ಆ್ಯಪ್ನಗರ

ಜಾತಿ ಲೆಕ್ಕದಲ್ಲಿ ಮುಸ್ಲಿಮರನ್ನ ಮರೆತ ಕಾಂಗ್ರೆಸ್‌: ಈಶ್ವರಪ್ಪ

ಜಾತಿ ಆಧಾರದ ಮೇಲೆ ಸ್ಥಾನಮಾನ ನೀಡುವ ಕಾಂಗ್ರೆಸ್‌ ಮುಸ್ಲಿಂ ಸಮಾಜವನ್ನು ಏಕೆ ಮರೆತಿದೆ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ರಾಜ್ಯ ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿದರು.

ವಿಕ ಸುದ್ದಿಲೋಕ 3 Jun 2017, 9:57 pm
ಹರಿಹರ : ಜಾತಿ ಆಧಾರದ ಮೇಲೆ ಸ್ಥಾನಮಾನ ನೀಡುವ ಕಾಂಗ್ರೆಸ್‌ ಮುಸ್ಲಿಂ ಸಮಾಜವನ್ನು ಏಕೆ ಮರೆತಿದೆ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ರಾಜ್ಯ ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿದರು.
Vijaya Karnataka Web
ಜಾತಿ ಲೆಕ್ಕದಲ್ಲಿ ಮುಸ್ಲಿಮರನ್ನ ಮರೆತ ಕಾಂಗ್ರೆಸ್‌: ಈಶ್ವರಪ್ಪ


ಇಲ್ಲಿನ ಖಾಸಗಿ ಕಾರ್ಯಕ್ರಮವೊಂದಕ್ಕೆ ಗುರುವಾರ ಆಗಮಿಸಿದ ಅವರು ಹರಿಹರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಸ್ಲಿಂ ಸಮುದಾಯದ ಅಭಿವೃದ್ಧಿ ಕಾಂಗ್ರೆಸ್‌ ಪಕ್ಷ ದಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸುವ ಆ ಪಕ್ಷ ದ ಮುಖಂಡರಿಗೆ ಕೆಪಿಸಿಸಿ ಸ್ಥಾನಮಾನ ನೀಡುವಾಗ ಮುಸ್ಲಿಂ ಮುಖಂಡರು ನೆನಪಿಗೆ ಬರಲಿಲ್ಲವೇ ಎಂದರು.

ಬ್ರಾಹ್ಮಣ, ದಲಿತ, ಲಿಂಗಾಯಿತ, ಒಕ್ಕಲಿಗ ಸಮುದಾಯದವರಿಗೆ ಕೆಪಿಸಿಸಿಯಲ್ಲಿ ಮಾನ್ಯತೆ ನೀಡಲಾಗಿದೆ. ಆದರೆ ಆ ಪಕ್ಷ ದ ಕಟ್ಟಾ ಬೆಂಬಲಿಗರೆಂದು ಗುರುತಿಸಿಕೊಳ್ಳುವ ಮುಸ್ಲಿಂ ಮುಖಂಡರಿಗೆ ಸ್ಥಾನ ನೀಡದಿರುವುದು ಆ ಸಮಾಜಕ್ಕಾದ ಅನ್ಯಾಯವಾಗಿದೆ ಎಂದರು.

ಮುಸ್ಲಿಂರನ್ನು ಕೇವಲ ಓಟ್‌ ಬ್ಯಾಂಕ್‌ ಆಗಿ ಪರಿಗಣಿಸಿದೆ ಎಂಬ ನಮ್ಮ ಆರೋಪ ಇಲ್ಲಿ ನಿಜ ಆಗಿದೆ. ಕಾಂಗ್ರೆಸ್‌ನ ನಿಜ ಬಣ್ಣ ಇಲ್ಲಿ ಬಯಲಾಗಿದೆ. ಮುಸ್ಲಿಂರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಈ ಕಾರಣದಿಂದ ಬಿಜೆಪಿ ಈ ಪ್ರಶ್ನೆ ಎತ್ತಿದೆ ಎಂದರು.

ಬಿಜೆಪಿ ಮುಸ್ಲಿಮರನ್ನು ಎಂದೂ ಮತ ಬ್ಯಾಂಕ್‌ ಆಗಿ ನಡೆಸಿಕೊಂಡಿಲ್ಲ. ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಅಲ್ಪಸಂಖ್ಯಾತರ ಅಭಿವೃದ್ಧಿಗೆ ದಾಖಲೆಯ ರೂಪದಲ್ಲಿ ಅನುದಾನ ನೀಡಿತ್ತು ಎಂದರು.

ಬ್ರಿಗೇಡ್‌ನಿಂದ ದೂರ: ಬ್ರಿಗೇಡ್‌ನಿಂದ ದೂರ ಉಳಿಯಿರಿ ಎಂದು ಬಿಜೆಪಿ ಕೇಂದ್ರ ಮುಖಂಡರು ತಮಗೆ ಸಲಹೆ ನೀಡಿದ್ದಾರೆ. ಹಿಂದುಳಿದ ವರ್ಗ ಮೋರ್ಚಾ ಉಸ್ತುವಾರಿ ನೀಡಲಾಗಿದೆ. ಆ ನಿಮಿತ್ತ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ದೂರ ಉಳಿದಿರುವುದಾಗಿ ಅವರು ಪ್ರಶ್ನೆಗೆ ಉತ್ತರಿಸಿದರು.

ಗೋ ಹತ್ಯೆ ನಿಷೇಧ ಕಾಯ್ದೆ ವಿರೋಧಿಸುವವರು ಗಾಂಧಿ ತತ್ವವನ್ನೆ ಖಂಡಿಸಿದಂತಾಗುತ್ತದೆ. 70 ವರ್ಷಗಳಿಂದ ನೆನೆಗುದಿಯಲ್ಲಿದ್ದ ಕಾಯ್ದೆಗೆ ಮೋದಿ ಸರಕಾರ ಚಾಲನೆ ನೀಡಿದೆ. ದೇಶದ ಹಲವು ಮುಸ್ಲಿಂ ಸಂಘಟನೆಗಳು ನಿಷೇಧಕ್ಕೆ ಬೆಂಬಲ ನೀಡಿದ್ದಾರೆಂದು ಹೇಳಿದರು.

ಬಿಜೆಪಿ ಕಡೆಗೆ ಒಲವು : ರಾಜ್ಯ ಕಾಂಗ್ರೆಸ್‌ ಸರಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಮೋದಿ ಸರಕಾರದ ಜನಪರ ಆಡಳಿತ್ನ ಮೆಚ್ಚಿ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ತರಲು ಜನತೆ ನಿರ್ಣಯಿಸಿದ್ದಾರೆಂದು ಹೇಳಿದರು.

ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌, ಮಾಜಿ ಎಂಎಲ್ಸಿ ಡಾ.ಎ.ಎಚ್‌.ಶಿವಯೋಗಿಸ್ವಾಮಿ, ಮಾಜಿ ಶಾಸಕ ಬಸವರಾಜ ನಾಯ್ಕ, ಮುಖಂಡರಾದ ಎಚ್‌.ಎಸ್‌.ನಾಗರಾಜ್‌, ಎಸ್‌.ಎಂ.ವೀರೇಶ್‌, ಬಿ.ಎಂ.ಸತೀಶ್‌, ಪರಶುರಾಮ ಕಾಟ್ವೆ, ಬಿ.ರಾಮಚಂದ್ರಪ್ಪ, ಎಚ್‌.ಸಿ.ಕೀರ್ತಿಕುಮಾರ್‌, ಬಾತಿ ಚಂದ್ರಶೇಖರ್‌, ಡಿ.ವೈ.ಇಂದಿರಾ, ವಾಸು ಚಂದಾಪೂರ್‌, ಶಿವಪ್ರಕಾಶ್‌ ಶಾಸ್ತ್ರಿ, ಮಂಜನಾಯ್ಕ, ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ