ಆ್ಯಪ್ನಗರ

ಹಲ್ಲೆಗೂ ಜಗ್ಗದೆ ಸರ ಕಿತ್ತ ಕಳ್ಳರ ಪೋಟೊ ಸೆರೆ ಹಿಡಿದ ಮಹಿಳೆ

ಪಲ್ಸರ್‌ ಬೈಕ್‌ನಲ್ಲಿ ಬಂದ ಕಳ್ಳರು ಹಾಡಹಗಲಲ್ಲೇ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಕದ್ದು ಪರಾರಿಯಾದ ಘಟನೆ ರಾಜಾನುಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಚಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

Vijaya Karnataka Web 6 Jul 2018, 10:26 am
ಯಲಹಂಕ: ಪಲ್ಸರ್‌ ಬೈಕ್‌ನಲ್ಲಿ ಬಂದ ಕಳ್ಳರು ಹಾಡಹಗಲಲ್ಲೇ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಕದ್ದು ಪರಾರಿಯಾದ ಘಟನೆ ರಾಜಾನುಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಚಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
Vijaya Karnataka Web photo


ಹಲ್ಲೆ ನಡೆಸಿದರೂ ಅಂಜದೆ ಮಹಿಳೆ ಕಳ್ಳರ ಫೋಟೊವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದು, ಪೊಲೀಸರು ಚೋರರಿಗಾಗಿ ಶೋಧ ನಡೆಸಿದ್ದಾರೆ. ಚಲ್ಲಹಳ್ಳಿ ಗ್ರಾಮದ ಚಲುವರಾಜು ಅವರ ಪತ್ನಿ ಮೀನಾ (25) ಅವರ 45 ಗ್ರಾಮ್‌ ತೂಕದ ಮಾಂಗಲ್ಯ ಮತ್ತು ಸರವನ್ನು ಲೂಟಿ ಮಾಡಲಾಗಿದೆ. ಗುರುವಾರ ಮಧ್ಯಾಹ್ನ 2ಗಂಟೆ ಸಮಯದಲ್ಲಿ ಮೀನಾ ಅವರು ತೋಟದಿಂದ ಹುಲ್ಲು ಹೊತ್ತುಕೊಂಡು ಮನೆಯತ್ತ ಬರುತ್ತಿದ್ದಾಗ ಪಲ್ಸರ್‌ ಬೈಕ್‌ನಲ್ಲಿ ಇಬ್ಬರು ಬಂದು ಸಮೀಪಿಸಿದ್ದಾರೆ. ಹಿಂಬದಿಯಲ್ಲಿದ್ದವ ಬೈಕ್‌ನಿಂದ ಇಳಿದು ಟವಲ್‌ನಿಂದ ಕತ್ತಿಗೆ ಸುತ್ತಿ ಬಿಗಿಯಾಗಿ ಹಿಡಿದು ಕತ್ತಿನಲ್ಲಿದ್ದ ಸರವನ್ನು ಕದಿಯಲು ಮುಂದಾಗಿದ್ದಾನೆ. ಈ ವೇಳೆ ಕೂಗಿಕೊಂಡಾಗ ಮೀನಾರ ಹೊಟ್ಟೆಗೆ ಏಳೆಂಟು ಭಾರಿ ಒದ್ದಿದ್ದಾನೆ. ಚಾಕು ಹಾಕಿ ಸಾಯಿಸುವುದಾಗಿ ಬೆದರಿಸಿದ್ದಾನೆ. ಮೀನಾ ಅವರು ನೋವಿನಿಂದ ಕೆಳಕ್ಕೆ ಬಿದ್ದಾಗ ಮತ್ತೊಬ್ಬ ಬಂದು ಸರವನ್ನು ಕಿತ್ತುಕೊಂಡಿದ್ದಾನೆ. ಸರ ಕೈಗೆ ಸಿಕ್ಕಿದ್ದರಿಂದ ಬೈಕ್‌ ಹತ್ತಿ ಪರಾರಿಯಾಗಿದ್ದಾರೆ. ಹಲ್ಲೆಯ ಆಘಾತದ ನಡುವೆಯೂ ಮೀನಾ ಅವರು, ಕಳ್ಳರು ಬೈಕ್‌ನಲ್ಲಿ ಹೋಗುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾದ ಮಹಿಳೆ ರಾಜಾನುಕುಂಟೆಯ ಆರ್‌.ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್‌ನ ಹಿಂಬದಿ ನಂಬರ್‌ಪ್ಲೇಟ್‌ ಖಾಲಿ ಇತ್ತು ಎಂದು ಸರ ಕಳೆದುಕೊಂಡ ಮಹಿಳೆ ತಿಳಿಸಿದ್ದಾರೆ.
ವೃತ್ತ ನಿರೀಕ್ಷ ಕ ಸಿದ್ಧರಾಜು, ಡಿವೈಎಸ್‌ಪಿ ಮೋಹನ್‌ಕುಮಾರ್‌, ರಾಜಾನುಕುಂಟೆ ಸಬ್‌ ಇನ್ಸ್‌ಪೆಕ್ಟರ್‌ ಮಧುಕರ್‌ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವೃತ್ತ ನಿರೀಕ್ಷ ಕ ಸಿದ್ಧರಾಜು ‘‘ಮೊಬೈಲ್‌ನಲ್ಲಿ ಸೆರೆ ಹಿಡಿದ ಫೋಟೊದಲ್ಲಿ ಬೈಕ್‌ ಸವಾರರ ಒಬ್ಬನ ಅರ್ಧ ಮುಖ ಕಾಣಿಸುತ್ತದೆ. ಘಟನೆ ನಡೆದ ಪ್ರದೇಶದ ಆಸುಪಾಸಿನಲ್ಲಿ ಲಭ್ಯವಿರುವ ಸಿಸಿ ಕ್ಯಾಮರಾವನ್ನು ವಶಕ್ಕೆ ಪಡೆಯಲಾಗಿದೆ. ಶೀಘ್ರ ಕಳ್ಳರನ್ನು ಬಂಧಿಸುತ್ತೇವೆ,’’ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ