ಆ್ಯಪ್ನಗರ

ಇಷ್ಟಲಿಂಗ 33 ಕೋಟಿ ದೇವರ ನೆಲೆ

ಪಂಚಪೀಠಗಳಲ್ಲಿ ಒಂದಾದ ಹಿಮವತ್ಕೇದಾರ ಪೀಠದ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಈ ವರ್ಷದ ರಾಜ್ಯ ಪ್ರವಾಸದ ಮೊದಲ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಸಂಗಮ ಸಮಾರಂಭ ದಾವಣಗೆರೆಯಲ್ಲಿ ಶುಕ್ರವಾರ ಭಕ್ತಿ, ವಿಜೃಂಭಣೆಯಿಂದ ನಡೆಯಿತು.

Vijaya Karnataka 22 Dec 2018, 5:00 am
ದಾವಣಗೆರೆ : ಪಂಚಪೀಠಗಳಲ್ಲಿ ಒಂದಾದ ಹಿಮವತ್ಕೇದಾರ ಪೀಠದ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಈ ವರ್ಷದ ರಾಜ್ಯ ಪ್ರವಾಸದ ಮೊದಲ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಸಂಗಮ ಸಮಾರಂಭ ದಾವಣಗೆರೆಯಲ್ಲಿ ಶುಕ್ರವಾರ ಭಕ್ತಿ, ವಿಜೃಂಭಣೆಯಿಂದ ನಡೆಯಿತು.
Vijaya Karnataka Web 33 crore is gods home
ಇಷ್ಟಲಿಂಗ 33 ಕೋಟಿ ದೇವರ ನೆಲೆ


ನಗರದ ತ್ರಿಶೂಲ್‌ ಕಲಾ ಭವನದಲ್ಲಿ ಪರಂಪರೆ ರಕ್ಷಣಾ ದಿನಾಚರಣೆ ಪ್ರಯುಕ್ತ ಎರಡು ದಿನ ಈ ಕಾರ್ಯಕ್ರಮ ಆಯೋಜಿಸಿದ್ದು, ಮೊದಲ ದಿನದ ಇಷ್ಟಲಿಂಗ ಪೂಜೆ ಶುಕ್ರವಾರ ಬೆಳಗ್ಗೆ ಹೋಮದ ಮೂಲಕ ಆರಂಭವಾಯಿತು. ನೂರಾರು ಭಕ್ತರು ಭಕ್ತಿ ಸಮರ್ಪಿಸಿದರು.

ತದ ನಂತರ 10 ಗಂಟೆಗೆ ಗುರುಗಳ ಇಷ್ಟಲಿಂಗ ಪೂಜೆ ಆರಂಭವಾಗಿ ಸುಮಾರು ಮೂರು ತಾಸಿಗೂ ಹೆಚ್ಚು ಕಾಲ ನಡೆಯಿತು. ವೀರಭದ್ರನನ್ನು ಭಜಿಸುತ್ತಲೇ ಪೂಜೆ ಸಲ್ಲಿಸುವ ವಿಧಾನ ಭಕ್ತರಲ್ಲೂ ಭಕ್ತಿಯ ಪರಾಕಷ್ಟೆ ತಲುಪುವಂತೆ ಮಾಡಿತು. ನೆರೆದಿದ್ದ ಎಲ್ಲ ಭಕ್ತರು ಸಂಗೀತದ ಜತೆ ತಾವು ಕೈಗಳಿಂದ ತಾಳ ಹಾಕುತ್ತಾ ಮಹಾಪೂಜೆಯಲ್ಲಿ ತಲ್ಲೀನರಾಗಿದ್ದರು.

ಶ್ರೀಗಳು ವೀರಭದ್ರನನ್ನು ಭಜಿಸುತ್ತಾ ಆಕರ್ಷಕವಾಗಿ ಪೂಜೆ ನೆರವೇರಿಸಿದರು. ಗಾಯನ ತಂಡ ಇವರ ಪೂಜೆಗೆ ಭಜನೆ, ಭಕ್ತಿಯ ಹಾಡುಗಳು ಗಾಯನದ ಸಾಥ್‌ ನೀಡಿತ್ತು. ಮೊದಲ ಮಂತ್ರಘೋಷದೊಂದಿಗೆ ಆರಂಭವಾದ ಪೂಜೆ ಆರಂಭವಾಯಿತು. ಶ್ರೀಗಳು ಪತ್ರೆ, ಹೂಗಳನ್ನು ವೀರಭದ್ರನಿಗೆ ಸಮರ್ಪಿಸುತ್ತಾ ಸಾಗಿದರು. ಪೂಜೆ ಮುಗಿವ ಹೊತ್ತಿಗೆ ವೀರಭದ್ರನಿಗೆ ಅರ್ಪಿಸಿದ ಪತ್ರೆ ಮತ್ತು ಹೂಗಳು ಕೊನೆಗೆ ಆಕರ್ಷಕ, ಸುಂದರ ಅಲಂಕಾರವಾಗಿ ಭಕ್ತರು ಮತ್ತು ಶಿವನಿಗೆ ಆನಂದ ಆಗುವಂತಿತ್ತು. ಕೊನೆಗೆ ನಾಲ್ಕೈದು ರೀತಿಯಲ್ಲಿ ಆರತಿ ಬೆಳಗಿ, ಢಮರುಗ ಬಾರಿಸಿ, ಶಂಖನಾದ ಹೊರಡಿಸಿ ಪೂಜೆಗೆ ಮಂಗಳ ಹಾಡಿದರು.

ಮಹಾಪೂಜೆ ನಂತರ ಆಶೀರ್ವಚನ ನೀಡಿದ ಹಿಮತ್ಕೇದಾರ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ, ಪರಂಪರೆಯೊಂದಿಗೆ ಬದುಕಿನ ಅನುಭವಗಳಿವೆ. ಹಾಗೆಯೇ ಅಂತರಂಗದ ಮನೋಧರ್ಮ - ಬಹರಂಗ ವಿಕಾಸದ ಹಾದಿಯಿದೆ. ಪರಂಪರೆಯಿಂದ ಬಂದ ನಮ್ಮ ಧರ್ಮ ಪರಧರ್ಮ ಸಹಿಷ್ಣುತೆ ಜತೆ ಸಾಗಬೇಕು. ವೀರಶೈವ - ಲಿಂಗಾಯತರು ಇಂದಿನ ಕಲುಷಿತ ವಾತಾವರಣದಲ್ಲಿ ನಮ್ಮ ಧರ್ಮವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಚರ್ಚಿಸಲು ದಾವಣಗೆರೆಯಲ್ಲ ಈ ಭಾರಿ ಧರ್ಮ ಸಂಗಮ ಸಮಾರಂಭ ಆಯೋಜಿಸಲಾಗಿದೆ. ಮೂವತ್ತು ಜಿಲ್ಲೆಗಳಿಂದ ಭಕ್ತರು ಆಗಮಿಸಲಿದ್ದಾರೆ. ಗಣ್ಯರು, ಚಿಂತಕರು, ನಾನಾ ಮಠದ ಶ್ರೀಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.

33 ಕೋಟಿ ದೇವರು


ಲಿಂಗ ಎಂದರೆ ಎಲ್ಲಿ ಉತ್ಪತ್ತಿ ಆಗುತ್ತದೋ ಅಲ್ಲಿಯೇ ಲೀನ ಆಗುತ್ತದೆ. ಇದು ಆಕಾಶ ಸ್ವರೂಪ, ಇದರ ಕೆಳಗೆ ಭೂಮಿಯಿದೆ. ಈ ಲಿಂಗದಲ್ಲಿ 33 ಕೋಟಿ ದೇವರು ನೆಲೆಸಿದ್ದಾರೆ. ಹಾಗಾಗಿಯೇ ನಿತ್ಯ ನಾವು ಲಿಂಗವನ್ನು ಪೂಜೆ ಮಾಡಬೇಕು. ಲಿಂಗ ಪೂಜೆ ಮಾಡಿದರೆ ವೀರಭದ್ರ ಸೇರಿ ಎಲ್ಲರಿಗೂ ಪೂಜೆ ಸಲ್ಲುತ್ತದೆ ಎಂದರು.

ತೀರ್ಥ ಮತ್ತು ಪ್ರಸಾದಕ್ಕೆ ಅಂತರಂಗ, ಬಹಿರಂಗ ಶುದ್ಧಿ ಮಾಡುವ ಗುಣವಿದೆ. ಜನತೆ ಗದ್ದಲದಲ್ಲಿ ಮುಳುಗಬಾರದು. ಎಲ್ಲರೂ ಭಕ್ತಿ ಮತ್ತು ಧರ್ಮದ ದಾರಿಯಲ್ಲಿ ಸಾಗಬೇಕು. ದೃಢ ನಿಶ್ಚಯ ಮಾಡಿದಾಗ ಏನನ್ನಾದರೂ ಸುಲಭವಾಗಿ ಅನುಷ್ಠಾನಗೊಳಿಸಬಹುದು. ನಮ್ಮ ಧರ್ಮ, ನಮ್ಮ ಪರಂಪರೆ, ನಮ್ಮ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಸತ್ಯ ಸಂಕಲ್ಪ ಎಲ್ಲರದ್ದಾಗಲಿ ಎಂದರು.

ವಜ್ರಕಚಿತ ಚಿನ್ನದ ಕಿರೀಟ:

ಪ್ರಳಯದಲ್ಲಿ ನಮ್ಮ ಚಿನ್ನದ ಕಿರೀಟ ಕೈಗೆ ಸಿಗದಂತಾಯಿತು. ಈಗ ನಮ್ಮ ದೇವಳದ ಅರ್ಚಕರೇ ಮೊದಲು ಮುಂದೆ ಎರಡು, ಒಂದು ತೊಲ ಚಿನ್ನ ನೀಡಿದ್ದಾರೆ. ಕಣ್ವಕುಪ್ಪೆ ಮಠದ ಶ್ರೀಗಳು ಕೂಡ ಒಂದಿಷ್ಟು ಚಿನ್ನ ನೀಡಿದ್ದಾರೆ. ವಜ್ರಕಚಿತ ಚಿನ್ನದ ಕಿರೀಟ ಸಿದ್ಧವಾಗಿದೆ ಎಂದು ತಿಳಿಸಿದರು.

ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಮವತ್ಕೇದಾರದಲ್ಲಿ ನವೆಂಬರ್‌ ತಿಂಗಳಲ್ಲಿ ಪೂಜೆ ಮಂಗಳ ಆಗುತ್ತದೆ. ಆ ನಂತರ ಶ್ರೀಗಳು ದಕ್ಷಿಣದ ಕಡೆ ಪ್ರವಾಸ ಹೊರಡುತ್ತಾರೆ. ಈ ವರ್ಷದ ಮೊದಲ ಪೂಜೆ ಕರ್ನಾಟಕದಲ್ಲಿ ದಾವಣಗೆರೆಯಲ್ಲಿ ನಡೆಯುತ್ತಿರುವುದು ವಿಶೇಷ ಎಂದರು.

ನಾನಾ ಮಠಗಳ ಮಠಾಧೀಶರು ಉಪಸ್ಥಿತರಿದ್ದರು. ಪೂಜಾ ಸೇವಾ ಸಮಿತಿಯ ಕೆ.ಆರ್‌. ಶಿವಕುಮಾರ, ಅಜ್ಜಂಪುರ ಶೆಟ್ರು ಮೃತ್ಯುಂಜಯ, ಕೆ.ಎಂ. ಸುರೇಶ್‌, ನಾಗಭೂಷಣ್‌, ಚಂದ್ರಶೇಖರಯ್ಯ ಇತರರು ಇದ್ದರು.

----------

ಬಾಕ್ಸ್‌...

ನಾನಾ ಕಡೆಯಿಂದ ಭಕ್ತರು


ರಾಜ್ಯ ಅಷ್ಟೇ ಅಲ್ಲ ಮಹಾರಾಷ್ಟ್ರ ಸೇರಿ ರಾಜ್ಯದ ನಾನಾ ಕಡೆಯಿಂದ ಭಕ್ತರು ಆಗಮಿಸಿದ್ದರು. ದಾವಣಗೆರೆ ಜಿಲ್ಲೆಯ ನಾನಾ ತಾಲೂಕುಗಳಿಂದಲೂ ಆಗಮಿಸಿದ್ದ ಭಕ್ತರು ಪೂಜೆ ಕಡೇಯವರೆಗೂ ತಲ್ಲೀನರಾಗಿ ಪಾಲ್ಗೊಂಡಿದ್ದರು. ಮೊಬೈಲ್‌ನಲ್ಲಿ ಪೋಟೋ ತೆಗೆಯುವುದು, ವಿಡಿಯೋ ಮಾಡುವುದು ಕಂಡು ಬಂತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ