ಆ್ಯಪ್ನಗರ

ಅಪಘಾತ: ಟಿವಿ ನಿರೂಪಕ, ಗಾಯಕಿ ಸಾವು(ಪರಿಷ್ಕೃತ)

ನಿಂತ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಕಿರುತೆರೆ ಕಲಾವಿದರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ನಗರ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ ನಡೆದಿದೆ.

Vijaya Karnataka 26 May 2018, 4:24 pm
ಹರಿಹರ : ನಿಂತ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಕಿರುತೆರೆ ಕಲಾವಿದರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ನಗರ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ ನಡೆದಿದೆ.
Vijaya Karnataka Web accident tv presenter singer death
ಅಪಘಾತ: ಟಿವಿ ನಿರೂಪಕ, ಗಾಯಕಿ ಸಾವು(ಪರಿಷ್ಕೃತ)


ಟಿವಿ ನಿರೂಪಕ ಚಂದನ್‌ ಯಾನೆ ಚಂದ್ರಶೇಖರ(42), ಗಾಯಕಿ ಸಂತೋಷಿ ಕೋಂ ಕಿರಣ್‌(36) ಮೃತ ದುರ್ದೈವಿಗಳು.

ಬೆಂಗಳೂರಿನಿಂದ ಬೆಳಗಾವಿ ಕಡೆಗೆ ಹೊರಟಿದ್ದ ಕಾರು ಮಧ್ಯರಾತ್ರಿ 2.30ರ ಸುಮಾರಿಗೆ ಹನಗವಾಡಿ ಕ್ರಾಸ್‌ ಬಳಿ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಚಂದನ್‌ ಹಾಗೂ ಸಂತೋಷಿ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ರಾಮಕೃಷ್ಣ ಹಾಗೂ ಪಕ್ಕದಲ್ಲಿ ಕುಳಿತಿದ್ದ ಅವರ ಪತ್ನಿ ಸುನಿತಾ ತೀವ್ರ ಗಾಯಗೊಂಡಿದ್ದಾರೆ.

ಲಾರಿ ಅಡಿ ನುಸುಳಿರುವ ಕಾರು ಟಯರ್‌ಗೆ ಡಿಕ್ಕಿಯಾಗಿದೆ. ತಕ್ಷ ಣ ಏರ್‌ ಬ್ಯಾಗ್‌ ಓಪನ್‌ ಆಗಿದ್ದರಿಂದ ಹಾಗೂ ಮುಂದಿನ ಆಸನಗಳು ಕೆಳಮಟ್ಟದಲ್ಲಿದ್ದರಿಂದ ಮುಂದೆ ಕುಳಿತವರು ಬದುಕುಳಿದಿದ್ದರೆ, ಮೇಲ್ಮಟ್ಟದಲ್ಲಿದ್ದ ಹಿಂದಿನ ಆಸನಗಳಲ್ಲಿ ಕುಳಿತವರ ತಲೆಗೆ ಲಾರಿಯ ಬಾಡಿಯ ಹೊಡೆತ ಬಿದ್ದಿದೆ. ಗಾಯಗೊಂಡವರನ್ನು ದಾವಣಗೆರೆ ಎಸ್‌.ಎಸ್‌.ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಬಂಧುಗಳ ರೋಧನ:

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶವಾಗಾರದ ಬಳಿ ಚಂದನ್‌ ತಂದೆ ಪ್ರಭು ಮೂರ್ತಿ ಹಾಗೂ ಸಂತೋಷಿ ಪತಿ ಕಿರಣ್‌ ಸೇರಿದಂತೆ ಮೃತರ ಬಂಧುಗಳ ರೋಧನ ಮುಗಿಲು ಮುಟ್ಟಿತ್ತು. ಗುರುವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಶವಗಳನ್ನು ಬೆಂಗಳೂರಿಗೆ ಕೊಂಡೊಯ್ಯಲಾಯಿತು. ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವರ: ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ಗುರುವಾರ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಕಲಾವಿದರು ರಾತ್ರಿ ಬೆಂಗಳೂರಿನಿಂದ ಹೊರಟಿದ್ದರು.

ಚಿಕ್ಕಬಳ್ಳಾಪುರ ಮೂಲದ ಚಂದನ್‌ ಆಕಸ್ಮಿಕವಾಗಿ ಮಾಧ್ಯಮ ಲೋಕಕ್ಕೆ ಕಾಲಿಟ್ಟವರು. ಮೊದಲಿಗೆ ಈಟಿವಿ ಕನ್ನಡದಲ್ಲಿ 'ನಮ್‌ ಊನ್ರ್ಯಾಗೆ' ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ನಂತರ ಉದಯ ಟಿವಿಯಲ್ಲಿ ನಿರೂಪಕರಾಗಿದ್ದ ಚಂದನ್‌ ತಮ್ಮ ವಿಭಿನ್ನ ನಿರೂಪಣೆ ಮೂಲಕ ಮನೆಮಾತಾದವರು. ಶುದ್ದ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಉಚ್ಚರಿಸುವಲ್ಲಿ ಚಂದನ್‌ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಅಣ್ಣಾವ್ರ ಅಪ್ಪಟ ಅಭಿಮಾನಿ ಚಂದನ್‌ ಕನ್ನಡವನ್ನು ಎಷ್ಟು ಪ್ರೀತಿ ಮಾಡುತ್ತಿದ್ದರೋ ಅಷ್ಟೇ ಪ್ರೀತಿ ಡಾ.ರಾಜಕುಮಾರ್‌ ಅವರ ಮೇಲಿತ್ತು. ಡಾ.ರಾಜಕುಮಾರ್‌ ಅವರ ಬಗ್ಗೆ ಮಾಹಿತಿ ಕಲೆ ಹಾಕಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ