ಆ್ಯಪ್ನಗರ

ರಾಜಕಾಲುವೆಯಲ್ಲಿ ಕಸ: 15 ವಾಹನಗಳ ಜಪ್ತಿ

ಬಿಬಿಎಂಪಿ ಅಧಿಕಾರಿಗಳು ಮತ್ತು ಮಾರ್ಷಲ್‌ಗಳ ತಂಡವು ನಗರದಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ರಾಜಕಾಲುವೆಗಳಲ್ಲಿ ಅಕ್ರಮವಾಗಿ ಕಸ ಸುರಿಯುತ್ತಿದ್ದ 15 ವಾಹನಗಳನ್ನು ಜಪ್ತಿ ಮಾಡಿ, ತಲಾ 3 ಲಕ್ಷ ರೂ. ದಂಡ ವಿಧಿಸಿದೆ.

Vijaya Karnataka 25 Oct 2018, 10:45 am
ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಮತ್ತು ಮಾರ್ಷಲ್‌ಗಳ ತಂಡವು ನಗರದಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ರಾಜಕಾಲುವೆಗಳಲ್ಲಿ ಅಕ್ರಮವಾಗಿ ಕಸ ಸುರಿಯುತ್ತಿದ್ದ 15 ವಾಹನಗಳನ್ನು ಜಪ್ತಿ ಮಾಡಿ, ತಲಾ 3 ಲಕ್ಷ ರೂ. ದಂಡ ವಿಧಿಸಿದೆ.
Vijaya Karnataka Web rajakaluve garbage


ಪಾಲಿಕೆಯು ಜಿಲ್ಲಾಡಳಿತದ ಸಹಯೋಗದಲ್ಲಿ ಸದ್ಯದಲ್ಲೇ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲು ನಿರ್ಧರಿಸಿದೆ. ಇದಕ್ಕೆ ಮೊದಲೇ ವಿಶೇಷ ಕಾರ್ಯಾಚರಣೆ ಶುರು ಮಾಡಿರುವ ಅಧಿಕಾರಿಗಳು ರಾಜಕಾಲುವೆಗಳಲ್ಲಿ ಅಕ್ರಮವಾಗಿ ಕಸ ಸುರಿಯುತ್ತಿರುವ ಸಗಟು ಉತ್ಪಾದಕರಿಗೆ ಬಿಸಿ ಮುಟ್ಟಿಸುತ್ತಿದೆ.

ಬಿಬಿಎಂಪಿಯ ಜಂಟಿ ಆಯುಕ್ತ (ಘನತ್ಯಾಜ್ಯ ವಿಭಾಗ) ಸರ್ಫರಾಜ್‌ಖಾನ್‌ ನೇತೃತ್ವದ ತಂಡವು ಜಯನಗರ, ಎಚ್‌ಎಸ್‌ಆರ್‌ ಲೇಔಟ್‌, ಇಂದಿರಾನಗರ ಮತ್ತು ಕೋರಮಂಗಲದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿತು. ಈ ವೇಳೆ ಕಾಲುವೆಗಳಲ್ಲಿ ಕಸ ಸುರಿಯುತ್ತಿದ್ದ 15 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

''ರಾಜಕಾಲುವೆಗಳಲ್ಲಿ ತ್ಯಾಜ್ಯ ಸುರಿಯುತ್ತಿರುವುದಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳಿಂದ ಸಾಕಷ್ಟು ದೂರುಗಳು ಬಂದಿದ್ದವು. ಹೀಗಾಗಿ, ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ತ್ಯಾಜ್ಯದ ಮಾದರಿಯನ್ನು ಸಂಗ್ರಹಿಸಿದರು. ಬಳಿಕ ಅಪಾರ್ಟ್‌ಮೆಂಟ್‌ ನಿವಾಸಿಗಳು, ಹೋಟೆಲ್‌ಗಳು ಮತ್ತು ಇತರೆ ವಾಣಿಜ್ಯ ಮಳಿಗೆಗಳ ಮಾಲೀಕರ ಮನವೊಲಿಸಲಾಗಿತ್ತು. ಆದರೂ, ಕಸ ಸುರಿಯುವುದನ್ನು ನಿಲ್ಲಿಸಿರಲಿಲ್ಲ. ರಾತ್ರಿ ವೇಳೆ ಅಕ್ರಮವಾಗಿ ರಾಜಕಾಲುವೆಯಲ್ಲಿ ಕಸ ಹಾಕಲಾಗುತ್ತಿತ್ತು. ಮಾರ್ಷಲ್‌ಗಳು ರಾತ್ರಿ ವೇಳೆ ಕಾರ್ಯಾಚರಣೆ ಕೈಗೊಂಡು 15 ವಾಹನಗಳನ್ನು ಜಪ್ತಿ ಮಾಡಿದರು. ಅಲ್ಲದೇ ತಲಾ 3 ಲಕ್ಷ ರೂ. ದಂಡ ವಿಧಿಸಿ, ಎಫ್‌ಐಆರ್‌ ದಾಖಲಿಸಲಾಗಿದೆ,'' ಎಂದು ಸರ್ಫರಾಜ್‌ ಖಾನ್‌ ತಿಳಿಸಿದರು.

ರಾಜಕಾಲುವೆಗಳಲ್ಲಿ ಕಸ ಸುರಿಯುವವರ ಮೇಲೆ ಹದ್ದಿನ ಕಣ್ಣಿಡಲು ಪಾಲಿಕೆ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ತಪಾಸಣಾ ಕಾರ್ಯಾಚರಣೆಯನ್ನು ಮುಂದುವರಿಸಲಿದೆ. ರಾಜಕಾಲುವೆ ಮತ್ತು ಪಾಲಿಕೆಗೆ ಸೇರಿದ ಜಾಗಗಳಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯುವ ಟ್ರಕ್‌ಗಳಿಗೆ 50 ಸಾವಿರ ರೂ., ಟ್ರ್ಯಾಕ್ಟರ್‌ಗಳಿಗೆ 25 ಸಾವಿರ ರೂ., ಆಟೊ ಟಿಪ್ಪರ್‌ಗಳಿಗೆ ತಲಾ 10 ಸಾವಿರ ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ