ಆ್ಯಪ್ನಗರ

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಶುಕ್ರವಾರ ನಗರದಲ್ಲಿ ವೈದ್ಯರು, ಮೆಡಿಕಲ್‌, ನರ್ಸಿಂಗ್‌ ವಿದ್ಯಾರ್ಥಿಗಳು, ಶುಶ್ರೂಷಕರು, ಔಷಧ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.

ವಿಕ ಸುದ್ದಿಲೋಕ 14 Jan 2017, 2:16 pm
ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಶುಕ್ರವಾರ ನಗರದಲ್ಲಿ ವೈದ್ಯರು, ಮೆಡಿಕಲ್‌, ನರ್ಸಿಂಗ್‌ ವಿದ್ಯಾರ್ಥಿಗಳು, ಶುಶ್ರೂಷಕರು, ಔಷಧ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.
Vijaya Karnataka Web
ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ


ಜಿಲ್ಲಾಸ್ಪತ್ರೆಯಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ಜಯದೇವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಆ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ನಂತರ ಜಿಲ್ಲಾಸ್ಪತ್ರೆ ಬಳಿ ಕೊನೆ ಗೊಳಿಸಿದರು.

ಇತ್ತೀಚೆಗೆ ಜಿಲ್ಲಾಸ್ಪತ್ರೆಯಲ್ಲಿ ಮಗು ಮೃತ ಪಟ್ಟ ಘಟನೆಗೆ ಸಂಬಂಧಿಕರು ಮೂವರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳಾ ವೈದ್ಯೆಯನ್ನೂ ಥಳಿಸಿದ್ದಾರೆ. ಘಟನೆ ಕುರಿತಂತೆ ಮೃತ ಮಗುವಿನ ತಂದೆ ಮಹಾಂತೇಶ್‌, ತಾತ ಬಸವರಾಜಪ್ಪ ಎಂಬವರನ್ನು ಬಂಧಿಸಲಾಗಿದೆ. ಹಲ್ಲೆ ನಡೆಸಿದ ಎಲ್ಲ ಆರೋಪಿಗಳನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದರು.

ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಇರುವ ವ್ಯವಸ್ಥೆಯಲ್ಲೇ ವೈದ್ಯರು ಹಗಲಿರುಳು ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಾಣ ಉಳಿಸುವುದು ವೈದ್ಯರ ಕೆಲಸ, ಪರಿಸ್ಥಿತಿ ಕೈ ಮೀರಿದಾಗ ಆಸ್ಪತ್ರೆಗೆ ಬಂದರೆ ಏನು ಮಾಡಲು ಸಾಧ್ಯ. ಇಂತಹ ವೇಳೆ ತಪ್ಪು ಇಲ್ಲದಿದ್ದರೂ ನೈತಿಕ ಸ್ಥೈರ್ಯ ಕುಂದಿಸಲಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಖಂಡಿಸಿದರು.

ವೈದ್ಯರು ಭಯದಲ್ಲೇ ಕೆಲಸ ಮಾಡಬೇಕಾಗಿದೆ. ಹಲ್ಲೆಕೋರರಿಗೆ ಕಠಿಣ ಶಿಕ್ಷೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಸರಕಾರ ತಕ್ಷ ಣ 2009ರ ಕಾಯಿದೆಗೆ ತಿದ್ದುಪಡಿ ತಂದು, ಜೀವಾವಧಿ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಐಎಂಎ, ಜಿಲ್ಲಾ ಖಾಸಗಿ ಆಸ್ಪತ್ರೆಗಳ ಸಂಘ, ಕದಳಿ ಮಹಿಳಾ ವೇದಿಕೆ, ಜಿಲ್ಲಾ ಮಕ್ಕಳ ಘಟಕ, ಜಿಲ್ಲಾ ನರ್ಸಿಂಗ್‌ ಹೋಮ್‌ ಸಂಘ, ಜಿಲ್ಲಾ ಶುಶ್ರೂಷಕರ ಸಂಘ ಹಾಗೂ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಬೆಂಬಲ ನೀಡಿದ್ದವು. ಡಾ.ನರೇಂದ್ರ, ಡಾ.ಸುನೀಲ್‌ ಕುಮಾರ್‌, ಡಾ.ಶಿವಲಿಂಗಪ್ಪ, ಡಾ.ರವಿ, ಡಾ.ರವೀಂದ್ರ ಬಣಕಾರ್‌, ಡಾ.ಬ್ಯಾಡಗಿ, ಡಾ.ಕಡ್ಲಿ, ಡಾ.ಸಂಗಮೇಶ, ಡಾ.ಉಪಾಸೆ, ಡಾ.ಶ್ರೀಶೈಲ, ಡಾ.ಶಾಲಿನಿ, ಡಾ.ಕಾರ್ತಿಕ್‌, ಡಾ.ಹರ್ಷ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ