು ದಾಖಲು

ಕೆ.ಆರ್‌.ಪುರಂ ಬಳಿಯ ಗರುಡಾಚಾರ್‌ಪಾಳ್ಯದಲ್ಲಿರುವ ಬಾಗ್‌ಮನೆ ಟೆಕ್‌ಪಾರ್ಕ್‌ ಸಮೀಪದ ಗೋ ಶಾಲೆಯ ಕಾಂಪೌಂಡ್‌ ಕುಸಿದು ಖಾಸಗಿ ಕಂಪೆನಿ ಉದ್ಯೋಗಿ ಶಿವಕೈಲಾಶ್‌ ರೆಡ್ಡಿ (30) ಎಂಬುವರು ಮೃತಪಟ್ಟಿದ್ದಾರೆ

Vijaya Karnataka 2 May 2019, 5:00 am
ಬೆಂಗಳೂರು: ಕೆ.ಆರ್‌.ಪುರಂ ಬಳಿಯ ಗರುಡಾಚಾರ್‌ಪಾಳ್ಯದಲ್ಲಿರುವ ಬಾಗ್‌ಮನೆ ಟೆಕ್‌ಪಾರ್ಕ್‌ ಸಮೀಪದ ಗೋ ಶಾಲೆಯ ಕಾಂಪೌಂಡ್‌ ಕುಸಿದು ಖಾಸಗಿ ಕಂಪೆನಿ ಉದ್ಯೋಗಿ ಶಿವಕೈಲಾಶ್‌ ರೆಡ್ಡಿ (30) ಎಂಬುವರು ಮೃತಪಟ್ಟಿದ್ದಾರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Vijaya Karnataka Web wall collapsed pvt company employ death
ಕಾಂಪೌಂಡ್‌ ಕುಸಿದು ಖಾಸಗಿ ಕಂಪನಿ ಉದ್ಯೋಗಿ ಸಾವು ಗೋಶಾಲೆ ಮಾಲೀಕರ ವಿರುದ್ಧ ಕೇಸು ದಾಖಲು


ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರದ ನಿವಾಸಿಯಾದ ಶಿವಕೈಲಾಶ್‌ ರೆಡ್ಡಿ , ದೊಡ್ಡನೆಕ್ಕುಂದಿ ಬಳಿಯ ಟೀಮ್‌ಲೀಸ್‌ ಕಂಪೆನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ 6 ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದ್ದರು. ಗರುಡಾಚಾರ್‌ಪಾಳ್ಯದ ಪಿಜಿಯಲ್ಲಿ ನೆಲೆಸಿದ್ದ ಅವರು, ಸಮೀಪದಲ್ಲೇ ಇರುವ ಕಂಪನಿಗೆ ನಿತ್ಯವೂ ನಡೆದುಕೊಂಡು ಹೋಗಿ ಬರುತ್ತಿದ್ದರು. ಮಂಗಳವಾರ ರಾತ್ರಿ 7.45ರ ಸುಮಾರಿಗೆ ಕೆಲಸ ಮುಗಿಸಿ, ಪಿಜಿಗೆ ಹಿಂದಿರುಗುತ್ತಿದ್ದ ಶಿವಕೈಲಾಶ್‌ ರೆಡ್ಡಿ ಮೇಲೆ ಗೋ ಶಾಲೆಗೆ ಸೇರಿದ ಕಾಂಪೌಂಡ್‌ ಉರುಳಿ ಬಿದ್ದಿದ್ದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಶಿವಕೈಲಾಶ್‌ ಅವರಿಗೆ ಕೆಲ ದಿನಗಳ ಹಿಂದೆಯಷ್ಟೇ ವಿವಾಹ ನಿಶ್ಚಯವಾಗಿತ್ತು.

ಮೃತರ ಸಹೋದರ ಶಿವಕಾರ್ತಿಕ್‌ ರೆಡ್ಡಿ ನೀಡಿದ್ದ ದೂರು ಆಧರಿಸಿ, ಮಹದೇವಪುರ ಪೊಲೀಸರು ಗೋ ಶಾಲೆಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಚಿವ ಎಂಟಿಬಿ ನಾಗರಾಜ್‌, ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು ಬುಧವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಸಚಿವರು, ''ಕಾಂಪೌಂಡ್‌ ಕುಸಿದು ಮೃತಪಟ್ಟ ಶಿವಕೈಲಾಶ್‌ ರೆಡ್ಡಿ ಅವರ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು. ಘಟನೆ ಸಂಬಂಧ ಪೊಲೀಸರು ಗೋ ಶಾಲೆಯ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ,'' ಎಂದು ತಿಳಿಸಿದರು.

ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ''ಗೋ ಶಾಲೆ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆಗಾಲ ಆರಂಭಕ್ಕೆ ಮುನ್ನವೇ ಶಿಥಿಲಗೊಂಡಿರುವ ಕಾಂಪೌಂಡ್‌ ಮತ್ತು ಒಣಗಿದ, ರೋಗಗ್ರಸ್ಥ ಮರಗಳು, ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲು ಕ್ರಮ ವಹಿಸಲಾಗಿದೆ,'' ಎಂದು ಹೇಳಿದರು.

ಕಾಂಪೌಂಡ್‌ ತೆರವುಗೊಳಿಸಿದ ಬಿಬಿಎಂಪಿ

ಗೋ ಶಾಲೆಯು ರಸ್ತೆಯ ಬದಿಯಲ್ಲಿ ನಿರ್ಮಿಸಿದ್ದ 8-10 ಅಡಿ ಎತ್ತರದ 600 ಮೀಟರ್‌ ಉದ್ದದಷ್ಟು ಕಾಂಪೌಂಡನ್ನು ಜೆಸಿಬಿಗಳ ನೆರವಿನಿಂದ ಬಿಬಿಎಂಪಿ ತೆರವುಗೊಳಿಸಿತು. ಶಿಥಿಲಾವಸ್ಥೆಯಲ್ಲಿದ್ದ ಕಾಂಪೌಂಡ್‌ ಮತ್ತೆ ಕುಸಿದು ಬೀಳುವ ಆತಂಕ ಇತ್ತು. ಮಳೆಗೆ ನೆನೆದಿದ್ದ 10-12 ಅಡಿಯಷ್ಟು ಉದ್ದದ ಗೋಡೆಯು ಏಕಾಏಕಿ ಕುಸಿದು, ದುರ್ಘಟನೆ ಸಂಭವಿಸಿತ್ತು.

ಮಳೆ ಹಾನಿ ಪ್ರದೇಶಗಳಲ್ಲಿ ಪರಿಶೀಲನೆ

ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು ಕೆ.ಆರ್‌.ಪುರ, ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಮಡಿವಾಳ, ಲಿ ಮೆರಿಡಿಯನ್‌ ಬಳಿಯ ಅಂಡರ್‌ಪಾಸ್‌, ಕಾವೇರಿ ಜಂಕ್ಷನ್‌ನಲ್ಲಿನ ಅಂಡರ್‌ಪಾಸ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಅಂಡರ್‌ಪಾಸ್‌ನಲ್ಲಿ ನಿಂತಿದ್ದ ನೀರನ್ನು ಸ್ಥಳದಲ್ಲೇ ನಿಂತು ತೆರವು ಮಾಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ