ಆ್ಯಪ್ನಗರ

​ ಬಾಣಸಿಗರ ತಾಳ್ಮೆ ಪರೀಕ್ಷೆ !

ಜಿಲ್ಲೆಯ ಬಿಸಿಎಂ ಹಾಸ್ಟೆಲ್‌ಗಳ ಅಡುಗೆಯವರ ಹುದ್ದೆಗಳ ನೇರ ನೇಮಕಾತಿಗೆ ನಡೆಯಬೇಕಿದ್ದ ಪ್ರಾಯೋಗಿಕ ಪರೀಕ್ಷೆ ಕೊನೆ ಕ್ಷಣದಲ್ಲಿ ರದ್ದಾಗಿದ್ದರಿಂದ ನೂರಾರು ಅಭ್ಯರ್ಥಿಗಳು ಬುಧವಾರ ಪರದಾಡಿದರು.

ವಿಕ ಸುದ್ದಿಲೋಕ 29 Jun 2017, 5:30 am
ಶಿವರಾಜ್‌ ಬೀದಿಮನಿ ದಾವಣಗೆರೆ : ಜಿಲ್ಲೆಯ ಬಿಸಿಎಂ ಹಾಸ್ಟೆಲ್‌ಗಳ ಅಡುಗೆಯವರ ಹುದ್ದೆಗಳ ನೇರ ನೇಮಕಾತಿಗೆ ನಡೆಯಬೇಕಿದ್ದ ಪ್ರಾಯೋಗಿಕ ಪರೀಕ್ಷೆ ಕೊನೆ ಕ್ಷಣದಲ್ಲಿ ರದ್ದಾಗಿದ್ದರಿಂದ ನೂರಾರು ಅಭ್ಯರ್ಥಿಗಳು ಬುಧವಾರ ಪರದಾಡಿದರು.
Vijaya Karnataka Web
​ ಬಾಣಸಿಗರ ತಾಳ್ಮೆ ಪರೀಕ್ಷೆ !

ಪರೀಕ್ಷಾ ಸ್ಥಳವಾದ ನಗರದ ಕುವೆಂಪು ಕನ್ನಡ ಭವನಕ್ಕೆ ಬೆಳಗ್ಗೆ 8.30ರಿಂದಲೇ ಪರೀಕ್ಷಾರ್ಥಿಗಳು ಎಡತಾಕಿದರು. ಕೆಲವರು ಗಂಟೆಗಟ್ಟಲೇ ಕಾದು ಕುಳಿತರು. ಆದರೆ, ಪರೀಕ್ಷಾ ಸ್ಥಳದಲ್ಲಿ ಬಿಸಿಎಂ ಇಲಾಖೆಯ ಯಾವೊಬ್ಬ ಸಿಬ್ಬಂದಿಯೂ ಇರಲಿಲ್ಲ, ಮುಂದೂಡಿದ ಬ್ಯಾನರ್‌ ಸಹ ಹಾಕಿರಲಿಲ್ಲ. ಕಾದು ಕಾದು ಕಂಗೆಟ್ಟು ಬಂದ ದಾರಿಗೆ ಸುಂಕ ಇಲ್ಲದಂತೆ ಉದ್ಯೋಗಾಕಾಂಕ್ಷಿಗಳು ಬರಿಗೈಯಲ್ಲಿ ಮರಳಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ಗಳಲ್ಲಿ ಖಾಲಿಯಿರುವ ಈ ಎರಡು ವಿಭಾಗದ ಹುದ್ದೆಗಳ ನೇರ ನೇಮಕದ ಪ್ರಾಯೋಗಿಕ ಪರೀಕ್ಷೆಯನ್ನು ಜೂ.28, 29ರಂದು ಇಲಾಖೆ ನಿಗದಿ ಪಡಿಸಿತ್ತು. ಆದರೆ, ಪರೀಕ್ಷೆಗಳನ್ನು ರಾಜ್ಯದಾದ್ಯಂತ ಏಕಕಾಲಕ್ಕೆ ನಡೆಸುವ ಉದ್ದೇಶದಿಂದ ಜುಲೈ 3 ಮತ್ತು 4ಕ್ಕೆ ಮುಂದೂಡಿದೆ. ಈ ಬಗ್ಗೆ ಅಭ್ಯರ್ಥಿಗಳಿಗೆ ಸೂಕ್ತ ಮಾಹಿತಿ ನೀಡದ ಕಾರಣ ಈ ದಂಡಯಾತ್ರೆ ಎದುರಿಸುವಂತಾಯಿತು.
ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಜಿಲ್ಲೆಯ ಚನ್ನಗಿರಿ, ಹರಿಹರ, ಹೊನ್ನಾಳಿ, ಹರಪನಹಳ್ಳಿ ಭಾಗದ ನಾನಾ ಹಳ್ಳಿಗಳಿಂದ ಅಭ್ಯರ್ಥಿಗಳು ಪರೀಕ್ಷೆ ಎದುರಿಸಲು ಬಂದಿದ್ದರು. ಕೆಲವರು ಬೆಳಗ್ಗೆ 8.30ಕ್ಕೆ ಆಗಮಿಸಿದ್ದರು. ಆದರೆ, ಅಲ್ಲಿ ಪರೀಕ್ಷೆ ಮಧ್ಯಾಹ್ನದವರೆಗೆ ನಡೆಯಲಿಲ್ಲ.
ಜು.3, 4ರಂದು ಪರೀಕ್ಷೆ : ನಗರದ ಕುಂದುವಾಡ ರಸ್ತೆಯ ಸಪ್ತಗಿರಿ ಶಾಲೆ ಬಳಿಯ ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಜು.3ರಂದು ಅಡುಗೆಯವರು, ಜು.4ರಂದು ಸಹಾಯಕರ ಹುದ್ದೆಗೆ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಇಲಾಖೆ , http://davanagere.nic.in, ದೂ.ಸಂಖ್ಯೆ : 08192-262973 ಸಂಪರ್ಕಿಸಬೇಕೆಂದು ಇಲಾಖೆ ಜಿಲ್ಲಾಧಿಕಾರಿ ಸೈಯದ್‌ ಮನ್ಸೂರ್‌ ವಿಕಗೆ ತಿಳಿಸಿದರು.
-----------

ಸಹಾಯಕರ ಪ್ರಾಯೋಗಿಕ ಪರೀಕ್ಷೆ ಇದೆ ಎಂದು ಬಂದರೆ ಇಲ್ಲಿ ಯಾವುದೇ ಪರೀಕ್ಷೆಗೆ ಸಿದ್ಧತೆ ಇಲ್ಲದಿರುವುದು ಕಂಡು ನಿರಾಸೆ ಉಂಟಾಯಿತು. ಇಲಾಖೆ ಯವರು ಪರೀಕ್ಷೆ ಮುಂದೂಡಿದ ಮಾಹಿತಿ ನೀಡದ ಕಾರಣ ದೂರದಿಂದ ಇಲ್ಲಿಗೆ ಬಂದು ಪರದಾಡುವಂತಾಯಿತು.
- ಕಾರ್ತೀಕ, ಡಿಸಿಎಂ ಲೇಔಟ್‌, ದಾವಣಗೆರೆ.
-------------
ಬಿಸಿಎಂ ಇಲಾಖೆ ಪರೀಕ್ಷೆ ನಡೆಸುತ್ತದೆಂದು ದಾವಣಗೆರೆಗೆ ಬಂದರೆ ಇಲ್ಲಿ ನಮ್ಮನ್ನು ವಿಚಾರಿಸುವವರೇ ಇಲ್ಲ. ಗಂಟೆಗಟ್ಟಲೇ ಕಾದು ಮರಳಿ ನಿರಾಸೆಯಿಂದ ಹೋಗುವಂತಾಯಿತು.
- ಬಿ.ಎನ್‌.ಗೀರೀಶ್‌, ಅಭ್ಯರ್ಥಿ, ಬುಳ್ಳಾಪುರ, ಹರಿಹರ ತಾಲೂಕು.
---

ಸಾಲು ರಜೆಗಳ ಕಾರಣ ಅಭ್ಯರ್ಥಿ ಗಳಿಗೆ ಅನುಕೂಲವಾಗಲೆಂದು ಅವಧಿ ವಿಸ್ತರಿಸಿ ಪರೀಕ್ಷಾ ದಿನವನ್ನು ಜುಲೈ 3, 4ಕ್ಕೆ ಮುಂದೂಡಲಾಗಿದೆ. ಏಕಕಾಲಕ್ಕೆ ಪರೀಕ್ಷೆ ನಡೆಸುವಂತೆ ಜೂನ್‌ 27ರಂದು ಆದೇಶ ಬಂತು. ಹೀಗಾಗಿ ದೀಢೀರ್‌ ಪರೀಕ್ಷೆ ಮುಂದೂಡಲಾಗಿದೆ. ಈ ಬಗ್ಗೆ ಕೆಲ ಅಭ್ಯರ್ಥಿಗಳಿಗೆ ತಿಳಿಸಲಾಗಿದೆ.
- ಸೈಯದ್‌ ಮನ್ಸೂರ್‌, ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ