ಆ್ಯಪ್ನಗರ

ಇಬ್ಬರು ಮಕ್ಕಳ ಕಳ್ಳಿಯರಿಗೆ ಎರಡು ವರ್ಷ ಜೈಲು

ಮಕ್ಕಳ ಅಪಹರಣ ಪ್ರಕರಣದ ಇಬ್ಬರು ಮಹಿಳಾ ಆರೋಪಿಗಳಿಗೆ ನಗರದ ಜೆಎಂಎಫ್‌ಸಿ ನ್ಯಾಯಾಲಯ ಎರಡು ವರ್ಷ ಕಾರಗೃಹ ಶಿಕ್ಷೆ, ತಲಾ 3 ಸಾವಿರ ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.

Vijaya Karnataka Web 18 Mar 2016, 2:00 am
ಹರಿಹರ: ಮಕ್ಕಳ ಅಪಹರಣ ಪ್ರಕರಣದ ಇಬ್ಬರು ಮಹಿಳಾ ಆರೋಪಿಗಳಿಗೆ ನಗರದ ಜೆಎಂಎಫ್‌ಸಿ ನ್ಯಾಯಾಲಯ ಎರಡು ವರ್ಷ ಕಾರಗೃಹ ಶಿಕ್ಷೆ, ತಲಾ 3 ಸಾವಿರ ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.
Vijaya Karnataka Web
ಇಬ್ಬರು ಮಕ್ಕಳ ಕಳ್ಳಿಯರಿಗೆ ಎರಡು ವರ್ಷ ಜೈಲು


ಹುಬ್ಬಳ್ಳಿಯ ಗೂಡ್ಸ್‌ಶೆಡ್ ಏರಿಯಾ ಮೂಲ ಹಾಲಿ ರಾಣೆಬೆನ್ನೂರು ಚೌಡಮ್ಮದೇವಿ ದೇವಸ್ಥಾನ ಸಮೀಪದ ನಿವಾಸಿ ದುರುಗಮ್ಮ ಕೋಂ ಶಿವಾನಂದ ಹಾಗೂ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಇಳಕಲ್ಲು ಗ್ರಾಮ ವಾಸಿ ಲಕ್ಷ್ಮಿ ಕೋಂ ಮಾರಪ್ಪ ಶಿಕ್ಷೆಗೊಳಗಾದ ಆರೋಪಿತರು.

ವಿವರ:
ಕಳೆದ ವರ್ಷ ಏ.25ರಂದು ನಗರದ ಹೊರವಲಯದ ಬೈಪಾಸ್ ಬಳಿಯ ನಾಕ್‌ಔಟ್ ಬಾರ್ ಪಕ್ಕದ ನಿವೇಶನದ ಟೆಂಟ್ ವಾಸಿ ಗಿಡಮೂಲಿಕೆ ಔಷಧ ವ್ಯಾಪಾರಿ ಮಾನ್‌ಸಿಂಗ್‌ರ 12 ವರ್ಷದ ಪುತ್ರ ಪ್ರಕಾಶ್ ಹಾಗೂ 10 ವರ್ಷದ ಪುತ್ರಿ ಚಿನ್ನು ಕಾಣೆಯಾಗಿದ್ದರು.

ಅಂದು ಬೆಳಗ್ಗೆ ಟೆಂಟ್ ಬಳಿ ಆಟವಾಡುತ್ತಿದ್ದ ಈ ಇಬ್ಬರು ಮಕ್ಕಳು ಕಾಣೆಯಾಗಿದ್ದರು. ಸುತ್ತಲಿನ ಗ್ರಾಮಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ನಂತರ ಕಳೆದ ಮೇ 19ರಂದು ಮಾನ್‌ಸಿಂಗ್ ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಪಿಸಿ ಕಲಂ 363ಎ ಮತ್ತು 34ರಡಿ ದೂರು ದಾಖಲಿಸಲಾಗಿತ್ತು.

ಈ ಇಬ್ಬರು ಮಹಿಳೆಯರು ಈ ಮಕ್ಕಳನ್ನು ಆಂಧ್ರದ ತೋರಣಗಲ್‌ನಲ್ಲಿ ಭಿಕ್ಷಾಟನೆಗೆ ಹಚ್ಚಿದ್ದರು. ಸ್ವಲ್ಪ ದಿನಗಳ ನಂತರ ಅಪಹರಣಕ್ಕೊಳಗಾದ ಅಣ್ಣ, ತಂಗಿ ಪೈಕಿ ಪ್ರಕಾಶ್ ತಪ್ಪಿಸಿಕೊಂಡು ಹರಿಹರದ ಕುಟುಂಬ ಸೇರಿದ.

ನಂತರ ಪ್ರಕಾಶ್ ನೀಡಿದ ಮಾಹಿತಿ ಆಧರಿಸಿ ಗ್ರಾಮಾಂತರ ಠಾಣೆ ಪಿಎಸ್‌ಐ ಸುನೀಲ್ ಕುಮಾರ್ ನೇತತ್ವದ ತಂಡ ತೋರಣಗಲ್‌ಗೆ ತೆರಳಿ ಲಕ್ಷ್ಮಿಯನ್ನು ವಶಕ್ಕೆ ಪಡೆಯಿತು.
ಆಕೆ ನೀಡಿದ ಮಾಹಿತಿ ಆಧರಿಸಿ ಆಂಧ್ರದ ಗುಂತಕಲ್, ವಿಶಾಖಪಟ್ಟಣ, ಕಡಪ, ರಾಜ್ಯದ ಹೊಸಪೇಟೆ ಹಾಗೂ ಇತರೆಡೆ ಇನ್ನೊಬ್ಬ ಅಪಾದಿತೆ ದುರುಗಮ್ಮ , ಅಪಹರಣಕ್ಕೊಳಗಾದ ಇನ್ನೊಂದು ಮಗು ಚಿನ್ನುಗಾಗಿ ಶೋಧಕಾರ್ಯ ನಡೆಯಿತು.

ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚ್ಯಾರಕ್ಕೆ ಯತ್ನ ಪ್ರಕರಣವೊಂದು ಹೊಸಪೇಟೆ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಬಳಿ ಇದ್ದ ಫೋಟೋ ಪರಿಶೀಲಿಸಿದಾಗ ಚಿನ್ನು ಹಾಗೂ ಅಪಾದಿತೆ ದುರುಗಮ್ಮ ಫೋಟೋದಲ್ಲಿದ್ದರು. ನಂತರ ರಾಣೆಬೆನ್ನೂರಿಗೆ ತೆರಳಿದ ಪೊಲೀಸರು ಆಪಾದಿತೆ ದುರುಗಮ್ಮ ಹಾಗೂ ಮಗು ವಶಕ್ಕೆ ಪಡೆದು, ಚಿನ್ನುಳನ್ನು ಪೋಷಕರ ವಶಕ್ಕೆ ಒಪ್ಪಿಸಿದರು.

ಸುಧೀರ್ಘ ವಿಚಾರಣೆ ನಡೆಸಿದ ನಗರದ ಜೆಎಂಎಫ್‌ಸಿ ನ್ಯಾಯಾಧೀಶ ಸಂಜಯ್ ಪಿ.ಗುಡಗುಡಿ ಅಪರಾಧ ಸಾಬೀತಾಗಿದ್ದರಿಂದ ಇಬ್ಬರೂ ಆರೋಪಿಗಳಿಗೆ ಎರಡು ವರ್ಷಗಳ ಜೈಲು ಶಿಕ್ಷೆ , ತಲಾ 3 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಎಪಿಪಿ ಶಂಷೇರ್ ಅಲಿಖಾನ್ ಸರಕಾರದ ಪರ ವಾದ ಮಂಡಿಸಿದ್ದರು. ಗ್ರಾಮಾಂತರ ಪಿಎಸ್‌ಐ ಸುನೀಲ್ ಕುಮಾರ್ ಹುಲ್ಮನಿ ಚಾರ್ಜ್‌ಷೀಟ್ ಸಲ್ಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ