ಆ್ಯಪ್ನಗರ

​ಸರಕಾರಿ ಶಾಲೆ ಮಕ್ಕಳಿಗೆ ಇಂಗ್ಲಿಷ್‌ ಸರಾಗ ...!

ಸರಕಾರಿ ಶಾಲೆಗಳ ಮಕ್ಕಳಿಗೆ ಇಂಗ್ಲಿಷ್‌ ಅಂದರೆ ಕಬ್ಬಿಣದ ಕಡಲೆ. ಆದರೆ ಈ ಶಾಲೆಯಲ್ಲಿ ಮಾತ್ರ ಸುಲಿದ ಬಾಳೆಹಣ್ಣು..! ನೀವು ಕನ್ನಡದಲ್ಲಿ ಯಾವುದೇ ಪದ ಹೇಳಿ ಸಾಕು. ಅದನ್ನು ಸರಾಗವಾಗಿ ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಒಪ್ಪಿಸುತ್ತಾರೆ. ಮಕ್ಕಳ ಈ ಸಾಧನೆಗೆ ಶಿಕ್ಷಕರೊಬ್ಬರು ಕಾರಣರಾಗಿದ್ದಾರೆ.

ವಿಕ ಸುದ್ದಿಲೋಕ 5 Sep 2017, 1:14 am
ನಂದೀಶ್‌ ಭದ್ರಾವತಿ ದಾವಣಗೆರೆ : ಸರಕಾರಿ ಶಾಲೆಗಳ ಮಕ್ಕಳಿಗೆ ಇಂಗ್ಲಿಷ್‌ ಅಂದರೆ ಕಬ್ಬಿಣದ ಕಡಲೆ. ಆದರೆ ಈ ಶಾಲೆಯಲ್ಲಿ ಮಾತ್ರ ಸುಲಿದ ಬಾಳೆಹಣ್ಣು..! ನೀವು ಕನ್ನಡದಲ್ಲಿ ಯಾವುದೇ ಪದ ಹೇಳಿ ಸಾಕು. ಅದನ್ನು ಸರಾಗವಾಗಿ ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಒಪ್ಪಿಸುತ್ತಾರೆ. ಮಕ್ಕಳ ಈ ಸಾಧನೆಗೆ ಶಿಕ್ಷಕರೊಬ್ಬರು ಕಾರಣರಾಗಿದ್ದಾರೆ.
Vijaya Karnataka Web
​ಸರಕಾರಿ ಶಾಲೆ ಮಕ್ಕಳಿಗೆ ಇಂಗ್ಲಿಷ್‌ ಸರಾಗ ...!


ಆ ಶಿಕ್ಷಕರ ಹೆಸರು ಪ್ರಕಾಶ್‌ ಕೊಡಗನೂರು. ಕಳೆದ 19 ವರ್ಷದಿಂದ ನರಗನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದಾರೆ. ಮಕ್ಕಳಿಗೆ ಕನ್ನಡ ಬೋಧನೆ ಜತೆಗೆ ಇಂಗ್ಲಿಷ್‌ ಕಲಿಸುತ್ತಿದ್ದಾರೆ. ಎಲ್ಲರಂತೆ ಭಾಷೆ ಹೇಳಿಕೊಡುತ್ತಿಲ್ಲ. ಹೊಸ ಪ್ರಯೋಗ ಬಳಸುತ್ತಿದ್ದಾರೆ. ಮಕ್ಕಳಿಗಾಗಿಯೇ 6 ಪುಸ್ತಕ ಬರೆದಿದ್ದಾರೆ. ಈ ಪುಸ್ತಕಗಳ 175 ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸುತ್ತಿದ್ದಾರೆ.

ಪುಸ್ತಕಗಳು: ಮಕ್ಕಳಿಗಾಗಿ ಕಂಗ್ಲಿಷ್‌ ಪ್ಲೇಯ್ಸ್‌, (2015), ರೋವ್‌ ಪ್ಲೇಯ್ಸ್‌ (2017), ಎ.ಸೀಕ್ರೇಟ್‌ ಬಿ ಹೈಂಡ್‌ದ ಸ್ಯಾಕ್ರಿಫ್ರೈಸ್‌ (2013), ಲಿಟ್ಲ್‌ಪ್ಲೇಯ್ಸ್‌ (2006), 'ಏಟ್ಸ್‌ ಮತ್ತು ನಾನು', 'ಎರಡು ಹಳ್ಳಿಗಳ ನಡುವೆ' (2003) ಈ ಕೃತಿಗಳ ಜತೆಗೆ ಹತ್ತಾರು ಕಿರುನಾಟಕ ಬರೆದಿದ್ದಾರೆ.

ಅಲ್ಲದೇ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಕತೆ ಹೇಳುವ, ಕಥಾಭಿನಯ, ನಾಟಕಾಭಿನಯ, ಪದ್ಯಾಭಿನಯ, ಸಂಭಾಷಣೆ, ಏಕಪಾತ್ರಾಭಿನಯಗಳನ್ನು ಕರಗತಮಾಡಿಸಿದ್ದಾರೆ. ಇನ್ನು ಇಂಗ್ಲಿಷ್‌ ಓದುವ ಸ್ಪರ್ಧೆ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ಚಾಕಚಕ್ಯತೆ: ಶಿಕ್ಷಕ ಪ್ರಕಾಶ್‌ಗೆ ಇದು ಮೊದಮೊದಲು ತುಸು ಕಷ್ಟವೆನಿಸಿದರೂ, ಪಟ್ಟು ಬಿಡಲಿಲ್ಲ. ಕಲಿಸಿದರು. ಮಕ್ಕಳು ಈಗ ನಿರರ್ಗಳವಾಗಿ ಮಾತನಾಡುವ ಜತೆ ಏಕಾಂಕ ನಾಟಕಗಳ ಅಭಿನಯಿಸಬಲ್ಲರು. ಇಲ್ಲಿ ಓದಿದ ಸುಮಾರು ನೂರಕ್ಕಿಂತ ಹೆಚ್ಚು ಮಕ್ಕಳು ಉನ್ನತ ಹುದ್ದೆಯಲ್ಲಿದ್ದಾರೆ. ಒಬ್ಬ ಶಿಕ್ಷಕನ ಸಾಧನೆಗೆ ಮತ್ತೇನು ಬೇಕು ?

ಪ್ರೇರಣೆ: ಸರಕಾರಿ ಶಾಲೆಯಲ್ಲಿಯೇ ಓದಿದ ಈ ಶಿಕ್ಷಕನಿಗೆ ಇಂಗ್ಲಿಷ್‌ ಬರುತ್ತಿರಲಿಲ್ಲ. ಏನಾದರೂ ಮಾಡಿ ಆಂಗ್ಲ ಭಾಷೆ ಕಲಿಯಲೇಬೇಕು. ನನ್ನಂತೆ ಮಕ್ಕಳು ಆಗಬಾರದು ಎಂದು ಕಷ್ಟಪಟ್ಟು ಕಲಿತರು. ಇವರಿಗೆ ಭಾಷಾತಜ್ಞ ರಾದ ಸಾಗರ್‌, ತಾರಕೇಶ್ವರ, ಪ್ರೊ.ಲೋಹಿತಾಶ್ವ, ಆರ್‌.ಜಿ.ಹಳ್ಳಿ ನಾಗರಾಜ್‌, ಡಾ.ಮಲ್ಲಿಕಾರ್ಜುನ್‌ ಪಾಟೀಲ್‌, ಬಿದರಹಳ್ಳಿ ನರಸಿಂಹಮೂರ್ತಿ, ಪ್ರೊ.ಭಿಕ್ಷಾವರ್ತಿ ಮಠ, ನಟರಾಜ್‌ ಹುಳಿಯಾರ್‌, ರಾಜೇಂದ್ರ ಚೆನ್ನಿ ಸಾಥ್‌ ನೀಡಿದರು.

----------

ಮೊದಲು ಸರಕಾರಿ, ಖಾಸಗಿ ಶಾಲೆ ವಿದ್ಯಾರ್ಥಿಗಳ ನಡುವೆ ಇರುವ ಶೈಕ್ಷಣಿಕ ಅಸಮಾನತೆ ಹೋಗಬೇಕು. ಸರಕಾರಿ ಶಾಲೆ ವಿದ್ಯಾರ್ಥಿಗಳು ಯಾವುದರಲ್ಲಿಯೂ ಕಡಿಮೆ ಇಲ್ಲ. ಇದಕ್ಕೆ ಉದಾಹರಣೆ ನಮ್ಮ ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು.

- ಪ್ರಕಾಶ್‌ ಕೊಡಗನೂರು, ಶಿಕ್ಷಕ

---------

ಸಾಹಿತ್ಯಕ್ಕೆ ಹೆಚ್ಚು ಒಲವು : ಶಿಕ್ಷಕ ಪ್ರಕಾಶ್‌ ಕೊಡಗನೂರು ಒಬ್ಬ ಕವಿ. ಹಾಗಾಗಿ ಕಲಿಕೆಯಲ್ಲಿ ಸಾಹಿತ್ಯದ ಒಲವು ಸಹಜವಾಗಿ ಬೆಸೆದಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್‌ ಹೋಬಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 'ದ ಸ್ಕಾಲರ್‌ ಮದರ್‌ ಟಂಗ್‌' ಎಂಬ ಇಂಗ್ಲಿಷ್‌ ನಾಟಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ